ಯಡಿಯೂರಪ್ಪ ಅವರಿಗೆ ಬೂಮ್ರಾಂಗ್ ಆಯ್ತಾ ಲಿಂಗಾಯತ ಮೀಸಲಾತಿ?
ಬೆಂಗಳೂರು, ನ. 28: ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗದ ಮೀಸಲಾತಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಹೇಳಿದ ಒಂದು ದಿನದಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ನಿರ್ಧಾರಕ್ಕೆ ಯೂಟರ್ನ್ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಕೂಡಲ ಸಂಗಮ ಪಂಚಮಸಾಲಿ ಶ್ರೀಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭೇಟಿ ಮಾಡಿದ್ದರು. ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವು ಭರವಸೆ ಕೊಟ್ಟಿದ್ದರು.
ಆದರೆ ನಿನ್ನೆ (ನ.27) ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡುವುದರಿಂದ ಯಡಿಯೂರಪ್ಪ ಅವರು ಹಿಂದಕ್ಕೆ ಸರಿದಿದ್ದಾರೆ. ಇದಕ್ಕೆ ಲಿಂಗಾಯತ ಪಂಚಮಸಾಲಿ ಸಮುದಾಯದ ಶ್ರೀಗಳು ತೀವ್ರ ಆಕ್ಷೇಪ ವ್ಯಕ್ತಡಿಸಿದ್ದಾರೆ. ಜೊತೆಗೆ ಸಮುದಾಯದ ಬೇಡಿಕೆ ಈಡೇರಿಸುವಲ್ಲಿ ಯಡಿಯೂರಪ್ಪ ಅವರು ರಾಜಕೀಯ ಮಾಡಿದ್ದಾರೆ ಎಂಬ ಆರೋಪಗಳೂ ವ್ಯಕ್ತವಾಗಿವೆ.
ಯಡಿಯೂರಪ್ಪ ಅವರು ತಮ್ಮ ಸಿಎಂ ಸ್ಥಾನ ಭದ್ರಪಡಿಸಿಕೊಳ್ಳಲು ಲಿಂಗಾಯತ ಸಮುದಾಯವನ್ನು ಓಬಿಸಿ ಮೀಸಲಾತಿ ಪಟ್ಟಿಗೆ ಸೇರಿಸುವ ರಾಜಕೀಯ ಮಾಡಿದ್ದಾರೆ ಎಂಬ ಆರೋಪಗಳು ಲಿಂಗಾಯತ ಸಮುದಾಯದಲ್ಲಿ ಚರ್ಚೆ ಆಗುತ್ತಿವೆ. ಇದು ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರ ರಾಜಕೀಯ ಜೀನದ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು ಯೂಟರ್ನ್ ತೆಗೆದುಕೊಂಡಿದ್ದರ ಬಗ್ಗೆ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಮಹತ್ವದ ಎಚ್ಚರಿಕೆ ನೀಡಿದ್ದಾರೆ.

ಸಿಹಿ ಸುದ್ದಿ ಕೊಡುತ್ತೇನೆ ಎಂದಿದ್ದರು
ರಾಜ್ಯ ಸರ್ಕಾರದ 2 ಎ ಹಾಗೂ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ ಒದಗಿಸಬೇಕು ಎಂದು ಬೆಳಗಾವಿಯಲ್ಲಿ ಅಕ್ಟೋಬರ್ 28 ರಂದು ಉಪವಾಸ ಸತ್ಯಾಗ್ರಹ ಮಾಡಿದ್ದೆವು. ಒಂದುತಿಂಗಳೊಳಗೆ ಮೀಸಲಾತಿ ನಿರ್ಧಾರಕ್ಕೆ ಒತ್ತಾಯಿಸಿದ್ದೆವು. ನಮ್ಮ ಬೇಡಿಕೆ ಈಡೇರಿಸುವ ಭರವಸೆಯನ್ನು ಸಿಎಂ ಯಡಿಯೂರಪ್ಪ ಅವರು ಕೊಟ್ಟಿದ್ದರು. ನಿನ್ನೆ ಕೂಡ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆವು. ಆಗಲೂ ಸಿಹಿ ಸುದ್ದಿ ಕೊಡುತ್ತೇವೆ ಎಂದು ಹೇಳಿದ್ದರು ಎಂದು ಪಂಚಮಸಾಲಿ ಶ್ರೀಗಳು ಹೇಳಿದ್ದಾರೆ.

ಐತಿಹಾಸಿಕ ನಿರ್ಧಾರಕ್ಕೆ ಕಾಯ್ದಿದ್ದೆವು
ನಾವು ಕೂಡ ಯಡಿಯೂರಪ್ಪ ಅವರ ಐತಿಹಾಸಿಕ ನಿರ್ಧಾರಕ್ಕೆ ಕಾಯ್ದಿದ್ದೆವು. ಆದರೆ ನುಡಿದಂತೆ ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚೆಗೆ ಬಂದಿಲ್ಲ. ನಾವು ಇದರಿಂದ ನಿರಾಸೆಗೊಂಡಿಲ್ಲ. ಮುಂದಿನ ಸಂಪುಟದಲ್ಲಾದ್ರೂ ಚರ್ಚೆಗೆ ತೆಗೆದುಕೊಳ್ಳಬೇಕು. ಮುಂದಿನ ಸಂಪುಟ ಸಭೆಯಲ್ಲಿ ಇದರ ನಿರ್ಧಾರ ಹೊರಬೀಳಬೇಕು. ಕೊಟ್ಟ ಮಾತಿನಂತೆ ಯಡಿಯೂರಪ್ಪ ಅವರು ನಡೆದುಕೊಳ್ಳಬೇಕು. ಲಿಂಗಾಯತ ಸಮುದಾಯಕ್ಕೆ ರಾಜ್ಯ ಸರ್ಕಾರದ 2ಎ ಮೀಸಲಾತಿ ಕೊಡಬೇಕು. ಹಾಗೆಯೆ ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಪಂಚಮಸಾಲಿ ಶ್ರೀಗಳು ಆಗ್ರಹಿಸಿದ್ದಾರೆ.

ಕುಲಶಾಸ್ತ್ರ ಅಧ್ಯಯನಕ್ಕೆ ಸಮಿತಿ ರಚಿಸಿ
ಇದೆಲ್ಲವನ್ನೂ ಮಾಡಲು ಮೊದಲು ಕುಲಶಾಸ್ತ್ರ ಅಧ್ಯಯನಕ್ಕೆ ಸಮಿತಿ ರಚಿಸಬೇಕು. ಇಲ್ಲವಾದರೆ ಬರುವ ಡಿಸೆಂಬರ್ 23 ರಂದು ಕೂಡಲ ಸಂಗಮದಿಂದ ವಿಧಾನಸೌಧದ ವೆರೆಗೆ ವಿಧಾನಸೌಧ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಪಂಚಮಸಾಲಿ ಶ್ರೀಗಳು ಎಚ್ಚರಿಕೆ ರವಾನಿಸಿದ್ದಾರೆ.
ನಿಮ್ಮ ನಡುವಿನ ರಾಜಕೀಯ ವಿಚಾರ ಏನೇ ಇರಲಿ. ಅದು ನಮಗೆ ಸೇರಿದ್ದಲ್ಲ. ನಮಗೆ ಸಮುದಾಯವಷ್ಟೇ ಮುಖ್ಯ. ಈ ವಿಚಾರದಲ್ಲಿ ರಾಜಕೀಯ ತಲೆದೂರಬಾರದು. ರಾಜಕೀಯ ಹೊರತಾದ ಹೋರಾಟ ನಮ್ಮದು. ಎರಡು ಬಾರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಪದವಿ ಪಡೆಯಲು ಲಿಂಗಾಯತ ಸಮುದಾಯದ ಕೊಡುಗೆ ಸಾಕಷ್ಟಿದೆ. ಯಡಿಯೂರಪ್ಪ ಅವರಿಗೆ ರಾಜ್ಯದ ಶೇಕಡಾ 70ರಷ್ಟು ರಷ್ಟು ಪಂಚಮಸಾಲಿ ಸಮುದಾಯದ ಬೆಂಬಲವಿದೆ. ನೀವು ಯಾರನ್ನು ಮಂತ್ರಿ ಮಾಡ್ತಿರೋ ಬಿಡ್ತಿರೋ ಗೊತ್ತಿಲ್ಲ. ಆದರೆ ನಮಗೆ ಬೇಕಿರೋದು ಮೀಸಲಾತಿ ಮಾತ್ರ. ಸಮುದಾಯಕ್ಕೆ ನ್ಯಾಯ ಸಿಗಬೇಕಷ್ಟೇ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ.
Recommended Video

ಹೋರಾಟದ ರೂಪುರೇಷೆ
ಈ ವಿಚಾರದಲ್ಲಿ ಯಾವುದೇ ವಿಳಂಬ ಬೇಡ. ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ನೀವಲ್ಲದೆ ಯಾರು ಇದನ್ನು ಮಾಡುವುದಕ್ಕೆ ಸಾಧ್ಯ? ಯಡಿಯೂರಪ್ಪ ಅವರು ಅಮಿತ್ ಶಾ ಜೊತೆ ಬೇಕಾದರೂ ಮಾತನಾಡಲಿ, ಪ್ರಧಾನಿ ಅವರ ಜೊತೆಯಾದರೂ ಮಾತನಾಡಲಿ. ಆದರೆ ನಮ್ಮ ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮ ಸಮುದಾಯದ ಮುಖಂಡರ ಜೊತೆ ಚರ್ಚೆ ಮಾಡಿ, ಸಮುದಾಯದ ಜನಪ್ರತಿನಿಧಿಗಳ ಜೊತೆಗೆ ಸಭೆ ಮಾಡುತ್ತೇವೆ. ಆ ನಂತರ ಹೋರಾಟದ ರೂಪುರೇಷೆ ಮಾಡುತ್ತೇವೆ ಎಂದಿದ್ದಾರೆ.
ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ನಿಂದ ಸೂಚನೆ ಬರುತ್ತಲೇ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಶಿಫಾರಸು ವಿಷಯವನ್ನು ಸಂಪುಟದಿಂದ ಕೈಬಿಡಲಾಗಿದೆಯಾ? ಎಂಬ ಪ್ರಶ್ನೆಗೆ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಇಲ್ಲಿ ರಾಜಕಾರಣವನ್ನು ಮಾಡಬಾರದು. ಇದು ನಮ್ಮ ಸಮುದಾಯದ ಅಸ್ಮಿತೆ. ಯಡಿಯೂರಪ್ಪ ಅವರು ರಾಜಕಾರಣ ಮಾಡದೆ ನಿರ್ಧಾರ ತೆಗೆದುಕೊಳ್ಳಬೇಕು. ತಕ್ಷಣ ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.












Click it and Unblock the Notifications