ಸಚಿವರಾಗುವ ಶಾಸಕರ ಆಸೆಗೆ ನೀರು ಸುರಿದ ಆಶ್ಲೇಷ ಮಳೆ!
ಬೆಂಗಳೂರು, ಆಗಸ್ಟ್ 07 : ಕರ್ನಾಟಕದ ಸಚಿವ ಸಂಪುಟ ವಿಸ್ತರಣೆ ಯಾವಾಗ?. ಆಡಳಿತ ಪಕ್ಷದ ಶಾಸಕರು ಮಾತ್ರವಲ್ಲ. ಪ್ರತಿಪಕ್ಷ ಸಹ ಮುಖ್ಯಮಂತ್ರಿಗಳ ಮುಂದೆ ಈ ಪ್ರಶ್ನೆಯನ್ನು ಇಟ್ಟಿತ್ತು. ಸಚಿವರಾಗುವ ಶಾಸಕರ ಆಸೆಗೆ ಮಳೆ ತಣ್ಣೀರು ಸುರಿದಿದೆ.
ಎರಡು ದಿನಗಳಿಂದ ದೆಹಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತುರ್ತಾಗಿ ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಸಂಬಂಧ ಚರ್ಚೆ ಮಾಡಲು ಹೋಗಿದ್ದ ಅವರು ಪ್ರವಾಸ ಮೊಟಕುಗೊಳಿಸಿದ್ದಾರೆ.
ಜುಲೈ 26ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ, ಇದುವರೆಗೂ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಬಿಜೆಪಿ ಹೈಕಮಾಂಡ್ ನಾಯಕರು ಲೋಕಸಭಾ ಕಲಾಪದಲ್ಲಿ ಬ್ಯುಸಿಯಾಗಿದ್ದು, ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಸಿಕ್ಕಿಲ್ಲ.
ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ, ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಯಾವುದೇ ಸಚಿವರು ಇರದ ಕಾರಣ ಪರಿಹಾರ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ....

ಜೆ. ಪಿ. ನಡ್ಡಾ ಭೇಟಿ
ಮಂಗಳವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯದ ಸಂಸದರ ಜೊತೆ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ. ಪಿ.ನಡ್ಡಾ ಭೇಟಿ ಮಾಡಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಇತರ ನಾಯಕರ ಜೊತೆ ಬುಧವಾರ ಸಭೆ ನಡೆಯಬೇಕಿತ್ತು. ಆದರೆ, ಸುಷ್ಮಾ ಸ್ವರಾಜ್ ವಿಧಿವಶರಾದ ಹಿನ್ನಲೆಯಲ್ಲಿ ಎಲ್ಲಾ ಸಭೆಗಳನ್ನು ಮುಂದೂಡಲಾಗಿದೆ.

ಅಮಿತ್ ಶಾ ಜೊತೆ ಚರ್ಚೆ
ಯಡಿಯೂರಪ್ಪ ಬುಧವಾರ ಅಮಿತ್ ಶಾರನ್ನು ಸಂಸತ್ ಭವನದಲ್ಲಿ ಭೇಟಿ ಮಾಡಿದರು. ಕೆಲವು ನಿಮಿಷ ಮಾತ್ರ ಉಭಯ ನಾಯಕರ ನಡುವೆ ಮಾತುಕತೆ ನಡೆದಿದೆ. ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಕೊಡಿ. ಮುಂದಿನ ವಾರ ದೆಹಲಿಗೆ ಬನ್ನಿ ಎಂದು ಸೂಚನೆಯನ್ನು ಅಮಿತ್ ಶಾ ಕೊಟ್ಟಿದ್ದಾರೆ.

20 ಶಾಸಕರ ಪಟ್ಟಿ
ಯಡಿಯೂರಪ್ಪ ಮೊದಲ ಹಂತದಲ್ಲಿ 20 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಆದರೆ, ಅಮಿತ್ ಶಾ ಇನ್ನೂ ಈ ಪಟ್ಟಿಗೆ ಒಪ್ಪಿಗೆ ಕೊಟ್ಟಿಲ್ಲ. ಹೈಕಮಾಂಡ್ ನಾಯಕರ ಬಳಿ ಇನ್ನೂ 2 ಪಟ್ಟಿ ಇದ್ದು, ಅಚ್ಚರಿಯ ಹೆಸರುಗಳು ಇವೆ ಎನ್ನುವುದು ಪಕ್ಷದ ಮೂಲಗಳ ಮಾಹಿತಿ.

ಮುಂದಿನ ವಾರ ಸಂಪುಟ ವಿಸ್ತರಣೆ
ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ದೆಹಲಿಯಿಂದ ಇಂದು ವಾಪಸ್ ಆಗಲಿರುವ ಯಡಿಯೂರಪ್ಪ ಪ್ರವಾಹ ಪೀಡಿತ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಹೈಕಮಾಂಡ್ ಒಪ್ಪಿಗೆ ಸಿಕ್ಕಿದ ಬಳಿಕ ಸಂಪುಟ ವಿಸ್ತರಣೆ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ.












Click it and Unblock the Notifications