ಯಡಿಯೂರಪ್ಪ ಎದುರಲ್ಲೇ ಸಚಿವರಿಬ್ಬರ ಜಗಳ, ಆಯಿತು ಬಹಿರಂಗ!
ಬೆಂಗಳೂರು, ಮೇ 15: ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ಸಭೆಯಲ್ಲಿ ನಡೆದ ಸಚಿವರಿಬ್ಬರ ಜಗಳ ಬಹಿರಂಗವಾಗಿದೆ.
ಬೆಂಗಳೂರು ಬಿಡಿಎ ವಿಷಯವಾಗಿ ಯಡಿಯೂರಪ್ಪ ಆಪ್ತ ಸಚಿವರಿಬ್ಬರು, ಯಡಿಯೂರಪ್ಪ ಅವರ ಸಮ್ಮುಖದಲ್ಲೇ ಕಿತ್ತಾಡಿಕೊಂಡಿದ್ದಾರೆ. ಏಕವಚನದಲ್ಲಿ ಪರಸ್ಪರ ಬೈದಾಡಿಕೊಂಡಿದ್ದಾರೆ.
ಬೆಂಗಳೂರು ನಗರದಲ್ಲಿ ಬಿಡಿಎ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದ 75,000 ಮಂದಿ ಬಡವರಿಗೆ ಮನೆಗಳನ್ನು ಅವರ ಹೆಸರಿಗೆ ಮಾಡಿಕೊಡುವ ಪ್ರಸ್ತಾವನೆಯನ್ನು ವಸತಿ ಸಚಿವ ವಿ ಸೋಮಣ್ಣ ಕ್ಯಾಬಿನೆಟ್ ಮುಂದೆ ಪ್ರಸ್ತಾಪಿಸಿದರು.
ಕೊರೊನಾ ವಿರುದ್ಧ ರಾಮಬಾಣ ಬಿಡೋಣ: ಸಚಿವ ಸೋಮಣ್ಣ
ಇದಕ್ಕೆ ಕಾನೂನು ಮಂತ್ರಿ ಮಾಧುಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದು ಕಾನೂನಿಗೆ ವಿರೋಧ. ಮೊದಲು ರಾಷ್ಟ್ರಪತಿಗೆ ಕಳುಹಿಸಬೇಕು. ಆದ್ದರಿಂದ ಸದ್ಯ ಅದರ ಪ್ರಸ್ತಾವನೆ ಬೇಡ ಎಂದಿದ್ದಕ್ಕೆ ಇಬ್ಬರೂ ಸಚಿವರು ಪರಸ್ಪರ ಏರುದನಿಯಲ್ಲಿ ಬೈದಾಡಿಕೊಂಡಿದ್ದಾರೆ ಎಂದು ಕೆಲ ಖಾಸಗಿ ಸುದ್ದಿ ವಾಹಿನಿಗಳು ವರದಿ ಮಾಡಿವೆ.
ನೀನು ಎಲ್ಲದಕ್ಕೂ ಮೂಗು ತೋರಿಸಬೇಡ
ಸಚಿವ ಮಾಧುಸ್ವಾಮಿ ಮಾತಿಗೆ ತಾಳ್ಮೆ ಕಳೆದುಕೊಂಡ ವಸತಿ ಸಚಿವ ವಿ ಸೋಮಣ್ಣ, ''ನಾನು 25 ವರ್ಷಗಳ ಹಿಂದೆಯೇ ಬಿಡಿಯ ಮಿನಿಸ್ಟರ್ ಆಗಿದ್ದವನು. ಬೆಂಗಳೂರು ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಬೆಂಗಳೂರು ಜನ ಕಷ್ಟಪ್ಟಟು ಮನೆ ಕಟ್ಟಿಕೊಂಡಿದ್ದರೆ ಆ ಜಾಗದಲ್ಲಿ ಬಿಡಿಎ ಅಧಿಸೂಚನೆ ಹೊರಡಿಸಿದ್ದಾರೆ. ಇದರಿಂದ 40 ವರ್ಷಗಳಿಂದ ಬಡವರು ತೊಂದರೆ ಅನುಭವಿಸುತ್ತಿದ್ದಾರೆ. ನಾವು ಅವರ ಹೆಸರಿಗೆ ಮನೆ ಮಾಡಿ ಕೊಡುವುದಾದರೆ ಸುಮಾರು ಹತ್ತು ಲಕ್ಷ ಮಂದಿಗೆ ಸಹಾಯವಾಗುತ್ತದೆ. ನಿನಗೇನು ಗೊತ್ತಿಲ್ಲ ಮಾಧುಸ್ವಾಮಿ, ಬೆಂಗಳೂರಿಗರ ಕಷ್ಟ ಏನು ಅಂತ ಗೊತ್ತಾ ನಿನಗೆ? ನೀನು ಎಲ್ಲದಕ್ಕೂ ಮೂಗು ತೋರಿಸಬೇಡ'' ಎಂದು ಗುಡುಗಿದ್ದಾರೆ.
ನಾನು ಲಾ ಮಂತ್ರಿ
ಇದಕ್ಕೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ''ನಾನು ಲಾ ಮಂತ್ರಿ ನನಗೆ ಕಾನೂನು ಕುರಿತಂತೆ ಹೇಳುವ ಅಧಿಕಾರವಿದೆ. ನಿನ್ನನ್ನು ಕೇಳಿ ನಾನು ತಿಳಿದುಕೊಳ್ಳುವ ಅಗತ್ಯವಿಲ್ಲ'' ಎಂದು ಮಾಧುಸ್ವಾಮಿ ವಿ ಸೋಮಣ್ಣಗೆ ತಿರುಗೇಟು ನೀಡಿದರು.
ಹತ್ತು ನಿಮಿಷಗಳ ಕಾಲ ಜಗಳ
ಈ ಹಂತದಲ್ಲಿ ಹತ್ತು ನಿಮಿಷಗಳ ಕಾಲ ಇಬ್ಬರು ಮಂತ್ರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸಚಿವರಾದ ಎಸ್ ಟಿ ಸೋಮಶೇಖರ್ ಮತ್ತು ಆರ್ ಅಶೋಕ್ ವಿ ಸೋಮಣ್ಣ ಅವರನ್ನು ಬೆಂಬಲಿಸಿದರು. ಕರ್ನಾಟಕಕ್ಕೆ ಆದಾಯದ ಮೂಲವೇ ಬೆಂಗಳೂರು. ಬಿಡಿಯ ಯೋಜನೆಯಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಯೋಜನೆ ಜಾರಿ ಮಾಡೋಣ ಇದಕ್ಕೆ ವಿರೋಧ ಮಾಡುವುದು ಬೇಡ ಎಂದು ಸೋಮಣ್ಣ ಅವರನ್ನು ಸಮರ್ಥಿಸಿಕೊಂಡರು.
ಮಾಧುಸ್ವಾಮಿ ನೀವು ಸುಮ್ಮನಿರಿ
ಆಗ ''ಅಧಿಸೂಚನೆಗೆ ರಾಷ್ಟ್ರಪತಿಗಳ ಅನುಮತಿ ಬೇಕಿಲ್ಲ. ಕರ್ನಾಟಕದಲ್ಲಿಯೇ ಕಾನೂನು ಮಾಡಬಹುದು'' ಎಂದು ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸಲಹೆ ನೀಡಿದರು. ಮಧ್ಯಪ್ರವೇಶಿಸಿದ ಸಿಎಂ ಯಡಿಯೂರಪ್ಪ, ''ಮಾಧುಸ್ವಾಮಿ ನೀವು ಸುಮ್ಮನಿರಿ, ಸೋಮಣ್ಣ ಮಾತನಾಡಲಿ. ಈ ಪ್ರಸ್ತಾವನೆ ಜಾರಿ ಮಾಡೋಣ'' ಎಂದು ಹೇಳಿ ಬೆಂಗಳೂರಿಗರಿಗೆ ವರದಾನವಾಗಿರುವ ಅಕ್ರಮ ಸಕ್ರಮ ಯೋಜನೆ ಜಾರಿಗೊಳಿಸಿದರು.