ದಯೆ ಇಲ್ಲದ ಮೋದಿಯೆದುರು ದೀನವಾಗಿ ಅಂಗಲಾಚುತ್ತಿರುವ ಯಡಿಯೂರಪ್ಪ
ಬೆಂಗಳೂರು, ಅಕ್ಟೋಬರ್ 04: ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ದಲ್ಲಿ ಎದ್ದಿರುವ ಪ್ರವಾಹಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ ನಂತರ ಕನ್ನಡಿಗರ ಆಕ್ರೋಶದ ಕಟ್ಟೆ ಒಡೆದಿದೆ. 'ನಾವು ಮುಳುಗುತ್ತಿದ್ದೇವೆ ಕೈ ಚಾಚಿ' ಎಂದು ತಿಂಗಳುಗಳಿಂದ ಕೇಂದ್ರದೆಡೆ ಮುಖ ಮಾಡಿ ಬೇಡಿಕೊಳ್ಳುತ್ತಿದ್ದರೂ ಕರ್ನಾಟಕದತ್ತ ಕಣ್ಣೆತ್ತಿಯೂ ನೋಡದ ಮೋದಿ ಬಿಹಾರದ ನೋವಿಗೆ ಮಾತ್ರ ಶೀಘ್ರವಾಗಿ ಸ್ಪಂದಿಸಿದ್ದಾರೆ. ಮೋದಿಯ ತಾರತಮ್ಯ ಕನ್ನಡಿಗರ ಸ್ವಾಭಿಮಾನ ಕೆಣಕಿದೆ.
ಸಾರ್ವಜನಿಕರು ಬಿಡಿ ಸ್ವತಃ ಸಿಎಂ ಯಡಿಯೂರಪ್ಪ ಅವರೇ ಹತಾಶ ಸ್ಥಿತಿಗೆ ತಲುಪಿಬಿಟ್ಟಿದ್ದಾರೆ. ಒಂದಲ್ಲ, ಎರಡಲ್ಲ ಮೂರು ಭಾರಿ ಯಡಿಯೂರಪ್ಪ ಅವರು ಮೋದಿ ಅವರನ್ನು ಭೇಟಿ ಆಗಲು ದೆಹಲಿಗೆ ತೆರಳಿದ್ದರು ಆದರೆ ಅವರ ದರ್ಶನ ಭಾಗ್ಯ ದೊರೆತದ್ದು ಒಂದು ಬಾರಿ ಮಾತ್ರ. ಚುನಾವಣಾ ಪ್ರಚಾರಕ್ಕೆ ಬಂದಾಗ ಯಡಿಯೂರಪ್ಪ ಅವರ ಅಪ್ಪಿ ಮುದ್ದಾಡಿದ್ದ ಮೋದಿ, ತಮ್ಮ ಅಂಗಳಕ್ಕೆ ಸಹಾಯ ಕೇಳಿ ಬಂದಾಗ ಮಾತ್ರ ಗಂಟೆಗಟ್ಟಲೆ ಕಾಯಿಸಿಬಿಟ್ಟರು. ಇದು ಮೋದಿಯ ದೊಡ್ಡ ಗುಣ!?
ಯಡಿಯೂರಪ್ಪ ಅವರು ಹತಾಶರಾಗಿದ್ದಾರೆ. ಅವರ ಹತಾಶೆ ಯಾವ ಮಟ್ಟ ತಲುಪಿದೆಯೆಂದರೆ 'ರಾಜ್ಯ ಬೊಕ್ಕಸದಲ್ಲಿ ಹಣವಿಲ್ಲ' ಎಂದು ಬಹಿರಂಗವಾಗಿಯೇ ಹೇಳಿಬಿಟ್ಟಿದ್ದಾರೆ. ಇದಕ್ಕೂ ಮುಂದಕ್ಕೆ ತಮಗೆ ಇನ್ನೇನೂ ಮಾಡಲು ಸಾಧ್ಯವಿಲ್ಲವೆಂದು ಸೂಚ್ಯವಾಗಿ ಅವರು ಹೇಳಿಯಾಗಿದೆ. ಇನ್ನೇನಿದ್ದರೂ ಕೇಂದ್ರದ ಮೇಲೆ ಭರವಸೆ ಇಡೋಣವೆಂದೂ ಅವರು ಹೇಳಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಹೀಗೆಯೇ ಮಾಡಿದ್ದರು
ಇದು ರಾಜ್ಯಕ್ಕೆ ಹೊಸದೇನೂ ಅಲ್ಲ, ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಮೋದಿ ಇಂತಹುದೇ ನಿರ್ಲಕ್ಷ್ಯ ತೋರಿಸಿದ್ದರು. ಪ್ರವಾಹಕ್ಕೆ ನೆರವು ನೀಡಿರೆಂದು ಕೇಳಲು ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಇನ್ನೂ ಕೆಲವು ಸಚಿವರು ಹೋಗಿದ್ದರೆ, 'ಏನು ದೇವೇಗೌಡರೆ ಸಂಪುಟ ಕರೆತರುತ್ತೀನಿ ಎಂದು ಹೇಳಿ ಕುಟುಂಬವನ್ನು ಕರೆತಂದಿದ್ದೀರಲ್ಲಾ' ಎಂದು ರಾಜಕೀಯ ಲೇಪಿತ ವ್ಯಂಗ್ಯ ಮಾಡಿ ನಕ್ಕು ದಾರ್ಷ್ಟ್ಯ ಮೆರೆದಿದ್ದರು ಮೋದಿ. ಇಂತಹ ದಕ್ಷಿಣ ದ್ವೇಷಿಯೆಂದು ಹೆಚ್ಚಿನದ್ದೇನನ್ನು ನಿರೀಕ್ಷಿಸಬಹುದು?

ಯಡಿಯೂರಪ್ಪ ಅವರ ಹಣಿಯಲು ಪರಿಹಾರ ವಿಳಂಬ?
ನೆರೆ ಪರಿಹಾರ ನೀಡಲು ವಿಳಂಬ ಮಾಡುವ ಹಿಂದೆ ಯಡಿಯೂರಪ್ಪ ಅವರನ್ನು ಹಣಿಯುವ ತಂತ್ರವೂ ಇದೆ ಎಂದು ಬಿಜೆಪಿಗರೇ ಮಾತನಾಡುತ್ತಿದ್ದಾರೆ. ಮಾಜಿ ಕೇಂದ್ರ ಸಚಿವ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರೇ ಈ ಬಗ್ಗೆ ಬಹಿರಂಗವಾಗಿ ಹೇಳಿದ್ದು, 'ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತರಲೆಂದು ಬೇಕೆಂದೇ ಪರಿಹಾರವನ್ನು ವಿಳಂಬ ಮಾಡುತ್ತಿದ್ದಾರೆ' ಎಂದಿದ್ದಾರೆ.ಇದ್ದಾರೆ. ಈ ಕೆಟ್ಟ ಪ್ರವಾಹ ರಾಜಕಾರಣದ ಹಿಂದೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸತೋಶ್ ಇರುವುದಾಗಿಯೂ ಅವರು ಹೇಳ ಹಿರಿಯ ಬಿಜೆಪಿ ಸದಸ್ಯರ ಬಸನಗೌಡ ಪಾಟೀಲ್ ಅವರ ಮಾತನ್ನು ಸುಲಭಕ್ಕೆ ತಳ್ಳಿ ಹಾಕುವಂತಿಲ್ಲ. ನೆರೆ ಪರಿಹಾರದಲ್ಲೂ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿರುವುದು ಅತ್ಯಂತ ಹೇಯ.

ಮೋದಿ ಮರ್ಜಿಯಲ್ಲಿ ಬದುಕುತ್ತಿರುವ ಬಿಜೆಪಿ ಸಂಸದರು
ಇನ್ನು ನಮ್ಮ ರಾಜ್ಯದ ಬಿಜೆಪಿ ಸಂಸದರನ್ನು ಪ್ರಶ್ನಿಸುವಂತೆಯೇ ಇಲ್ಲ ಬಿಡಿ. ಸ್ವಂತ ಬಲದಿಂದ ಗೆದ್ದಿದ್ದರೆ ಜವಾಬ್ದಾರಿ, ಹೊಣೆಗಾರಿಕೆ ಇರುತ್ತಿತ್ತು, ಕನಿಷ್ಟ ಪಕ್ಷ ಮೋದಿ ಮರ್ಜಿಯಿಂದಾದರೂ ಹೊರಗೆ ಉಳಿಯುತ್ತಿದ್ದರು. ಗೆದ್ದಿರುವುದೇ ಮೋದಿ ಹೆಸರಿನ ಮೇಲೆ ಅವರನ್ನೇ ಪ್ರಶ್ನೆ ಮಾಡಿದರೆ ಮೋದಿ ಮೂರನೇ ಕಣ್ಣು ಬಿಡದೇ ಇರುತ್ತಾರೆಯೇ? ಹಾಗಾಗಿ ಮೋದಿ ತಿಂದಿದ್ದಕ್ಕೆ, ತೇಗಿದ್ದಕ್ಕೆ ಜೈಕಾರಗಳು ಹಾಕುತ್ತಾ ಮೋದಿ ಹಿಂದೆ ಡೋಲು ಬಡಿದುಕೊಂಡು ಓಡಾಡುತ್ತಿದ್ದಾರೆ. ಈ ಸಂಸದರು ತಮ್ಮ ಸ್ವಾಭಿಮಾನವನ್ನು ಎಷ್ಟರ ಮಟ್ಟಿಗೆ ಮೋದಿ ಪಾದಗಳಿಗೆ ಅಡವಿಟ್ಟಿದ್ದಾರೆಂದರೆ ಮೋದಿಯನ್ನು ಗೌರವಯುತವಾಗಿ ಟೀಕಿಸಿದರೂ ಸಹ ಇವರ ಹಿಂಭಾಗಕ್ಕೆ ಬೆಂಕಿ ಬಿದ್ದುಬಿಡುತ್ತದೆ.

ಗಂಜಿ ಕೇಂದ್ರದಲ್ಲಿ ಅನ್ನಕ್ಕೆ ಸಾಲುಗಟ್ಟಿ ನಿಲ್ಲುವುದು ನಿಂತಿಲ್ಲ
ಪ್ರವಾಹದಿಂದ ಮನೆ ಕಳೆದುಕೊಂಡವರು ಗಂಜಿ ಕೇಂದ್ರಗಳಲ್ಲಿ ಅನ್ನಕ್ಕೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ, ನಮ್ಮ ಮನೆ ಮರಳಿ ಸಿಗುತ್ತದೆ ಎಂಬ ಭರವಸೆ ಯಾವ ಸರ್ಕಾರವಾಗಲಿ, ಜನಪ್ರತಿನಿಧಿಯಾಗಲಿ ಈ ವರೆಗೆ ಕೊಟ್ಟಿಲ್ಲ. ನೆರೆ ಬಂದ ಪ್ರದೇಶದಲ್ಲಿ ಸುಮಾರು 8000 ಸರ್ಕಾರಿ ಶಾಲೆಗಳು ಶಿಥಿಲಗೊಂಡಿವೆ, ಒಂದು ಶಾಲೆಯೂ ಇನ್ನೂ ರಿಪೇರಿಯಾಗಿಲ್ಲ, ಕೆಲವು ಶಾಲೆಗಳು ತೆರೆದೇ ಇಲ್ಲ. ನೆರೆ ಬಂದ ನಂತರ ಆಸ್ತಿ-ಪಾಸ್ತಿ ಹಾನಿಯಾಗಿ ಸರ್ಕಾರದಿಂದ ಸೂಕ್ತ ಭರವಸೆ ಸಿಗದೆ ಮನನೊಂದು ಈ ವರೆಗೆ ಮೂರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಖ್ಯೆ ಹೆಚ್ಚಾಗುವ ಮೊದಲು ಸಿಎಂ ಯಡಿಯೂರಪ್ಪ ಅವರು ಸ್ಪಷ್ಟ ನಿರ್ಣಯವೊಂದನ್ನು ಕೈಗೊಳ್ಳಬೇಕಿದೆ.

ಮೋದಿ ಮರ್ಜಿಯಲ್ಲಿ ನಾನಿಲ್ಲವೆಂದು ಸಾರಬೇಕಿದೆ ಯಡಿಯೂರಪ್ಪ
ಮೋದಿಯ ದಿವ್ಯ ನಿರ್ಲಕ್ಷ್ಯಕ್ಕೆ ಯಡಿಯೂರಪ್ಪ ಅವರು ಸೂಕ್ತ ಉತ್ತರಕೊಡುವ ಸಮಯ ಬಂದಿದೆ. ನಿಮ್ಮ ಮರ್ಜಿಯಲ್ಲಿ ನಾವು ಇರುವುದಿಲ್ಲ, ನಮ್ಮ ಹಕ್ಕು ನಮಗೆ ನೀಡಿ ಎಂದು ಯಡಿಯೂರಪ್ಪ ಅವರು ಹಕ್ಕೊತ್ತಾಯ ಈಗ ಮಾಡಲೇ ಬೇಕಿದೆ. ತೆರಿಗೆ ತೆಗೆದುಕೊಳ್ಳುವ ಸಮಯದಲ್ಲಿ ನಾಜೂಕಾಗಿ ರಾಜ್ಯಗಳಿಂದ ಅರ್ಧ ತೆರಿಗೆ ಲಪಟಾಯಿಸುವ ಕೇಂದ್ರ ಕೊಡಬೇಕಾದಾಗ ಮಾತ್ರ ಮುಖ ಸಿಂಡರಿಸಿಕೊಳ್ಳುತ್ತವೆ, ಇದನ್ನು ರಾಜ್ಯದ ಜನರ ಪರವಾಗಿ ಯಡಿಯೂರಪ್ಪ ಅವರು ಪ್ರಶ್ನೆ ಮಾಡಬೇಕಿದೆ. ಅವರಿಗೆ ಆ ಶಕ್ತಿಯೂ ಇದೆ. ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಕಟ್ಟಿದಾಗ ಮೋದಿ ಇನ್ನೂ ಚಹಾ ಮಾರುತ್ತಿದ್ದರೋ ಏನೋ ಅವರ ಮರ್ಜಿಗೆ ಬೀಳುವ ದರ್ದು ಯಡಿಯೂರಪ್ಪ ಗೆ ಇಲ್ಲ.












Click it and Unblock the Notifications