ಪಂಚ ರಾಜ್ಯ ಚುನಾವಣೆ ಫಲಿತಾಂಶ: ಎಚ್ಚೆತ್ತ ಬಿಎಸ್ವೈ, ಸಭೆಗೆ ನಿರ್ಧಾರ
ಬೆಂಗಳೂರು, ಡಿಸೆಂಬರ್ 13: ಪಂಚ ರಾಜ್ಯ ಚುನಾವಣೆ ಫಲಿತಾಂಶ ರಾಜ್ಯ ಬಿಜೆಪಿಯ ಆಸೆಗಳಿಗೆ ತಣ್ಣೀರು ಎರಚಿದೆ. ರಾಜ್ಯ ಬಿಜೆಪಿಗೆ ಈಗ ಅಧಿಕಾರ ಹಿಡಿಯುವುದಕ್ಕಿಂತಲೂ ಲೋಕಸಭೆ ಚುನಾವಣೆಯಲ್ಲಿ ಮಾನ ಉಳಿಸಿಕೊಳ್ಳುವುದು ಮುಖ್ಯವಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ಸಹ ಪಂಚ ರಾಜ್ಯ ಚುನಾವಣೆಯ ಫಲಿತಾಂಶದಿಂದ ಜಾಗೃತಗೊಂಡಿದ್ದು, ಅಧಿವೇಶನ ಮುಗಿದ ಕೂಡಲೇ ಬಿಜೆಪಿ ಪದಾಧಿಕಾರಿಗಳ ಸಭೆಗೆ ಕರೆ ನೀಡಿದ್ದಾರೆ. ದಿನಾಂಕ ಇನ್ನಷ್ಟೆ ನಿಗದಿ ಆಗಬೇಕಿದೆ.
ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರ ಸ್ಥಾನಕ್ಕೇರುವ ಕನಸು ಕಾಣುತ್ತಿದ್ದ ಬಿಜೆಪಿಗೆ ಪಂಚ ರಾಜ್ಯ ಚುನಾವಣೆ ಭಾರಿ ಹಿನ್ನಡೆಯನ್ನೇ ಮಾಡಿದೆ. ಈಗ ರಾಜ್ಯ ಬಿಜೆಪಿಯ ಚಿತ್ತ ಲೋಕಸಭೆ ಚುನಾವಣೆಯ ಕಡೆಗೆ ತಿರುಗಿದೆ.

ಲೋಕಸಭೆ ಚುನಾವಣೆ ಕಡೆ ಗಮನ
ಲೋಕಸಭೆ ಚುನಾವಣೆಯನ್ನೂ ಸಹ ಯಡಿಯೂರಪ್ಪ ಅವರ ಮುಖಂಡತ್ವದಲ್ಲೇ ಸ್ಪರ್ಧಿಸುವುದಾಗಿ ಈಗಾಗಲೆ ಅಮಿತ್ ಶಾ ಘೋಷಿಸಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರು ಆ ಬಗ್ಗೆ ಹೆಚ್ಚಿನ ಗಮನವಹಿಸಲು ನಿರ್ಣಯಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಹೈಕಮಾಂಡ್ ಕೂಡ ಅದೇ ಸೂಚನೆಯನ್ನು ರಾಜ್ಯಕ್ಕೆ ಕಳುಹಿಸಿದೆ.

ಅಧಿವೇಶನ ಮುಗಿದ ಕೂಡಲೇ ಸಭೆ
ಬೆಳಗಾವಿ ಅಧಿವೇಶನ ಮುಗಿದ ಕೂಡಲೇ ಪದಾಧಿಕಾರಿಗಳ ಸಭೆಯನ್ನು ಯಡಿಯೂರಪ್ಪ ಅವರು ಕರೆಯುತ್ತಿರುವ ಕಾರಣ ಲೋಕಸಭೆ ಚುನಾವಣೆ ಬಗ್ಗೆ ಕೂಡಲೇ ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ಜಾಗೃತರನ್ನಾಗಿಸಲು. ಈ ಸಭೆಯಲ್ಲಿ ರಾಜ್ಯ ಪ್ರಮುಖ ನಾಯಕರು ಮತ್ತು ರಾಷ್ಟ್ರಮಟ್ಟದ ಪ್ರಮುಖ ನಾಯರು ಭಾಗವಹಿಸಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ಕರೆಯಲಿರುವ ಶಾ
ಸಂಸತ್ ಅಧಿವೇಶನ ಮುಗಿದ ಕೂಡಲೇ ಅಮಿತ್ ಶಾ ಅವರು ಬಿಜೆಪಿ ರಾಜ್ಯಾಧ್ಯಕ್ಷರ ಸಭೆಯೊಂದನ್ನು ದೆಹಲಿಯಲ್ಲಿ ಕರೆದಿದ್ದಾರೆ. ಅಲ್ಲಿ ಲೋಕಸಭೆ ಚುನಾವಣೆಯ ವಿಷಯಗಳ ಬಗ್ಗೆ ಚರ್ಚೆ ಆಗಲಿದೆ. ಅಮಿತ್ ಶಾ ಅವರೇ ರಾಜ್ಯಾಧ್ಯಕ್ಷರುಗಳಿಗೆ ಅಭ್ಯರ್ಥಿ ಆಯ್ಕೆ, ಪ್ರಚಾರ ಸೇರಿದಂತೆ ಇನ್ನೂ ಕೆಲವು ವಿಚಾರಗಳಲ್ಲಿ ಮಾನದಂಡಗಳನ್ನು ನೀಡಲಿದ್ದಾರೆ. ಆ ಸಭೆಯ ಬಳಿಕ ರಾಜ್ಯದಲ್ಲಿ ಬಿಜೆಪಿ ಸಭೆ ನಡೆಯಲಿದೆ.

ಪಂಚ ರಾಜ್ಯ ಸೋಲಿನಿಂದ ಬಿಜೆಪಿ ಹಿನ್ನಡೆ
ಪಂಚ ರಾಜ್ಯ ಸೋಲಿನಿಂದ ಬಿಜೆಪಿಗೆ ತೀವ್ರ ಹಿನ್ನಡೆ ಆಗಿದ್ದು, ಲೋಕಸಭೆ ಚುನಾವಣೆ ಸಮೀಪದಲ್ಲಿದ್ದಾಗ ಉಂಟಾಧ ಸೋಲಿನಿಂದ ಹೊರಬರಲು ಹಲವು ಯತ್ನಗಳನ್ನು ಮಾಡಲು ಮುಂದಾಗಿದೆ. ರಾಜ್ಯ ಬಿಜೆಪಿ ಸಹ ಮೈತ್ರಿ ಸರ್ಕಾರವನ್ನು ಬೀಳಿಸುವ ಯೋಚನೆಯನ್ನು ಬದುಗಿಟ್ಟು ಲೋಕಸಭೆ ಚುನಾವಣೆ ಕಡೆ ಗಮನವಹಿಸಲಿದೆ.












Click it and Unblock the Notifications