ಮಹತ್ವದ ಬೆಳವಣಿಗೆ: ಡಿ.ಕೆ.ಶಿವಕುಮಾರ್ ಮನೆಗೆ ಯಡಿಯೂರಪ್ಪ ದಿಢೀರ್ ಭೇಟಿ
Recommended Video

ಬೆಂಗಳೂರು, ನವೆಂಬರ್ 28: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಹಠಾತ್ತನೆ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಹಲವು ಸಮಯ ಮಾತುಕತೆ ನಡೆಸಿದ್ದಾರೆ.
ಶಿವಾನಂದ ವೃತ್ತದ ಬಳಿ ಇರುವ ಸಚಿವ ಡಿ.ಕೆ.ಶಿವಕುಮಾರ್ ಅವರ ಸರ್ಕಾರಿ ಬಂಗಲೆಗೆ ಭೇಟಿ ನೀಡಿದ ಯಡಿಯೂರಪ್ಪ ಅವರನ್ನು ಹೂಗುಚ್ಛ ನೀಡಿ ತಬ್ಬಿಕೊಂಡು ಡಿ.ಕೆ.ಶಿವಕುಮಾರ್ ಅವರು ಸ್ವಾಗತಿಸಿದ್ದಾರೆ. ಈ ಸಮಯದಲ್ಲಿ ಯಡಿಯೂರಪ್ಪ ಜೊತೆಗೆ ಪುತ್ರ ರಾಘವೇಂದ್ರ ಹಾಗೂ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಸಹ ಇದ್ದರು.
ಕೆಲವು ದಿನಗಳ ಹಿಂದಷ್ಟೆ ಡಿ.ಕೆ.ಶಿವಕುಮಾರ್ ಅವರ ಮೇಲೆ ಇಡಿ ಮತ್ತು ಐಟಿ ದಾಳಿಗಳಾಗಲು ಯಡಿಯೂರಪ್ಪ ಅವರು ಕಾರಣ ಎಂದು ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಆರೋಪಿಸಿದ್ದರು. ಡಿ.ಕೆ.ಶಿ ಸಹ ಅದಕ್ಕೆ ದನಿಸೇರಿಸಿದ್ದರು. ಆದರೆ ಈಗ ಅದೇ ಯಡಿಯೂರಪ್ಪ ಅವರನ್ನು ತಬ್ಬಿಕೊಂಡು ಡಿ.ಕೆ.ಶಿವಕುಮಾರ್ ಸ್ವಾಗತಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಮುನ್ನಾ ಭೇಟಿ
ಅದೆಲ್ಲದಕ್ಕಿಂತಲೂ ಮುಖ್ಯವಾಗಿ, ಲೋಕಸಭೆ ಚುನಾವಣೆ ಸಮೀಪದಲ್ಲಿರುವ ಈ ಸಮಯದಲ್ಲಿ ಪ್ರಮುಖ ಪಕ್ಷಗಳ ಅತ್ಯಂತ ಪ್ರಮುಖ ನಾಯಕರಿಬ್ಬರು ಪರಸ್ಪರ ಭೇಟಿ ಆಗಿರುವುದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳನ್ನು ಹುಟ್ಟುಹಾಕುತ್ತಿದೆ.

ಮತ್ತೆ ಹೊಂದಾಣಿಕೆ ರಾಜಕಾರಣ
ಬಿಜೆಪಿ ಮತ್ತೆ ಹೊಂದಾಣಿಕೆ ರಾಜಕೀಯದತ್ತ ಹೊರಳಿತೆ. ಅಥವಾ ರಾಜಕೀಯ ಸಂಧ್ಯಾಕಾಲದಲ್ಲಿರುವ ಯಡಿಯೂರಪ್ಪ ಅವರು ಆಪ್ತೇಷ್ಟರ ರಾಜಕೀಯ ಏಳಿಗಾಗಿ ಡಿ.ಕೆ.ಶಿವಕುಮಾರ್ ಬಳಿ ಸಂಧಿ ಮಾಡಿಕೊಳ್ಳುವ ಯತ್ನ ಮಾಡುತ್ತಿದ್ದಾರೆಯೇ ಅಥವಾ ಡಿ.ಕೆ.ಶಿವಕುಮಾರ್ ಅವರನ್ನೇ ಆಪರೇಷನ್ ಖೆಡ್ಡಾದಲ್ಲಿ ಕೆಡವುವ ಯೋಜನೆಯೇನಾದರೂ ಇದೆಯೇ ಹೀಗೆ ಹಲವು ಪ್ರಶ್ನೆಗಳನ್ನು ಈ ಇಬ್ಬರ ಭೇಟಿ ಹುಟ್ಟುಹಾಕಿದೆ.

ಬಳ್ಳಾರಿಯಲ್ಲಿ ಮುಖಭಂಗ ಮಾಡಿದ್ದಾರೆ ಡಿಕೆಶಿ
ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗಷ್ಟೆ ಬಳ್ಳಾರಿಯಲ್ಲಿ ಬಿಜೆಪಿಗೆ ಭಾರಿ ಮುಖಭಂಗ ಉಟಾಗುವಂತೆ ಮಾಡಿದ್ದರು. ಡಿ.ಕೆ.ಶಿ ವಿರುದ್ಧ ಇಡಿ, ಐಟಿ ನೊಟೀಸ್ ಜಾರಿ ಆದಾಗ ಇದ್ದ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೆಂದು ಯಡಿಯೂರಪ್ಪ ಅವರಿಗೆ ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿತ್ತು ಆದರೂ ಸಹ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

ಮಗನ ರಾಜಕೀಯ ಭವಿಷ್ಯಕ್ಕಾಗಿ ಭೇಟಿ
ಮಗನ ಸಲುವಾಗಿ ಡಿ.ಕೆ.ಶಿವಕುಮಾರ್ ಭೇಟಿ ಆಗಿರಲಿಕ್ಕೂ ಸಾಧ್ಯವಿದೆ. ಈ ಬಾರಿಯ ಲೋಕಸಭೆ ಉಪಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧಿಸಿದ್ದ ಯಡಿಯೂರಪ್ಪ ಮಗ ರಾಘವೇಂದ್ರ ಸುಲಭವಾದ ಗೆಲುವನ್ನು ಸಾಧಿಸಲಿಲ್ಲ. ಕೆಲವು ತಿಂಗಳ ನಂತರ ಮತ್ತೆ ಬರುವ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮೊದಲ ಹೆಜ್ಜೆ ಈ ಭೇಟಿ ಇರಬಹುದೇ ಎಂಬ ಅನುಮಾನವೂ ಏಳದೇ ಇಲ್ಲ.

ಸಾಗರದ ಬಳಿಯ ಸೇತುವೆ ಬಗ್ಗೆ ಚರ್ಚೆ
ಮತ್ತೊಂದು ಮೂಲದ ಪ್ರಕಾರ ಶಿವಮೊಗ್ಗ ಜಿಲ್ಲೆಯ ಸಾಗರ ಬಳಿಯ ಸೇತುವೆ ಒಂದಕ್ಕೆ ಸಂಬಂಧಿಸಿದಂತೆ ಮಾತನಾಡಲು ಯಡಿಯೂರಪ್ಪ ಅವರು ಬಂದಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಶಾಸಕ ಹರತಾಳು ಹಾಳಪ್ಪ ಅವರು ಸಹ ಜೊತೆಗೆ ಬಂದಿದ್ದಾರೆ ಎನ್ನಲಾಗಿದೆ.











Click it and Unblock the Notifications