ಯಡಿಯೂರಪ್ಪ ಮತ್ತು ಬಿಜೆಪಿಗೆ ನಡುವೆ ಹಗ್ಗ ಜಗ್ಗಾಟ
ಬೆಂಗಳೂರು, ಡಿ. 10 : ಕ್ಷೀಪ್ರ ರಾಜಕೀಯ ಬೆಳವಣಿಗೆಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಗೆ ಮರಳಲಿದ್ದಾರೆ ಎಂಬ ಊಹೆಗಳು ಹುಸಿಯಾಗಿವೆ. ಬಿಜೆಪಿಯಿಂದ ಅಧಿಕೃತ ಆಹ್ವಾನ ಬರುವವರೆಗೆ ಕಾದು ನೋಡುವ ತಂತ್ರವನ್ನು ಯಡಿಯೂರಪ್ಪ ಅನುಸರಿಸಲಿದ್ದಾರೆ. ಆದ್ದರಿಂದ ಬಿಜೆಪಿ ಮತ್ತು ಕೆಜೆಪಿ ನಡುವಿನ ಹಗ್ಗಜಗ್ಗಾಟ ಮುಂದುವರೆದಿದ್ದು, ಸದ್ಯಕ್ಕೆ ಸ್ಪಷ್ಟ ಚಿತ್ರಣ ಲಭ್ಯವಾಗುವುದಿಲ್ಲ ಎಂಬುದು ಖಾತ್ರಿಯಾಗಿದೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಕೆಜೆಪಿ ಕಾರ್ಯಕಾರಣಿ ಸಭೆಯಲ್ಲಿ ಕೆಜೆಪಿ ನಾಯಕರು ಬಿಜೆಪಿ ಯಡಿಯೂರಪ್ಪ ಅವರೊಬ್ಬರನ್ನು ಮಾತ್ರ ವಾಪಸ್ ಕರೆದುಕೊಳ್ಳಲಿದೆ, ಬೆಂಬಲಿಗ ಮುಖಂಡರನ್ನಲ್ಲ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಬಿಜೆಪಿಯಿಂದ ಪ್ರಸ್ತಾವನೆ ಬಂದ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ಒಮ್ಮತದ ತಿರ್ಮಾನ ಕೈಗೊಳ್ಳಲಾಗಿದೆ. (ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ)
ಸಭೆಯಲ್ಲಿ ಮುಖಂಡ ಆತಂಕಕ್ಕೆ ಸ್ಪಂದಿಸಿರುವ ಯಡಿಯೂರಪ್ಪ, ಬಿಜೆಪಿಯಿಂದ ಹೊರಬಂದ ನಂತರದ ದಿನದಲ್ಲಿ ನನ್ನೊಂದಿಗಿದ್ದ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಅರ್ಧ ದಾರಿಯಲ್ಲಿ ಕೈ ಬಿಡುವುದಿಲ್ಲ. ಅವರನ್ನು ದಡ ಸೇರಿಸುವವರೆಗೆ ರಾಜಕಾರಣ ಮಾಡುತ್ತೇನೆ. ಕನಿಷ್ಠ 10 ವರ್ಷಗಳವರೆಗೂ ರಾಜಕೀಯದಲ್ಲಿ ಮುಂದುವರಿಯುತ್ತೇನೆ ಎಂದು ಭರವಸೆ ನೀಡಿದ್ದಾರೆ. ಯಡಿಯೂರಪ್ಪ ಅವರು ಕೈಗೊಳ್ಳುವ ರಾಜಕೀಯ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದು ಸಭೆಯಲ್ಲಿ ಎಲ್ಲಾ ನಾಯಕರು ಹೇಳಿದ್ದಾರೆ. ಬಿಜೆಪಿಯವರು ಏನಾಂತಾರೆ
ಆಹ್ವಾನ ಬಂದಿಲ್ಲ, ಬಿಜೆಪಿ ಹೇಳಿಕೆ ಸುಳ್ಳು
ರಾಷ್ಟ್ರ ಮತ್ತು ರಾಜ್ಯ ರಾಜಕಾರಣದ ಪರಿಸ್ಥಿತಿ ಅವಲೋಕಿಸಿ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಕಷ್ಟಕಾಲದಲ್ಲಿ ಜತೆಗಿದ್ದವರನ್ನು ದಡ ಮುಟ್ಟಿಸಿಯೇ ವಿಶ್ರಮಿಸುತ್ತೇನೆ ಎಂದು ಹೇಳಿರುವ ಬಿ.ಎಸ್.ಯಡಿಯುರಪ್ಪ ಬಿಜೆಪಿಯ ಯಾವ ನಾಯಕರು ದೂರವಾಣಿ ಮೂಲಕವೂ ನನಗೆ ಬಿಜೆಪಿಗೆ ಮರಳುವಂತೆ ಆಹ್ವಾನ ನೀಡಿಲ್ಲ, ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈಶ್ವರಪ್ಪ ಹೇಳಿದ್ದೇ ಬೇರೆ
ಬಿ.ಎಸ್.ಯಡಿಯೂರಪ್ಪ ಅವರನ್ನು ಮಾತ್ರ ಬಿಜೆಪಿಗೆ ಮರಳುವಂತೆ ಆಹ್ವಾನ ನೀಡಿದ್ದೇವೆ. ಅವರ ಜೊತೆಗಾರರ ಕುರಿತು ಆಮೇಲೆ ನೋಡಿಕೊಳ್ಳುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆ ತರುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಅದು ಪೂರ್ಣಗೊಳ್ಳಲಿದೆ. ವರಿಷ್ಠರು ಇಷ್ಟರಲ್ಲಿಯೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಕೆಲವು ದಿನಗಳಲ್ಲಿ ಆಹ್ವಾನಿಸುತ್ತೇವೆ
ಬಿಜೆಪಿಗೆ ಬರುವುದಾಗಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿಲ್ಲ. ಆದರೆ, ಅವರನ್ನು ಕರೆತರಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಪ್ರಯತ್ನಕ್ಕೆ ವರಿಷ್ಠರು ಹಸಿರು ನಿಶಾನೆ ತೋರಿಸಿದ್ದಾರೆ. ಕೆಲವೇ ದಿನಗಳಲ್ಲಿ ಅವರನ್ನು ಪಕ್ಷಕ್ಕೆ ಕರೆತರಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಕೆಜೆಪಿ ಕಟ್ಟಲು ಒಮ್ಮತದ ತೀರ್ಮಾನ
ರಾಜ್ಯ ರಾಜಕೀಯದಲ್ಲಿ ಮುಂದೇನಾಗುತ್ತದೋ ಗೊತ್ತಿಲ್ಲ. ಆದರೆ, ನನ್ನ ಸದ್ಯದ ಗುರಿ ಕೆಜೆಪಿ ಕಟ್ಟುವುದು ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಡಿ. 20ರ ನಂತರ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. ದೇಶ ಮತ್ತು ರಾಜ್ಯದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಸೇರ್ಪಡೆಯೇ ಅನುಮಾನ ?
ಯಡಿಯೂರಪ್ಪ ಮರಳಿ ಮಾತೃಪಕ್ಷ ಸೇರುವ ಉತ್ಸಾಹಕ್ಕೆ ಬಿಜೆಪಿ ವರಿಷ್ಠರು ತಣ್ಣೀರು ಸುರಿಯುವ ಸಾಧ್ಯತೆಗಳಿವೆ ಎಂಬ ಮಾತು ದೆಹಲಿ ವಲಯದಲ್ಲಿ ಕೇಳಿಬರುತ್ತಿದೆ. ಸದ್ಯ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಚರ್ಚೆಯಲ್ಲಿ ವರಿಷ್ಠರು ತೊಡಗಿದ್ದಾರೆ. ಕಳಂಕದಿಂದ ಯಡಿಯೂರಪ್ಪ ಅವರು ಇನ್ನೂ ಮುಕ್ತರಾಗಿಲ್ಲ, ಹಿರಿಯ ನಾಯಕ ಅಡ್ವಾಣಿಯ ವಿರುದ್ಧ ಮಾಡಿದ ಆರೋಪಗಳನ್ನು ಮಾಡಿದ್ದರು ಆದ್ದರಿಂದ ಅವರನ್ನು ಪಕ್ಷಕ್ಕೆ ಮರಳಿ ಕರೆಯಬೇಕೆ? ಎಂಬ ಬಗ್ಗೆ ಚಿಂತನ ಮಥನ ಸಾಗಿದೆ.