'ಈಶ್ವರಪ್ಪ ದೊಡ್ಡ ನಾಯಕರು, ಅವರ ಜೊತೆ ಮಾತನಾಡುವೆ'
ಬೆಂಗಳೂರು, ಜೂನ್ 29 : 'ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಂಡಾಗ ಸಣ್ಣಪುಟ್ಟ ಅಸಮಾಧಾನಗಳು ಸಹಜ, ಕೆ.ಎಸ್.ಈಶ್ವರಪ್ಪ ಅವರು ದೊಡ್ಡ ನಾಯಕರು ಅವರ ಜೊತೆ ಮಾತುಕತೆ ನಡೆಸುತ್ತೇನೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬುಧವಾರ ಮಾತನಾಡಿದ ಯಡಿಯೂರಪ್ಪ ಅವರು,'ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸುವಾಗ ಶೋಭಾ ಕರಂದ್ಲಾಜೆ ಅವರು ಹಸ್ತಕ್ಷೇಪ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದರು. [ಮೂಲ ಬಿಜೆಪಿ VS ವಲಸೆ ಬಿಜೆಪಿ: ಬಿಎಸ್ ವೈಗೂ ಭಿನ್ನಮತದ ಬಿಸಿ]
'ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸುವಾಗ 15 ರಿಂದ 20 ಮಂದಿ ಬರುತ್ತಾರೆ. ಯಾರಿಗೆ ಅವಕಾಶ ನೀಡಲು ಆಗುತ್ತದೆ. ಪಟ್ಟಿ ಬಿಡುಗಡೆ ಆದಾಗ ಸಣ್ಣ-ಪುಟ್ಟ ಅಸಮಾಧಾನಗಳು ಸಹಜ' ಎಂದು ಹೇಳಿದರು. [ಕರ್ನಾಟಕ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪಟ್ಟಿ]
'ಈಗ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ. ಪಕ್ಷದಲ್ಲಿನ ಅಸಮಾಧಾನದ ಕುರಿತು ವರಿಷ್ಠರಿಗೂ ಯಾವುದೇ ದೂರುಗಳನ್ನು ಸಲ್ಲಿಸುವುದಿಲ್ಲ. ಈ ಅಸಮಾಧಾನದಿಂದಾಗಿ ಪಕ್ಷದ ಮಿಷನ್-150 ಅಭಿಯಾನಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ' ಎಂದು ಯಡಿಯೂರಪ್ಪ ಸ್ಪಷ್ಟನೆ ಕೊಟ್ಟರು.[ಬಿಜೆಪಿ ಪದಾಧಿಕಾರಿಗಳ ಪಟ್ಟಿ]
ಈಶ್ವರಪ್ಪ ದೊಡ್ಡ ನಾಯಕರು : 'ಪದಾಧಿಕಾರಿಗಳ ಪಟ್ಟಿ ಬಗ್ಗೆ ಆಕ್ಷೇಪ ಎತ್ತಿದ್ದ ಈಶ್ವರಪ್ಪ ಜೊತೆ ನಾನು ಮಾತುಕತೆ ನಡೆಸುವುದಾಗಿ ಹೇಳಿದ್ದೆ. ಆದರೂ ಅವರು ಸಭೆ ನಡೆಸಿದ್ದಾರೆ. ಈಶ್ವರಪ್ಪ ಅವರು ದೊಡ್ಡ ನಾಯಕರು, ಅವರ ಜೊತೆ ಮಾತುಕತೆ ನಡೆಸುತ್ತೇನೆ' ಎಂದರು.
ಬಿಜೆಪಿ ಪದಾಧಿಕಾರಿಗಳ ಪಟ್ಟಿಯಲ್ಲಿ ಕೆಜೆಪಿಯಿಂದ ಮರಳಿದವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂಬುದು ಹಲವು ಬಿಜೆಪಿ ನಾಯಕರ ಆರೋಪವಾಗಿದೆ. ಆದ್ದರಿಂದ, ಅಸಮಾಧಾನಗೊಂಡ ನಾಯಕರ ಜೊತೆ ವಿಧಾನಪರಿಷತ್ ಸದಸ್ಯ ಕೆ.ಎಸ್.ಈಶ್ವರಪ್ಪ ಅವರು ಮಂಗಳವಾರ ಸಭೆ ನಡೆಸಿದ್ದರು.