ಗೌರಿ ಹತ್ಯೆಗೆ ವರ್ಷ, ಕಲ್ಬುರ್ಗಿ ಕೊಲೆಗೆ ಮೂರು ವರ್ಷ: ಮುಂದೇನು?
ಬೆಂಗಳೂರು, ಆಗಸ್ಟ್ 28: ದೇಶವನ್ನೇ ತಲ್ಲಣಗೊಳಿಸಿದ ರಾಜ್ಯದ ಇಬ್ಬರು ಎಡಪಂಥೀಯ ಚಿಂತಕರು ಹತ್ಯೆಯಾಗಿ ವರ್ಷಗಳೇ ಕಳೆದರೂ ಇಬ್ಬರ ಹತ್ಯೆ ತನಿಖೆ ಎಲ್ಲೆಲ್ಲೋ ಆರಂಭಗೊಂಡು ಇನ್ನೆಲ್ಲೋ ಹೋಗಿ ನಿಲ್ಲುತ್ತಿದೆ.
ಭಾರಿ ಚರ್ಚೆಗೆ ಗ್ರಾಸವಾಗಿದ್ದ ಇಬ್ಬರು ಪ್ರಮುಖ ವ್ಯಕ್ತಿಗಳ ಹತ್ಯೆ ಕುರಿತಂತೆ ಸರ್ಕಾರವನ್ನು ಪ್ರಶ್ನಿಸುವ ಕಾಲ ಈಗ ಬಂದಿದೆ. ಖ್ಯಾತ ಚಿಂತಕ ಡಾ. ಎಂಎಂ ಕಲ್ಬುರ್ಗಿಯವರ ಹತ್ಯೆಯಾಗಿ ಆಗಸ್ಟ್ 30ಕ್ಕೆ ಮೂರು ವರ್ಷ ಕಳೆಯುತ್ತಿದ್ದರೆ ಸೆಪ್ಟೆಂಬರ್ 5 ಕ್ಕೆ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಕಳೆಯಲಿದೆ.
ಈ ಹಿನ್ನೆಲೆಯಲ್ಲಿ ಇವರಿಬ್ಬರ ಹತ್ಯೆಯ ತನಿಖೆ ಎತ್ತ ಸಾಗಿದೆ ಎಂದು ನೋಡಿದರೆ ಕೆಲವೊಮ್ಮೆ ಆಶಾವಾದವೂ ಇನ್ನೂ ಕೆಲವೊಮ್ಮ ನಿರಾಶೆಯೂ ಉಂಟಾಗುತ್ತದೆ. ಗೌರಿ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ಕಳೆದ ಒಂದು ತಿಂಗಳಿನಿಂದ ಚುರುಕುಗೊಂಡಿದೆ. ಆರೋಪಿಗಳಿಗೆ ಸಂಬಂಧಿಸಿದ ಹಲವು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ
ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5ರಂದು ರಾಜರಾಜೇಶ್ವರಿನಗರದಲ್ಲಿರುವ ಅವರ ನಿವಾಸದ ಮುಂದೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಇದೀಗ ಅವರ ಹತ್ಯೆಗೆ ಒಂದು ವರ್ಷ ಮುಗಿಯುತ್ತಾ ಬಂದರೂ ತನಿಖೆ ಸಂಪೂರ್ಣವಾಗಿ ಮುಕ್ತಾಯಗೊಂಡು ಆರೋಪಿಗಳು ಇವರೇ ಎಂದು ಸಾಬೀತು ಮಾಡಲು ಸಾಧ್ಯವಾಗಿಲ್ಲ.

ಗೌರಿ ಲಂಕೇಶ್ ಹತ್ಯೆ: ಎಸ್ಐಟಿ ತನಿಖೆ ಮತ್ತಷ್ಟು ಚುರುಕು
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಎಸ್ಐಟಿ ಅಧಿಕಾರಿಗಳು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಈಗಾಗಲೇ ಬಂಧಿತ ಆರೋಪಿಗಳಿಂದ ಹಲವಾರು ಮಾಹಿತಿ ಕಲೆಹಾಕಿ, ಗೌರಿ ಹತ್ಯೆಗೆ ಬಳಸಿದ್ದ ಪಿಸ್ತೂಲ್ಗಾಗಿ ಹುಡುಕಾಟ ನಡೆಸಿದ್ದಾರೆ. ಮಹಾರಾಷ್ಟ್ರದಲ್ಲಿ ಅಗಸ್ಟ್ 10ರಂದು ಪಿಸ್ತೂಲ್ ಇರುವ ಮಾಹಿತಿ ಮೇರೆಗೆ ಆರೋಪಿಗಳಾದ ಸುಧನ್ವ , ಶರದ್, ವೈಭವ್ ಇರುವ ಸ್ಥಳಕ್ಕೆ ಹೋಗಿ ಪೊಲೀಸರು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಎಸ್ಐಟಿ 16 ಪಿಸ್ತೂಲ್ ವಶಪಡಿಸಿಕೊಂಡಿತ್ತು. ಪತ್ತೆಯಾಗಿದ್ದ 16 ಪಿಸ್ತೂಲ್ ಪೈಕಿ 15 ಹೊಸದಾಗಿ ಖರೀದಿ ಮಾಡಿರುವ ಅಂಶ ತನಿಖೆಯಲ್ಲಿ ತಿಳಿದುಬಂದಿದೆ.

ಚಿಂತಕ ಕಲ್ಬುರ್ಗಿ ಹತ್ಯೆ ಹಿನ್ನೆಲೆ
ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಯಾಗಿ ಮೂರು ವರ್ಷ ಕಳೆಯುತ್ತಾ ಬಂದರೂ ಇನ್ನೂ ಹಂತಕರ ಪತ್ತೆಯಾಗಿಲ್ಲ.ಧಾರವಾಡದ ಕಲ್ಯಾಣನಗರದಲ್ಲಿ 2015ರ ಆ. 30ರಂದು ಬೆಳಗ್ಗೆ ಕಲಬುರ್ಗಿ ಹತ್ಯೆಯಾಯಿತು. ಮರುದಿನವೇ ಸರಕಾರ ತನಿಖೆ ಜವಾಬ್ದಾರಿಯನ್ನು ಸಿಐಡಿಗೆ ವಹಿಸಿತು. ಈಗಲೂ ತನಿಖೆ ನಡೆಯುತ್ತಿದೆ. ಆದರೆ ಈವರೆಗೆ ನಿರೀಕ್ಷಿತ ಫಲ ಸಿಕ್ಕಿಲ್ಲ. ಆರೋಪಿಗಳನ್ನು ಬಂಧಿಸುವುದಾಗಿ ಒಂದೂವರೆ ವರ್ಷದಿಂದ ಗೃಹ ಸಚಿವರು, ತನಿಖಾಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ.
ಮಹಾರಾಷ್ಟ್ರದ ಡಾ. ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಹತ್ಯೆಗೂ ಡಾ. ಕಲಬುರ್ಗಿ ಹತ್ಯೆಗೂ ಸಾಮ್ಯತೆ ಇದೆ. ಈ ಮೂವರು ವಿಚಾರವಾದಿಗಳ ಹತ್ಯೆಗೆ ಬಳಸಿದ್ದು 7.65 ಎಂಎಂ ದೇಸಿ ಪಿಸ್ತೂಲ್ ಎಂದು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ವರದಿ ನೀಡಿದ್ದಾರೆ.
ಹೀಗಾಗಿ ಇದು ವೈಚಾರಿಕ ಭಿನ್ನಾಭಿಪ್ರಾಯದ ಮೇಲೆ ನಡೆದ ಹತ್ಯೆ ಎಂಬ ನಿಲುವಿಗೆ ಬಂದಿರುವ ಸಿಐಡಿ ಪೊಲೀಸರು ಸಿಬಿಐ ವಶದಲ್ಲಿರುವ ವೀರೇಂದ್ರ ತಾವಡೆಯನ್ನು ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರದಲ್ಲಿ ಕೆಲ ಸಂಘಟನೆಗಳ ಪದಾಧಿಕಾರಿಗಳ ವಿಚಾರಣೆಯೂ ನಡೆದಿದೆ.

ಅಧಿಕಾರಿಗಳ ವರ್ಗ ತನಿಖೆಗೆ ಅಡ್ಡಿ ?
ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಗೆ ಹೇಮಂತ ನಿಂಬಾಳ್ಕರ್ ಅವರಂತಹ ಕೆಲ ದಕ್ಷ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿತ್ತು. ಆದರೆ, ಬಹುತೇಕರನ್ನು ಸಿಐಡಿಯಿಂದ ಈಗಾಗಲೇ ವರ್ಗಾವಣೆಗೊಂಡು ಸಾಕಷ್ಟು ತಿಂಗಳುಗಳು ಕಳೆದಿವೆ. ಇಂತಹ ಗಂಭೀರ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿ ಇದೆ ಎನ್ನುವುದಾದರೆ ವರ್ಗಾವಣೆ ಜರೂರತ್ತು ಏನಿತ್ತು ಎಂಬುದು ಕೆಲ ಸಾಹಿತಿಗಳ ಪ್ರಶ್ನೆಯಾಗಿದೆ.
ಅದೇ ರೀತಿ ಅಮೆರಿಕದಲ್ಲಿನ ಅನಿವಾಸಿ ಭಾರತೀಯರು ಹತ್ಯೆಗೆ ಆರ್ಥಿಕ ನೆರವು ನೀಡಿದ್ದರು ಎಂಬ ಸಂಶಯದ ಮೇಲೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಒಂದು ವರ್ಷದ ಹಿಂದೆ ವಿಜಯಪುರದ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹೀಗೆ ಹಲವು ಸಂಘಟನೆ, ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿದ್ದರೂ ಆರೋಪ ದೃಢಪಡಿಸಲು ಸಾಕ್ಷ್ಯಾಧಾರಗಳು ಸಿಗದಾಗಿವೆ ಎಂದು ಮೂಲಗಳು ತಿಳಿಸಿವೆ.

ಗೌರಿ ಹತ್ಯೆ ಹಿಂದೆ ಸನಾತನ ಸಂಸ್ಥೆಯ ಕೈವಾಡ ಸಾಬೀತಾಗಿಲ್ಲ
ಕಳೆದ ಒಂದು ತಿಂಗಳಿಂದ ನಡೆದಿರುವ ಹತ್ಯೆಗಳ ತನಿಖೆಯನ್ನ ಗಮನಿಸಿದರೆ ಸನಾತನ ಸಂಸ್ಥೆಯ ಸುತ್ತ ವದಂತಿ ಗಿರಿಕಿ ಹೊಡೆಯುತ್ತಿದೆ. ಆದರೆ ಈಗ ಕೆಲವೇ ನಿಮಿಷಗಳ ಹಿಂದೆ ರಾಜ್ಯದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸನಾತನ ಸಂಸ್ಥೆಯ ಕೈವಾಡ ಸಾಬೀತಾಗಿಲ್ಲ ಎಂದಿದ್ದಾರೆ .ಹೀಗಾಗಿ ಹಿಂದು ಸಿದ್ಧಾಂತ ಪ್ರೇರಿತ ವ್ಯಕ್ತಿಗಳಿಂದಲೇ ಇಬ್ಬರು ಚಿಂತಕರ ಕೊಲೆಯಾಗಿದೆ ಎಂಬ ತಿಂಗಳ ವಾದ ಈಗ ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಹುಬ್ಬಳ್ಳಿ, ವಿಜಯಪುರ, ಬೆಳಗಾವಿಯ ಹಲವು ಯುವಕರನ್ನು ಬಂಧಿಸಿ ತನಿಖೆ ಮಾಡುತ್ತಿರುವ ಎಸ್ ಐಟಿಗೆ ಗೃಹ ಸಚಿವರರ ಹೇಳಿಕೆಯಿಂದ ಮುಜುಗರ ಉಂಟಾಗಿರಬಹುದೇನೋ, ಯಾರಿಗೆ ಮುಜುಗರವಾದರೆ ಇನ್ಯಾರಿಗೋ ಸಮಾಧಾನವಾಗಲಿದೆ.
ಹತ್ಯೆಗೊಳಗಾದ ಇಬ್ಬರು ಚಿಂತಕರ ಆತ್ಮಕ್ಕಂತೂ ಶಾಂತಿ ಸಿಗುತ್ತಿಲ್ಲ. ಅವರ ಕುಟುಂಬದವರು ಇವತ್ತಿನವರೆಗೂ ನ್ಯಾಯಕ್ಕಾಗಿ ಪರಿತಪಿಸುವುದು ತಪ್ಪಿಲ್ಲ, ಇದಕ್ಕೆ ಕರ್ನಾಟಕ ಪೊಲೀಸ್ ಶೀಘ್ರವೇ ಉತ್ತರ ಕಂಡುಕೊಳ್ಳಲಿ ಎಂದು ಹಾರೈಸೋಣ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications