ಯಶಸ್ವಿನಿ ಯೋಜನೆ ಕುರಿತು ಸರ್ಕಾರದ ಸ್ಪಷ್ಟನೆಗಳು
ಬೆಂಗಳೂರು, ಜುಲೈ 14 : ಯಶಸ್ವಿನಿ ಯೋಜನೆ ಕುರಿತು ಇರುವ ಗೊಂದಲಗಳಿಗೆ ಕರ್ನಾಟಕ ಸರ್ಕಾರ ಸ್ಪಷ್ಟನೆ ನೀಡಿದೆ. ರಾಜ್ಯದಲ್ಲಿ ಜಾರಿಯಲ್ಲಿದ್ದ ಎಲ್ಲಾ ಆರೋಗ್ಯ ಯೋಜನೆಗಳನ್ನು ಸರ್ಕಾರ 'ಆರೋಗ್ಯ ಕರ್ನಾಟಕ' ಯೋಜನೆಯಲ್ಲಿ ವಿಲೀನ ಮಾಡಿದೆ. ಆದರೆ, ಇದರಿಂದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತು ಅಧಿಕೃತವಾದ ಆದೇಶ ಹೊರಡಿಸಿದೆ. ಯಶಸ್ವಿನಿ ಯೋಜನೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಿಲೀನವಾಗಿರುವುದರಿಂದ ಫಲಾನುಭವಿಗಳು ಆತಂಕ ಪಡುವ ಅಗತ್ಯವಿಲ್ಲ. ಸದಸ್ಯತ್ವಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಹೇಳಿದೆ.
ಸಿದ್ದರಾಮಯ್ಯ ಘೋಷಿಸಿದ ಈ ಯೋಜನೆ ಮುಂದುವರೆಸಲಿದ್ದಾರೆ ಎಚ್ಡಿಕೆ
ಸಹಕಾರ ಸಂಘಗಳ ಸದಸ್ಯರಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಯಶಸ್ವಿನಿ ಯೋಜನೆಯನ್ನು ಸರ್ಕಾರವು 2003ರಲ್ಲಿ ಆರಂಭಿಸಿತ್ತು. 2018ರಲ್ಲಿ 'ಆರೋಗ್ಯ ಕರ್ನಾಟಕ ಯೋಜನೆ' ಜಾರಿಗೆ ತಂದ ಬಳಿಕ ರಾಜ್ಯದ ಎಲ್ಲಾ ಆರೋಗ್ಯ ಯೋಜನೆಗಳನ್ನು ಒಂದೇ ಸೂರಿಗೆ ತರಲಾಗಿದೆ.
ಕುಟುಂಬ ಯೋಜನೆ ಕುರಿತ ಈ ಅಂಕಿ ಅಂಶ ಗಾಬರಿಗೊಳಿಸುತ್ತದೆ
ಆರೋಗ್ಯ ಕರ್ನಾಟಕ ಯೋಜನೆಯು ಒಂದು ಆರೋಗ್ಯ ಭರವಸೆ ಯೋಜನೆಯಾಗಿರುತ್ತದೆ. ಈ ಯೋಜನೆಯಡಿ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಆರೋಗ್ಯ ಸೇವೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಎಲ್ಲರೂ ಉಚಿತವಾಗಿ ಅಥವ ಅತ್ಯಲ್ಪ ಸೇವಾ ಶುಲ್ಕ ನೀಡಿ ಪಡೆಯಬಹುದಾಗಿದೆ.
ಯಶಸ್ವಿನಿ ಯೋಜನೆ
ಸಹಕಾರ ಸಂಘಗಳ ಸದಸ್ಯರಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದೊಂದಿಗೆ ಯಶಸ್ವಿನಿ ಯೋಜನೆಯನ್ನು ಸರ್ಕಾರ 2003ರಲ್ಲಿ ಆರಂಭಿಸಿತು. ಈಗ ಈ ಯೋಜನೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಿಲೀನಗೊಂಡಿದೆ.
ಯಶಸ್ವಿನಿ ಯೋಜನೆಯಡಿ ಸಹಕಾರ ಸಂಘಗಳ ಗ್ರಾಮಾಂತರ ಪ್ರದೇಶಗಳ ಸದಸ್ಯರು 300 ರೂ., ನಗರ ಪ್ರದೇಶಗಳ ಸದಸ್ಯರು 710 ರೂ. ವಾರ್ಷಿಕ ವಂತಿಗೆ ಪಾವತಿ ಮಾಡಬೇಕಿತ್ತು ಮತ್ತು ಪ್ರತಿ ವರ್ಷ ನವೀಕರಿಸುವ ಮುಖಾಂತರ ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆಗಳನ್ನು ಪಡೆಯಬಹುದಾಗಿತ್ತು.
ಎಲ್ಲಾ ಯೋಜನೆಗಳು ವಿಲೀನ
ಕರ್ನಾಟಕದಲ್ಲಿ ಈ ಹಿಂದೆ ವಿವಿಧ ವರ್ಗಗಳ ಫಲಾನುಭವಿಗಳಿಗೆ ಬೇರೆ-ಬೇರೆ ಆರೋಗ್ಯ ಯೋಜನೆಗಳು ಜಾರಿಯಲ್ಲಿದ್ದವು. ರಾಜ್ಯದ ಎಲ್ಲಾ ನಿವಾಸಿಗಳಿಗೆ ಒಂದೇ ಸೂರಿನಡಿ ಪ್ರಾಥಮಿಕ ಹಂತ, ದ್ವಿತೀಯ ಹಂತ, ತೃತೀಯ ಹಂತ ಹಾಗೂ ತುರ್ತು ಚಿಕಿತ್ಸೆ ಒದಗಿಸಲು ರಾಜ್ಯದಲ್ಲಿ ಪ್ರಸಕ್ತ ಅನುಷ್ಠಾನದಲ್ಲಿದ್ದ ಯಶಸ್ವಿನಿ ಸೇರಿದಂತೆ ಎಲ್ಲಾ ಯೋಜನೆಯನ್ನು ಆರೋಗ್ಯ ಕರ್ನಾಟಕದಲ್ಲಿ ವಿಲೀನ ಮಾಡಲಾಗಿದೆ.
ಯಶಸ್ವಿನಿ ಯೋಜನೆ, ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯ ಭಾಗ್ಯ ಯೋಜನೆ, RSBY ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ (RBSK), ಮುಖ್ಯಮಂತ್ರಿ ಸಾಂತ್ವನ ಹರೀಶ್, ಇಂದಿರಾ ಸುರಕ್ಷಾ ಯೋಜನೆಗಳು ವಿಲೀನವಾಗಿವೆ.
ಆರೋಗ್ಯ ಕರ್ನಾಟಕ ಯೋಜನೆ
ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ನಿವಾಸಿಗಳಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು 'ಆರೋಗ್ಯ ಕರ್ನಾಟಕ' ಎಂಬ ಯೋಜನೆಯನ್ನು 2/3/2018ರಂದು ಜಾರಿಗೆ ತಂದಿದೆ. ಈ ಯೋಜನೆ ಮೂಲಕ ನಿರ್ಧಿಷ್ಟಪಡಿಸಿದ ಪ್ರಾಥಮಿಕ ಆರೋಗ್ಯ ಸೇವೆ, ಸಾಮಾನ್ಯ ದ್ವಿತೀಯ ಹಂತದ ಆರೋಗ್ಯ ಸೇವೆ, ಸಂಕೀರ್ಣ ದ್ವಿತೀಯ ಹಂತದ ಆರೋಗ್ಯ ಸೇವೆ, ತೃತೀಯ ಹಂತದ ಆರೋಗ್ಯ ಸೇವೆ ಮತ್ತು ತುರ್ತು ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ.
ಆರೋಗ್ಯ ಕರ್ನಾಟಕ ಯೋಜನೆಯಡಿ ಸೌಲಭ್ಯವನ್ನು ಪಡೆದುಕೊಳ್ಳುವ ರೋಗಿಗಳನ್ನು 2 ವರ್ಗಗಳಾಗಿ ವಿಂಗಡನೆ ಮಾಡಲಾಗಿದೆ.
1.ಅರ್ಹತಾ ರೋಗಿ : ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ 2013ರಡಿ 'ಅರ್ಹ ಕುಟುಂಬಕ್ಕೆ' ಸೇರಿರುವವರು. ಅರ್ಹ ರೋಗಿಗಳಿಗೆ ಬಹುತೇಕ ಉಚಿತ ಚಿಕಿತ್ಸೆ ಲಭ್ಯವಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರೋಗಿಗಳು ಈ ವರ್ಗದಲ್ಲಿ ಸೇರುತ್ತಾರೆ.
2.ಸಾಮಾನ್ಯ ರೋಗಿ : ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ 2013ರಡಿ ಅರ್ಹ ಕುಟುಂಬಕ್ಕೆ ಸೇರಿಲ್ಲದೇ ಇರುವ ಅಥವ ಅರ್ಹ ಕುಟುಂಬದ ಕಾರ್ಡನ್ನು ಹೊಂದಿಲ್ಲದಿರುವವರು.
ಸಾಮಾನ್ಯ ರೋಗಿಗೆ ಸಹಪಾವತಿ ಆಧಾರದ ಚಿಕಿತ್ಸೆ ಒದಗಿಸಲಾಗುತ್ತದೆ. ಯೋಜನೆಯ ಪ್ಯಾಕೇಜ್ ದರದ ಶೇಕಡಾ 30ರಷ್ಟನ್ನು ಸರ್ಕಾರ ಭರಿಸುತ್ತದೆ. ಎಪಿಎಲ್ ಪಡಿತರ ಚೀಟಿ ಹೊಂದಿರುವವರು ಅಥವ ಯಾವುದೇ ಪಡಿತರ ಚೀಟಿ ಹೊಂದಿಲ್ಲದ ರೋಗಿಗಳು ಈ ವರ್ಗಕ್ಕೆ ಸೇರಿರುತ್ತಾರೆ.
ವಂತಿಗೆ ಪಾವತಿಸುವ ಅಗತ್ಯವಿಲ್ಲ
ಯಶಸ್ವಿನಿ ಯೋಜನೆಯು ನಿರ್ಧಿಷ್ಟ ವರ್ಗದ ಫಲಾನುಭವಿಗಳನ್ನು ಹೊಂದಿದ್ದು ಬಡ ಮತ್ತು ಶ್ರೀಮಂತ ಸದಸ್ಯರು ಸಮನಾಗಿ ವಂತಿಕೆ ಕಟ್ಟಬೇಕಿತ್ತು. ಈಗ ಯೋಜನೆ ವಿಲೀನಗೊಂಡ ಬಳಿಕ ವಂತಿಗೆ ಪಾವತಿಸುವ ಅಗತ್ಯವಿಲ್ಲ. ವೈದ್ಯರ ಸಮಾಲೋಚನಾ ಶುಲ್ಕ ಇರುವುದಿಲ್ಲ. ಶಸ್ತ್ರ ಚಿಕಿತ್ಸೆಯ ಪೂರ್ವ ಅಥವ ನಂತರದ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸ್ಥಿರೀಕರಣ ವೈದ್ಯಕೀಯ ಆರೈಕೆ ಇರುತ್ತದೆ. ಅಗತ್ಯವಿದ್ದಲ್ಲಿ ಅನುಸರಣೆ ಚಿಕಿತ್ಸೆ ಮತ್ತು ವೈದ್ಯಕೀಯ ನಿರ್ವಹಣೆ ಇರುತ್ತದೆ.
ಯಶಸ್ವಿನಿ ಯೋಜನೆಯಲ್ಲಿ ದೊರಕುತ್ತಿದ್ದ ಚಿಕಿತ್ಸೆಗಳು ಆರೋಗ್ಯ ಕರ್ನಾಟಕ ಯೋಜನೆಯಲ್ಲಿಯೂ ಸಹ ಸಿಗುತ್ತದೆ. ಯಶಸ್ವಿನಿ ಯೋಜನೆ ವಿಲೀನಗೊಂಡಿರುವುದರಿಂದ ಸದಸ್ಯರುಗಳು ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಬರುವುದಿಲ್ಲ.
ಚಿಕಿತ್ಸಾ ವೆಚ್ಚದ ವಿವರಗಳು
* 5 ಸದಸ್ಯರವರೆಗೆ ಇರುವ ಒಂದು ಕುಟುಂಬಕ್ಕೆ (ಅರ್ಹತಾ ಕುಟುಂಬ) ನಿರ್ಧಿಷ್ಟ ಸಂಕೀರ್ಣ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸೆಗೆ 1 ವರ್ಷಕ್ಕೆ 30 ಸಾವಿರ ರೂ.ಗಳ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ.
* ನಿರ್ಧಿಷ್ಟ ತೃತೀಯ ಹಂತದ ಆರೋಗ್ಯ ಚಿಕಿತ್ಸೆಗಳಿಗೆ 1 ವರ್ಷಕ್ಕೆ ಒಂದು ಕುಟುಂಬಕ್ಕೆ (ಅರ್ಹತಾ ಕುಟುಂಬ) 1.50 ಲಕ್ಷಗಳವರೆಗೆ ಚಿಕಿತ್ಸೆ ಒದಗಿಸಲಾಗುತ್ತದೆ.
* ಈ ಮಿತಿಯು ಪೂರ್ಣವಾಗಿ ಉಪಯೋಗವಾದ ಮೇಲೆ ತೃತೀಯ ಹಂತದ ತುರ್ತು ಚಿಕಿತ್ಸಾ ಸಂದರ್ಭ ಬಂದಲ್ಲಿ ಇನ್ನೂ ಹೆಚ್ಚಿನ 50 ಸಾವಿರ ರೂ.ಗಳ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ. ಈ ನೆರವು ಮಂಜೂರಾದ ಪ್ಯಾಕೇಜ್ ದರಗಳಿಗೆ ಒಳಪಟ್ಟಿರುತ್ತದೆ.
* ಬಿಪಿಎಲ್ ರೋಗಿಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರಲ್ ಪಡೆದು ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ನಂತರ ಯಾವುದೇ ಪಾವತಿಯನ್ನು ಮಾಡಬೇಕಾಗಿರುವುದಿಲ್ಲ.
* ಸಾಮಾನ್ಯ ರೋಗಿಗೆ ಸಹ ಪಾವತಿ ಆಧಾರದ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಯೋಜನೆಯ ಪ್ಯಾಕೇಜ್ ದರದ ಶೇ 30ರಷ್ಟನ್ನು ಸರ್ಕಾರವೇ ಭರಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ