ಬಂಧನದ ಭೀತಿಯಿಂದ ಪಾರಾದ ರಾಘವೇಶ್ವರ ಶ್ರೀಗಳು
ಬೆಂಗಳೂರು, ಸೆಪ್ಟೆಂಬರ್ 30 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಬಂಧನದ ಭೀತಿಯಿಂದ ಪಾರಾಗಿದ್ದಾರೆ. ಯಕ್ಷಗಾನ ಕಲಾವಿದೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಶ್ರೀಗಳಿಗೆ ಸೆಷೆನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸೆ.22ರಂದು ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕರಾದ ಪೊನ್ನಣ್ಣ ಅವರು, 'ಆರೋಪಿ ಸ್ಥಾನದಲ್ಲಿರುವ ಸ್ವಾಮೀಜಿ ವಿರುದ್ಧ ಎರಡು ಅತ್ಯಾಚಾರ ಆರೋಪ ಪ್ರಕರಣಗಳಿದ್ದು, ತನಿಖೆಗೆ ಸಹಕರಿಸುತ್ತಿಲ್ಲ. 2ನೇ ಪ್ರಕರಣದಲ್ಲಿ ಒಮ್ಮೆ ಮಾತ್ರ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ವಾದ ಮಂಡನೆ ಮಾಡಿದ್ದರು, ಜಾಮೀನು ನೀಡಬಾರದು' ಎಂದು ಮನವಿ ಮಾಡಿದ್ದರು. [ಪುರುಷತ್ವ ಪರೀಕ್ಷೆಗೆ ಬರಲಿಲ್ಲ ರಾಘವೇಶ್ವರ ಶ್ರೀಗಳು]

ವಾದ ಆಲಿಸಿದ ನ್ಯಾಯಾಲಯ ಸೆ.29ರ ತನಕ ಸ್ವಾಮೀಜಿಗಳಿಗೆ ಮಧ್ಯಂತರ ಜಾಮೀನು ನೀಡಿತ್ತು ಮತ್ತು ಸೆ.30ರ ಬುಧವಾರಕ್ಕೆ ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಗೊಂಡಿದ್ದು, ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. [ಮಹಿಳಾ ಆಯೋಗಕ್ಕೆ ಮಠದ 12 ಪ್ರಶ್ನೆಗಳು]
ಯಾವುದು ಈ ಪ್ರಕರಣ? : 2006 ಮತ್ತು 2012ರಲ್ಲಿ ಎರಡು ಬಾರಿ ನನ್ನ ಮೇಲೆ ರಾಘವೇಶ್ವರ ಸ್ವಾಮಿಗಳು ಅತ್ಯಾಚಾರ ನಡೆಸಿದ್ದರು ಎಂದು ಗಿರಿನಗರ ಪೊಲೀಸ್ ಠಾಣೆಗೆ ಯಕ್ಷಗಾನ ಕಲಾವಿದೆ ದೂರು ನೀಡಿದ್ದರು. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಸೂಚನೆ ಅನ್ವಯ ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ.
ಷರತ್ತುಗಳು
* 2 ಲಕ್ಷ ರೂ.ಗಳ ಬಾಂಡ್, ಇಬ್ಬರ ಶ್ಯೂರಿಟಿ
* ವಿಚಾರಣೆಗೆ ಸಹಕರಿಸಬೇಕು
* ಕೋರ್ಟ್ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ತೆರಳುವಂತಿಲ್ಲ
* ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ
* ಪ್ರತಿ ಭಾನುವಾರ ಪೊಲೀಸ್ ಠಾಣೆಗೆ ಬಂದು ಸಹಿ ಹಾಕಬೇಕು












Click it and Unblock the Notifications