ದ್ವೀಪ ಗ್ರಾಮ ನೀಲಕಂಠರಾಯನ ಗಡ್ಡಿಗೆ ಜಿಲ್ಲಾಧಿಕಾರಿ ಭೇಟಿ
ಯಾದಗಿರಿ, ಸೆಪ್ಟೆಂಬರ್ 14 : ಸುರಪುರ ತಾಲೂಕಿನ ದ್ವೀಪ ಗ್ರಾಮವಾದ ನೀಲಕಂಠರಾಯನ ಗಡ್ಡಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಭರವಸೆ ನೀಡಿದ್ದಾರೆ.
ಸುಮಾರು 3 ಕಿ.ಮೀ.ಕಾಲ್ನಡಿಗೆಯಲ್ಲಿಯೇ ಸಾಗಿ, ಜಿಲ್ಲಾಧಿಕಾರಿಗಳು ನೀಲಕಂಠರಾಯನ ಗಡ್ಡಿಗೆ ತಲುಪಿದರು. ಗ್ರಾಮಸ್ಥರನ್ನು ಭೇಟಿಯಾಗಿ ಸಮಸ್ಯೆಗಳನ್ನು ಆಲಿಸಿದರು. 'ಗ್ರಾಮಕ್ಕೆ ಸೇತುವೆ ನಿರ್ಮಾಣಕ್ಕಾಗಿ 1 ಕೋಟಿ 74 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ. ಇದೇ ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು' ಎಂದರು.
ಗ್ರಾಮಕ್ಕೆ ಕುಡಿಯುವ ನೀರು, ಅಂಗನವಾಡಿ ಕೇಂದ್ರ, ಹೆಚ್ಚುವರಿ ಶಿಕ್ಷಕರ ನೇಮಕ, ರಸ್ತೆ ಸಂಪರ್ಕ ಮುಂತಾದ ಸೌಲಭ್ಯ ಕಲ್ಪಿಸುವುದಾಗಿ ಅವರು ಭರವಸೆ ನೀಡಿದರು. ಬಾಕಿ ಇರುವ ನಾಲ್ಕೈದು ವಿದ್ಯುತ್ ಕಂಬಗಳನ್ನು ಹಾಕಿಸಿ, ಗ್ರಾಮಕ್ಕೆ ವಿದ್ಯುತ್ ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನೀಲಕಂಠರಾಯನ ಗಡ್ಡಿ ದ್ವೀಪದಂತಿರುವ ಗ್ರಾಮ. ಇದರ ಸುತ್ತಲೂ ಕೃಷ್ಣಾ ನದಿ ಇದ್ದು, ನಾರಾಯಣಪುರ ಜಲಾಶಯದಿಂದ ನೀರು ಬಿಟ್ಟರೆ, ಈ ಗ್ರಾಮದ ಜನರು ಆತಂಕಕ್ಕೆ ಒಳಗಾಗುತ್ತಾರೆ. ಹೊರಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತಾರೆ.

45 ಕುಟುಂಬಗಳು
ನೀಲಕಂಠರಾಯನ ಗಡ್ಡಿ ಗ್ರಾಮದಲ್ಲಿ ಸುಮಾರು 45 ಕುಟುಂಬಗಳಿವೆ. ಹಲವಾರು ವರ್ಷಗಳಿಂದ ಗ್ರಾಮ ಈ ರೀತಿ ನಡುಗಡ್ಡೆಯಾಗಿಯೇ ಉಳಿದಿದೆ. ಮಳೆಗಾಲದಲ್ಲಿ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲಾಗುತ್ತದೆ. ಆಗ, ಪ್ರವಾಹ ಉಂಟಾಗಿ ಗ್ರಾಮದ ನಿವಾಸಿಗಳು ಹೊರಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತಾರೆ. ಜಿಲ್ಲಾಡಳಿತ ಜನರ ಸುರಕ್ಷತೆಗಾಗಿ ಎರಡು ಬೋಟ್ ವ್ಯವಸ್ಥೆ ಮಾಡಿದೆ. ನದಿಗೆ ನೀರು ಬಂದಾಗ ಈ ಬೋಟ್ಗಳನ್ನು ಗ್ರಾಮಸ್ಥರು ಉಪಯೋಗಿಸುತ್ತಾರೆ.

ಮೂಲ ಸೌಕರ್ಯ ಕಲ್ಪಿಸಿ
'ನೀಲಕಂಠರಾಯನ ಗಡ್ಡಿ ಗ್ರಾಮಕ್ಕೆ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಿ, ಪ್ರದೇಶವನ್ನು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದೆಂದು' ಜಿಲ್ಲಾಧಿಕಾರಿಗಳು ಘೋಷಿಸಿದರು. ಶಾಲೆಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಪರೀಕ್ಷಿಸಿದರು. ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ, ಹಾಲನ್ನು ಸರಿಯಾಗಿ ನೀಡಲಾಗುತ್ತಿದೆಯೇ? ಎಂದು ಮಾಹಿತಿ ಪಡೆದರು.

ಜಮೀನು ನೋಂದಣಿ
ಗ್ರಾಮಸ್ಥರು ತಮ್ಮ-ತಮ್ಮ ಜಮೀನುಗಳ ಖಾತೆ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, 'ಪಿತ್ರಾರ್ಜಿತ ಹೆಸರಿನಲ್ಲಿರುವ ಜಮೀನುಗಳನ್ನು ತಮ್ಮ ತಮ್ಮ ಹೆಸರಿಗೆ ಖಾತೆ ಮಾಡಿಸಿ ಕೊಡಲಾಗುವುದು. ಈ ಮೂಲಕ ಗ್ರಾಮದ ಜನತೆಗೆ ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ವಿವಿಧ ಸವಲತ್ತು ನೀಡಲಾಗುವುದು' ಎಂದು ತಿಳಿಸಿದರು.

ಸೋಲಾರ್ ದೀಪ ಆಸರೆ
ನೀಲಕಂಠರಾಯನ ಗಡ್ಡಿಗೆ ವಿದ್ಯುತ್ ಸಪರ್ಕ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಕಲಬುರಗಿಯ ಸೆಲ್ಕೋ ಸೋಲಾರ್ ಕಂಪನಿಯವರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಮಾರು 43 ಮನೆಗಳಿಗೆ ಹಾಗೂ 25 ಉಚಿತವಾಗಿ ಬೀದಿ ದೀಪಗಳನ್ನು ಇಲ್ಲಿ ಅಳವಡಿಸಿದ್ದಾರೆ. ಅಲ್ಲದೇ ಮನೆಯಲ್ಲಿ ಮೊಬೈಲ್ ಚಾರ್ಜ್ ಮಾಡಲು ಒಂದು ಬೋರ್ಡ್ನ್ನು ಅಳವಡಿಸಿದ್ದಾರೆ.

ಗ್ರಾಮದ ಸ್ಥಳಾಂತರ
ನೀಲಕಂಠರಾಯನ ಗಡ್ಡಿಗೆ ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಇದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಕ್ಕಳು ದೂರದ ಬೆಂಚಿಗಡ್ಡಿ ಗ್ರಾಮದ ಶಾಲೆಗೆ ಹೋಗಬೇಕು. ಗ್ರಾಮವನ್ನು ಸ್ಥಳಾಂತರಿಸುವ ಪ್ರಯತ್ನವನ್ನು ಜಿಲ್ಲಾಡಳಿತವು ಮಾಡಲು ಮುಂದಾದರೂ ಗ್ರಾಮಸ್ಥರೂ ಫಲವತ್ತಾದ ಜಮೀನನ್ನು ಬಿಟ್ಟು ಬರಲು ತಯಾರಿಲ್ಲ.












Click it and Unblock the Notifications