ಭ್ರಷ್ಟಾಚಾರಕ್ಕೂ ಕಾಂಗ್ರೆಸ್ಸಿಗೂ ಅವಿನಾಭಾವ ಸಂಬಂಧ: ಬಿ.ವೈ. ವಿಜಯೇಂದ್ರ
ಬಿ.ಎಸ್ ಯಡಿಯೂರಪ್ಪನವರಿಗೆ ಕಲ್ಲು ಎಸೆದರೆ ಅದು ಪಕ್ಷಕ್ಕೇ ಹೊಡೆತ ಬೀಳುತ್ತದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬರುವ ದಿನಗಳಲ್ಲಿ ಇದು ಅರ್ಥವಾಗಲಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ವಿಜಯಪುರ,ಜನವರಿ28: ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ. ಭ್ರಷ್ಟಾಚಾರಕ್ಕೂ ಕಾಂಗ್ರೆಸ್ಸಿಗೂ ಅವಿನಾಭಾವ ಸಂಬಂಧವಿದೆ ಎಂದು ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಈ ಕುರಿತು ಶುಕ್ರವಾರ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿಯೇ ಜನರು ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಿದ್ದಾರೆ. ಕಾಂಗ್ರೆಸ್ಸಿನಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯ ಎನ್ನುವಂತಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಡಿ.ಕೆ.ಶಿವಕುಮಾರ ಕೆಪಿಸಿಸಿ ರಾಜ್ಯಾಧ್ಯಕ್ಷರಾಗಬೇಕಾ? ಎಂದು ಪ್ರಶ್ನಿಸಿದರು.

ಇನ್ನೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಕಲ್ಲು ಎಸೆದರೆ ಅದು ಪಕ್ಷಕ್ಕೇ ಹೊಡೆತ ಬೀಳುತ್ತದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬರುವ ದಿನಗಳಲ್ಲಿ ಇದು ಅರ್ಥವಾಗಲಿದೆ ಎಂದರು.
ಯಡಿಯೂರಪ್ಪನವರು ಎಲ್ಲ ಜನ ವರ್ಗದವರೂ ಒಪ್ಪಿ ಕೊಂಡ ಧೀಮಂತ ನಾಯಕ, ಅವರ ಬಗ್ಗೆ ಅವಹೇಳನೆ ಸಲ್ಲದು. ಯಡಿಯೂರಪ್ಪನವರ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೈಲೆಂಟ್ ಆಗಿರುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗಯಾಗಿದೆ. ನಾನಿನ್ನೂ ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿರುವೆ. ನನಗೆ ವೈಯಕ್ತಿಕವಾಗಿ ಬಸವನಗೌಡ ಪಾಟೀಲ್ ಯತ್ನಾಳರ ಬಗ್ಗೆ ಯಾವುದೇ ವಿರೋಧವಿಲ್ಲ. ಅವರು ಹಿರಿಯರು, ಅವರ ಬಗ್ಗೆ ನಾನು ಮಾತನಾಡಲ್ಲ, ನಮ್ಮ ಹೇಳಿಕೆಗಳು ಪಕ್ಷದ ಬೆಳವಣಿಗೆಗೆ ಪೂರಕವಾಗಿರಬೇಕು ಎಂದರು.

ಭಾರತ್ ಜೋಡೋ, ಪ್ರಜಾಧ್ವನಿ ಯಾತ್ರೆ ಸಂಪೂರ್ಣ ವಿಫಲ: ಅರುಣ್ ಸಿಂಗ್
ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಸಂಪೂರ್ಣ ವಿಫಲವಾಗಿದೆ. ನಕ್ಸಲೈಟ್ಗಳು, ವಿಭಜನವಾದಿಗಳು, ಗಡಿ ಸಮಸ್ಯೆಗಳಿಗೆ ಮತ್ತು ದೇಶ ವಿಭಜಿಸುವ ಶಕ್ತಿಗಳನ್ನು ಕಾಂಗ್ರೆಸ್ ಬೆಂಬಲಿಸಿತ್ತು ಎಂದು ಜನರಿಗೆ ತಿಳಿದಿತ್ತು. ಆದ್ದರಿಂದ ಈ ಯಾತ್ರೆಗೆ ಜನ ಸಮರ್ಥನೆ ಸಿಕ್ಕಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷವು ತುಷ್ಟೀಕರಣದ ರಾಜಕೀಯ ಮಾಡುತ್ತದೆ. ದಿಗ್ವಿಜಯ್ ಸಿಂಗ್ ಮತ್ತು ಕಂಪೆನಿಯು ಸರ್ಜಿಕಲ್ ಸ್ಟ್ರೈಕ್ಗೆ ಸಾಕ್ಷಿ ಕೇಳುತ್ತಾರೆ. ದೇಶದ ಏಕತೆ, ಅಖಂಡತೆ ಕುರಿತು ಕಾಂಗ್ರೆಸ್ ಎಂದೂ ಚಿಂತಿಸಿಲ್ಲ. ನೆಹರೂ ಆಡಳಿತದಲ್ಲಿದ್ದಾಗ ಕಾಶ್ಮೀರದಲ್ಲಿ ಪ್ರತ್ಯೇಕ ಧ್ವಜ, ವಿಶೇಷ ಸ್ಥಾನಮಾನಕ್ಕೆ ಒಪ್ಪಂದ ಆಗಿತ್ತು. ಮೋದಿಜಿ ಅವರು 370ನೇ ವಿಧಿಯನ್ನು ರದ್ದುಪಡಿಸಿದರು. ಬಿಜೆಪಿ ದೇಶದ ಏಕತೆ, ಅಖಂಡತೆಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಪ್ರಜಾಧ್ವನಿ ಯಾತ್ರೆಯಲ್ಲೂ ಕುರ್ಚಿಗಳು ಖಾಲಿ ಇವೆ. ಡಿ.ಕೆ.ಶಿವಕುಮಾರ್- ಸಿದ್ದರಾಮಯ್ಯ ನಡುವೆ ಜಗಳ ಮುಂದುವರಿದಿದೆ. ಇಬ್ಬರೂ ಸಿಎಂ ಹುದ್ದೆಯ ಸ್ಪರ್ಧೆಯಲ್ಲಿದ್ದಾರೆ. ಇದರಿಂದ ಜನರ ವಿಶ್ವಾಸವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಕಾಂಗ್ರೆಸ್ ಸರಕಾರವಿದ್ದಾಗ 35 ಸಾವಿರ ಕೋಟಿಯ ಹಗರಣ, ಶಿಕ್ಷಕರ ನೇಮಕಾತಿ ಹಗರಣ ನಡೆದಿತ್ತು. ಪಿಎಫ್ಐಗೆ ಬೆಂಬಲ ಕೊಟ್ಟಿದ್ದ ಅವರಲ್ಲಿ ಹೇಳಿಕೊಳ್ಳಲು ಏನೂ ಉಳಿದಿಲ್ಲ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನು ಮಾಡಿದ್ದಾರೆ? ಹೇಳಲು ಅವರಲ್ಲಿ ಒಂದು ಶಬ್ದವೂ ಇಲ್ಲ ಎಂದರು. ಅವರು ಈಗ ಜನರು ಕನಸು ಕಾಣುವಂತೆ ಮಾಡುತ್ತಿದ್ದಾರೆ. ತಾವು ಅಧಿಕಾರ ಪಡೆದರೆ ಆಕಾಶದಿಂದ ನಕ್ಷತ್ರ ತಂದು ಕೊಡುವ ಭರವಸೆಯನ್ನೂ ನೀಡುತ್ತಾರೆ ಎಂದು ಟೀಕಿಸಿದರು.












Click it and Unblock the Notifications