ರಾಘವೇಶ್ವರ ಸ್ವಾಮೀಜಿ ಬಂಧನಕ್ಕೆ ಸಂಘಟನೆಗಳ ಒತ್ತಾಯ
ಬೆಂಗಳೂರು, ಸೆಪ್ಟೆಂಬರ್.04: ಎರಡು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ವಿವಿಧ ಮಹಿಳಾ ಪರ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಭಾರತ ಪ್ರಜಾಸತಾತ್ಮಕ ಫೆಡರೇಷನ್, ಮತ್ತು ಭಾರತ ವಿದ್ಯಾರ್ಥಿ ಪೆಡರೇಷನ್ ಸ್ವಾಮೀಜಿಯನ್ನು ಬಂಧಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದವು. [ರಾಘವೇಶ್ವರ ಶ್ರೀ ಮೇಲಿನ ಎರಡೂ ಪ್ರಕರಣ ಸಿಐಡಿಗೆ]
ಒಬ್ಬ ವ್ಯಕ್ತಿಯ ಮೇಲೆ ಎರಡು ಅತ್ಯಾಚಾರ ಪ್ರಕರಣ ದಾಖಲಾದರೂ ಬಂಧನಕ್ಕೆ ವಿಳಂಬ ಮಾಡುತ್ತಿರುವುದು ಏಕೆ? ಸ್ವಾಮೀಜಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಮಾತ್ರ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ ಎಂದು ಸಂಘಟನೆಗಳ ಪ್ರಮುಖರಾದ ಕೆ.ಎಸ್.ಲಕ್ಷ್ಮಿ, ಬಿ.ರಾಜಶೇಖರ ಮೂರ್ತಿ, ಕೆ. ವೆಂಕಟೇಶ್ ಚಿಕ್ಕರಾಜು ಶಾರದಾ.ಕೆ.ಎಸ್ ಹೇಳಿದರು[ಪ್ರೇಮಲತಾ ಪ್ರಕರಣವೇನು?]
ದೂರು ನೀಡಿರುವ ಸಂತ್ರಸ್ತೆಯ ನೆರವಿಗೆ ನಿಂತವರ ತೇಜೋವಧೆ ಮಾಡಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿದ್ದು ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿದವು.
ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಮೇಲೆ ಪ್ರೇಮಲತಾ ದಿವಾಕರ್ ಸಲ್ಲಿಸಿದ್ದ ಅತ್ಯಾಚಾರ ಆರೋಪದ ವಿಚಾರಣೆಯನ್ನು ನಡೆಸುತ್ತಿರುವ ಸಿಐಡಿ ತಂಡಕ್ಕೆ ಯಕ್ಷಗಾನ ಕಲಾವಿದೆ ಸಲ್ಲಿಕೆ ಮಾಡಿರುವ ಎರಡನೇ ದೂರಿನ ವಿಚಾರಣೆಯನ್ನು ವಹಿಸಲಾಗಿದೆ.