ಹಾಸನದಲ್ಲಿ ಭಾರೀ ಮಳೆಗೆ ಮನೆ ಕುಸಿದು ಮಹಿಳೆ ಸಾವು
ಹಾಸನ, ಜುಲೈ 26: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಕೆಲವೆಡೆ ಪ್ರದೇಶಗಳು ಮುಳುಗಡೆಯಾಗಿದ್ದರೆ, ಇನ್ನು ಕೆಲವೆಡೆ ಮರಗಿಡಗಳು ಧರಗುರುಳಿವೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ದೊಡ್ಡ ಮೇಟಿ ಕುರ್ಕೆ ಎಂಬಲ್ಲಿ ಮಂಗಳವಾರ ರಾತ್ರಿ ಎಡೆಬಿಡದೆ ಸುರಿದ ಮಳೆಗೆ ಮನೆ ಕುಸಿದು 62 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಜೂನ್ನಲ್ಲಿ ನೈರುತ್ಯ ಮುಂಗಾರು ಪ್ರಾರಂಭವಾದ ನಂತರ ಜಿಲ್ಲೆಯಲ್ಲಿ ಇದು ಮೊದಲ ಸಾವಾಗಿದೆ.

ಮೃತರನ್ನು ಗೌರಮ್ಮ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಪತಿ ನಟರಾಜ್ ಗಾಯಗೊಂಡಿದ್ದು, ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಗೆ ಮಣ್ಣಿನ ಗೋಡೆಗಳಿದ್ದು, ಇನ್ನೂ ನಿರ್ಮಾಣ ಹಂತದಲ್ಲಿರುವ ಈ ಮನೆಗೆ ಗೌರಮ್ಮ ಎರಡು ತಿಂಗಳ ಹಿಂದೆ ಕುಟುಂಬ ಸಮೇತ ವಾಸವಿದ್ದರು ಎಂದು ಹಾಸನ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಶಾಸಕ ಕೆ.ಎಂ.ಶಿವಲಿಂಗೇಗೌಡ ಭೇಟಿ ನೀಡಿದ್ದರು. ಜೂನ್ನಲ್ಲಿ ನೈಋತ್ಯ ಮಾನ್ಸೂನ್ ಪ್ರಾರಂಭವಾದಾಗಿನಿಂದ ಜಿಲ್ಲೆಯಲ್ಲಿ ಎರಡು ಪ್ರಮುಖ ಭೂಕುಸಿತ ಸಂಭವಿಸಿದೆ. ಮಳೆಯಿಂದಾಗಿ ಇಬ್ಬರು ಗಾಯಗೊಂಡಿದ್ದಾರೆ, ಏಳು ಜಾನುವಾರುಗಳು ಸಾವನ್ನಪ್ಪಿವೆ. ಐದು ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ, 75 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಮತ್ತು 315 ಸರ್ಕಾರಿ ಶಾಲೆಗಳು, 81 ಅಂಗನವಾಡಿಗಳು ಮತ್ತು ಇತರ ಎಂಟು ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ.
ಹಾಸನ ಜಿಲ್ಲೆಯಲ್ಲಿ ಈವರೆಗೆ ಸುರಿದ ಮಳೆಗೆ 34 ಟ್ರಾನ್ಸ್ಫಾರ್ಮರ್ಗಳು, 334 ವಿದ್ಯುತ್ ಕಂಬಗಳು, 2.02 ಕಿಮೀ ಉದ್ದದ ವಿದ್ಯುತ್ ಮಾರ್ಗಗಳು, 111.49 ಕಿಮೀ ರಸ್ತೆಗಳು, 28 ಟ್ಯಾಂಕ್ಗಳು, ಒಂದು ಸೇತುವೆ ಹಾನಿಯಾಗಿದೆ.
ತೋಟ ನೋಡಲು ತೆರಳಿದ್ದಾಕೆ ಸಾವು:
ಇನ್ನು ಚಿಕ್ಕಮಗಳೂರಿನಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿ ಮೂರನೇ ಸಾವು ಸಂಭವಿಸಿದೆ. ಅಡಿಕೆ ತೋಟ ನೋಡಲು ತೆರಳಿದ್ದ ವೃದ್ಧೆ ನಾಪತ್ತೆಯಾಗಿದ್ದರು. ಈಗ ಅವರು ತಾಯಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದು ಅವರ ಶವ ಪತ್ತೆಯಾಗಿದೆ. ಹೊಸಸಿದ್ರಳ್ಳಿ ಗ್ರಾಮದ ರೇವಮ್ಮ (62) ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ತಾಯಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ ತಾಯಿ ಹಳ್ಳ ತುಂಬಿ ಹರಿಯುತ್ತಿದೆ. ತಾಯಿ ಹಳ್ಳದಲ್ಲಿ ವೃದ್ಧೆಯ ಶವ ಪತ್ತೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೊಸಸಿದ್ರಳ್ಳಿ ಗ್ರಾಮದಲ್ಲಿ ಘಟನೆ ವರದಿಯಾಗಿದೆ.












Click it and Unblock the Notifications