ಕೂಡಲೇ ವೈದ್ಯರು ಕರ್ತವ್ಯಕ್ಕೆ ಹಾಜರಾಗುವಂತೆ ಕೋರ್ಟ್ ಖಡಕ್ ಆದೇಶ
ಬೆಂಗಳೂರು, ನವೆಂಬರ್ 17: ಖಾಸಗಿ ವೈದ್ಯರು ನಡೆಸುತ್ತಿರುವ ಧರಣಿಯನ್ನು ಮೊಟಕುಗೊಳಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ಹೊರಡಿಸಿದೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ತಿದ್ದುಪಡಿ ಮಸೂದೆ ವಿರೊಧಿಸಿ ವೈದ್ಯರು ಮುಷ್ಕರ ನಡೆಸುತ್ತಿರುವುದನ್ನು ಪ್ರಶ್ನಿಸಿ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ ಕೋರ್ಟ್ ಸರ್ಕಾರ ಮತ್ತು ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರದ ಪರ ಹಾಗೂ ಖಾಸಗಿ ವೈದ್ಯರ ಪರ ವಕೀಲರ ವಾದ ಆಲಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, 'ಮಸೂದೆ ಪ್ರಶ್ನಿಸಲು ಕಾನೂನು ಇದೆ, ಕೋರ್ಟ್ ಇದೆ, ಮಸೂದೆ ಮಂಡನೆ ಮಾಡುವ ಮುನ್ನ ಈ ರೀತಿ ಬೀದಿಗಿಳಿಯುವುದು ಎಷ್ಟು ಸರಿ?
ಜನರ ಜೀವಗಳ ಜತೆ ಚೆಲ್ಲಾಟ ಆಡುತ್ತಿರುವ ನೀವು ನಾಗರಿಕರೆ? ನಿಮ್ಮ ಬಗ್ಗೆ ನಮಗೆ ಗೌರವ ಇದೆ ಅದನ್ನು ಉಳಿಸಿಕೊಳ್ಳಿ. ಕೂಡಲೇ ಪ್ರತಿಭಟನೆಯನ್ನು ಹಿಂಪಡೆದು ಕರ್ತವ್ಯಕ್ಕೆ ಹೋಗುವಂತೆ ಕೋರ್ಟ್ ಎಂದು ಖಡಕ್ ಎಚ್ಚರಿಕೆ ನೀಡಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.