ಭೂ ಪರಿವರ್ತನೆ ಕಾಲಾವಧಿ ಏಳು ದಿನಗಳಿಗೆ ಇಳಿಕೆ: ಮಸೂದೆ ಅಂಗೀಕಾರ
ಬೆಳಗಾವಿ, ಡಿಸೆಂಬರ್ 23: ಯೋಜನಾ ಪ್ರಾಧಿಕಾರ ಹೊಂದಿರುವ ಪ್ರದೇಶಗಳಲ್ಲಿ ಭೂ ಪರಿವರ್ತನೆ ಕಾಲಾವಧಿಯನ್ನು ಒಂದು ತಿಂಗಳಿನಿಂದ ಏಳು ದಿನಗಳಿಗೆ ಇಳಿಸುವ ಮಸೂದೆಗೆ ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರ ದೊರೆಯಿತು.
ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ ಮಂಡಿಸಿದ ಕರ್ನಾಟಕ ಭೂ ಕಂದಾಯ ವಿಧೇಯಕ -22 ಮಂಡಿಸಿದಾಗ ಕೆಲ ಸಲಹೆ ಸೂಚನೆಗಳು ನೀಡಿ ಒಪ್ಪಿಗೆ ನೀಡಲಾಯಿತು.
ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 30 ದಿನಗಳು ಇರುವ ಭೂ ಪರಿವರ್ತನಾ ಅವಧಿಯನ್ನು 7 ದಿನಗಳಿಗೆ ಇಳಿಸಲು ಈ ವಿಧೇಯಕ ಮಂಡಿಸಲಾಗಿದೆ ಎಂದು ಕಂದಾಯ ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳಿಗೆ ಅರ್ಹ ದಾಖಲೆ ಸಮೇತ ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಭೂ ಪರಿವರ್ತನಾ ಆದೇಶವಾಗದಿದ್ದರೆ ಅದು ತನ್ನಿಂದ ತಾನೇ (ಡೀಮ್ಡ್)ಭೂ ಪರಿವರ್ತನೆ ಆಗಿದೆ ಎಂದು ಭಾವಿಸಬೇಕಾಗುತ್ತದೆ ಅದಕ್ಕೆ ಈ ವಿಧೇಯಕ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಅಶೋಕ ವಿವರಿಸಿದರು.

ಇದು ಕೇವಲ ಯೋಜನಾ ಪ್ರಾಧಿಕಾರ ಹೊಂದಿರುವ ಪ್ರದೇಶಗಳಿಗೆ ಅನ್ವಯವಾಗಲಿದ್ದು,ಉಳಿದಂತೆ ಗ್ರಾಮೀಣ ಪ್ರದೇಶದಲ್ಲಿ ಒಂದು ತಿಂಗಳಿನ ಅವಧಿ ಮುಂದುವರೆಯಲಿದೆ ಎಂದು ಹೇಳಿದರು.
ಎಚ್.ಕೆ.ಪಾಟೀಲ್,ಆರ್.ರಮೇಶ್ಕುಮಾರ್,ಶಿವಲಿಂಗೇಗೌಡ,ಅರವಿಂದ ಲಿಂಬಾವಳಿ ಸೇರಿದಂತೆ ಇನ್ನಿತರ ಕೆಲ ಸದಸ್ಯರ ಸಲಹೆ ಒಪ್ಪಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಯಿತು.
ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನೀಡುವ ಪರಿಹಾರಧನ ರೂ.15 ಲಕ್ಷಕ್ಕೆ ಹೆಚ್ಚಳ: ಆರ್.ಅಶೋಕ
ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ರೂ.7.5 ಲಕ್ಷ ಪರಿಹಾರಧನವನ್ನು ರೂ.15 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಕಾಡನೆ ಹಾವಳಿ ಹೆಚ್ಚಿರುವ ಚಿಕ್ಕಮಗಳೂರು, ಹಾಸನ, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಗಜ ಕಾರ್ಯಪಡೆ (ಎಲೆಫೆಂಟ್ ಟಾಸ್ಕ್ ಪೋರ್ಸ್) ರಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಗುರುವಾರ ವಿಧಾನ ಪರಿಷತ್ ಕಲಾಪದಲ್ಲಿ ಶಾಸಕ ಪ್ರಾಣೇಶ್.ಎಂ.ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವರು ಉತ್ತರಿಸಿದರು. ಕಾಡಾನೆ ಹಾಗೂ ಇತರೆ ವನ್ಯಪ್ರಾಣಿಗಳು ಕಾಡಿನಿಂದ ಹೊರಬಾರದಂತೆ ತಡೆಯಲು ವನ್ಯಪ್ರಾಣಿಗಳಿಗಾಗಿ ಅರಣ್ಯ ಪ್ರದೇಶಗಳ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತ ಅರಣ್ಯಗಳಲ್ಲಿ ಕೆರೆಗಳ ನಿರ್ಮಾಣ ಹಾಗೂ ಇರುವ ಕೆರೆಗಳ ಪುನಶ್ಚೇತನಗೊಳಿಸಲಾಗಿದೆ.
ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ, ಕಂದಕ ಹಾಗೂ ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದುವರೆಗೂ 762 ಕಿ.ಮೀ ಆನೆ ತಡೆ ಕಂದಕ, 1106 ಕಿ.ಮೀ ಸೌರಶಕ್ತಿ ಬೇಲಿ, 100 ಕಿ.ಮೀ ರೈಲ್ವೆ ಹಳಿ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 150.95 ಕಿ.ಮೀ ಆನೆ ತಡೆ ಕಂದಕ, 285.88 ಕಿ.ಮೀ. ಸೌರಶಕ್ತಿ ಬೇಲಿ ಮತ್ತು 71.768 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 95 ಹಿಮ್ಮೆಟ್ಟಿಸುವ ಹಾಗೂ 33 ಕ್ಷಿಪ್ರ ಸ್ಪಂದನ ತಂಡ ರಚಿಸ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ವೈರ್ ಲೆಸ್ ಕಾಡಾನೆಗಳ ಮಾಹಿತಿ ಸಂಗ್ರಹಿಸಿಲು 24 ಗಂಟೆ ನಿರ್ವಹಿಸುವ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ.
ಕಾಡು ಪ್ರಾಣಿಯಿಂದ ಉಂಟಾಗುವ ಶಾಶ್ವತ ಅಂಗವಿಕಲತೆಗೆ ನೀಡಿತ್ತಿದ್ದ ಪರಿಹಾರಧನ ಮೊತ್ತವನ್ನು ರೂ.5 ರಿಂದ ರೂ.10 ಲಕ್ಷಕ್ಕೆ, ಭಾಗಶಃ ಅಂಗವಿಕಲತೆ ಮೊತ್ತವನ್ನು ರೂ.2.50 ಲಕ್ಷದಿಂದ ರೂ.5ಲಕ್ಷಕ್ಕೆ, ಗಾಯಗೊಂಡವರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.30 ಸಾವಿರದಿಂದ ರೂ.60 ಸಾವಿರಕ್ಕೆ, ಆಸ್ತಿ ನಷ್ಟದ ಮೊತ್ತವನ್ನು ರೂ.10 ಸಾವಿರದಿಂದ ರೂ.20 ಸಾವಿರಕ್ಕೆ ಹಾಗೂ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಧನಾತ್ಮಕ ಪರಿಹಾರದ ಜೊತೆಗೆ 5 ವರ್ಷದ ಅವಧಿ ನೀಡುತ್ತಿದ್ದ ಮಾಶಾಸನ ಮೊತ್ತ ರೂ.2 ಸಾವಿರವನ್ನು ರೂ.4 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.











Click it and Unblock the Notifications