ಹೊಸಕೋಟೆ ಉಪ ಚುನಾವಣೆ; ಅಪ್ಪ-ಮಗನ ನಡುವೆ ಜಟಾಪಟಿ!
ಬೆಂಗಳೂರು, ನವೆಂಬರ್ 01 : ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪದ್ಮಾವತಿ ಸುರೇಶ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತು ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಿ. ಎನ್. ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ನಡುವೆ ಬಿಜೆಪಿ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದೆ. ಶರತ್ ಬಚ್ಚೇಗೌಡ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ ಎಂದು ಪ್ರಚಾರ ನಡೆಸುತ್ತಿದ್ದಾರೆ.
ಬಿಜೆಪಿ ಟೆಕೆಟ್ ಪಡೆಯುವ ವಿಚಾರದಲ್ಲಿ ಬಚ್ಚೇಗೌಡ ಮತ್ತು ಶರತ್ ಬಚ್ಚೇಗೌಡ ನಡುವೆಯೇ ಅಸಮಾಧಾನ ಉಂಟಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿರುವ ಬಚ್ಚೇಗೌಡ ನನ್ನ ಮಗ ನನ್ನ ಮಾತನ್ನು ಕೇಳುತ್ತಿಲ್ಲ ಎಂದು ದೂರನ್ನು ಹೇಳಿದ್ದಾರೆ.
"ನನ್ನ ಮಗ ಮನೆಗೆ ಬರುತ್ತಿಲ್ಲ. ನಾನು ಅವನ ಪರ ಉಪ ಚುನಾವಣೆಯಲ್ಲಿ ಪ್ರಚಾರ ಮಾಡಲ್ಲ" ಎಂದು ಬಚ್ಚೇಗೌಡ ಹೇಳಿದರು. ಎಂಟಿಬಿ ನಾಗರಾಜ್ ಟಿಕೆಟ್ ಪಡೆಯಲು ಪ್ರಯತ್ನ ಮುಂದುವರೆಸಿದ್ದು, ಯಡಿಯೂರಪ್ಪ ಸಹಾಯವನ್ನು ಕೇಳಿದ್ದಾರೆ.

ನಾನು ಮಗನ ಪರವಾಗಿ ಪ್ರಚಾರ ಮಾಡೋಲ್ಲ
ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಮಾತನಾಡಿದ ಚಿಕ್ಕಬಳ್ಳಾಪುರ ಸಂಸದ ಬಿ. ಎನ್. ಬಚ್ಚೇಗೌಡ, "ಮಗ ಶರತ್ ಬಚ್ಚೇಗೌಡ ಪರ ಪ್ರಚಾರ ಮಾಡಲ್ಲ. ನಾನು ಬಿಜೆಪಿಯಲ್ಲಿರೋ ಬಚ್ಚೇಗೌಡ. ಹೇಗೆ ಪ್ರಚಾರ ಮಾಡಲಿ?" ಎಂದು ಪ್ರಶ್ನೆ ಮಾಡಿದರು.

ನನ್ನ ಮಗ ಮನೆಗೆ ಬರುತ್ತಿಲ್ಲ
"ನನ್ನ ಮಗ ಮನೆಗೆ ಬರುತ್ತಿಲ್ಲ. ಅವನು ಬೇರೆ ಕಡೆ ಇದ್ದಾನೆ. ನಾನು ಬಿಜೆಪಿಯಿಂದ ಸಂಸದನಾಗಿದ್ದೇನೆ. ನನ್ನ ಮಗನ ತೀರ್ಮಾನ ಅವನಿಗೆ ಬಿಟ್ಟಂತಹ ವಿಚಾರ. ಅವನು ವಿದ್ಯಾವಂತ, ಬುದ್ಧಿವಂತ ಅವರ ತೀರ್ಮಾನ ಅವನಿಗೆ ಬಿಟ್ಟಂತಹದ್ದು. ಮಗನ ವಿಚಾರದಲ್ಲಿ ನಾನು ಮಧ್ಯ ಪ್ರವೇಶ ಮಾಡಲ್ಲ" ಎಂದು ಬಚ್ಚೇಗೌಡ ಹೇಳಿದರು.

ಟಿಕೆಟ್ ವಿಚಾರಕ್ಕೆ ಜಟಾಪಟಿ
ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರಕ್ಕೆ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ ಜಟಾಪಟಿ ನಡೆಯುತ್ತಿದೆ. ಬಿಜೆಪಿ ಟಿಕೆಟ್ ಬೇಕು ಎಂದು ಕಳೆದ ಚುನಾವಣೆಯಲ್ಲಿ ಸೋತಿದ್ದ ಶರತ್ ಪಟ್ಟು ಹಿಡಿದಿದ್ದಾರೆ. ಆದರೆ, ಎಂಟಿಬಿ ನಾಗರಾಜ್ಗೆ ಟಿಕೆಟ್ ನೀಡಬೇಕು ಎಂಬುದು ಬಿಜೆಪಿ ನಾಯಕರ ತೀರ್ಮಾನ.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ
ಬಿಜೆಪಿ ಎಂಟಿಬಿ ನಾಗರಾಜ್ಗೆ ಟಿಕೆಟ್ ನೀಡಿದರೆ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಟಿಕೆಟ್ ಸಿಗದಿದ್ದರೂ ಚುನಾವಣಾ ಕಣಕ್ಕಿಳಿಯುವುದು ಖಚಿತ ಎಂದು ಹೇಳುತ್ತಲೇ ಶರತ್ ಬಚ್ಚೇಗೌಡ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದಾರೆ.












Click it and Unblock the Notifications