ಸಿದ್ದರಾಮಯ್ಯನವರ ಈ ಗಂಭೀರ ಪ್ರಶ್ನೆಗೆ ಬಿಜೆಪಿಯಿಂದ ಉತ್ತರ ಸಿಕ್ಕಿತೇ?
ಬೆಂಗಳೂರು, ಡಿ 27: ಪೌರತ್ವ ತಿದ್ದುಪಡಿ ಮಸೂದೆ ಮತ್ತು ಮಂಗಳೂರು ಗಲಭೆಯ ವಿಚಾರದಲ್ಲಿ ಸಾಲುಸಾಲು ಟ್ವೀಟ್ ಮಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸರಕಾರಕ್ಕೆ ಹೊಸ ಸವಾಲೊಂದನ್ನು ಹಾಕಿದ್ದಾರೆ.
ಸದ್ಯ ದೇಶಾದ್ಯಂತ ಅಶಾಂತಿಗೆ ಕಾರಣವಾಗಿರುವ ಪೌರತ್ವ ವಿಚಾರದಲ್ಲಿನ ಪ್ರತಿಭಟನೆಯ ವೇಳೆ, ಸಾರ್ವಜನಿಕ ಆಸ್ತಿಪಾಸ್ತಿ ನಾಶವಾದರೆ, ಗಲಭೆಕೋರರ ಆಸ್ತಿಯನ್ನು ಮುಟ್ಟುಗೋಲು ಹಾಕುವ ವಿಚಾರದಲ್ಲಿ, ಕರ್ನಾಟಕ ಸರಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಬಿಜೆಪಿಗೆ ಪ್ರಶ್ನೆಯೊಂದನ್ನು ಹಾಕಿದ್ದಾರೆ. ಅದು ಹೀಗಿದೆ, "ರಾಜ್ಯದ @BJP4Karnataka ಸರ್ಕಾರ ಗಲಭೆಕೋರರ ಆಸ್ತಿಯನ್ನು ಮುಟ್ಟುಗೋಲು ಹಾಕಲು ಚಿಂತನೆ ನಡೆಸಿದೆಯಂತೆ".

"ಇದನ್ನು ಪೂರ್ವಾನ್ವಯವಾಗಿ ಜಾರಿಗೊಳಿಸಿ ಹಿಂದಿನ ಗಲಭೆಗಳಲ್ಲಿ ಆರೋಪಿಗಳಾಗಿರುವ ಬಿಜೆಪಿ ನಾಯಕರ ಮೇಲೂ ಕ್ರಮಕೈಗೊಳ್ಳಲು ಸರ್ಕಾರ ಸಿದ್ದ ಇದೆಯೇ?" ಇದು ಸಿದ್ದರಾಮಯ್ಯನವರು ಹಾಕಿರುವ ಸವಾಲು.
"ಆಸ್ತಿಪಾಸ್ತಿಗಳಿಗೆ ತೊಂದರೆಯಾದರೆ, ಗಲಭೆಕೋರರ ಆಸ್ತಿಗಳನ್ನು ಉತ್ತರಪ್ರದೇಶದ ಸರಕಾರದಂತೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು" ಎಂದು, ಕಂದಾಯ ಮತ್ತು ಪೌರಾಡಳಿತ ಸಚಿವ ಆರ್. ಅಶೋಕ್ ಎಚ್ಚರಿಕೆಯನ್ನು ನೀಡಿದ್ದರು.
"ಚುನಾಯಿತ ಸರ್ಕಾರವೊಂದು ಇಷ್ಟು ಅಮಾನವೀಯ, ಕ್ರೂರಿ ಕೋಮುವಾದಿ ಆಗಬಾರದು. ಮಂಗಳೂರು ಗಲಭೆಯಲ್ಲಿ ಸತ್ತವರಿಗೆ ಪರಿಹಾರ ಇಲ್ಲ ಎಂದು ಹೇಳಿರುವ @BSYBJP ನಿರೀಕ್ಷೆಯಂತೆ ತನಿಖೆಯ ಮೊದಲೇ ತೀರ್ಪು ನೀಡಿದ್ದಾರೆ" ಎಂದು ಸಿದ್ದರಾಮಯ್ಯ, ಗಲಭೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಮೊತ್ತ ಬಿಡುಗಡೆ ತಡೆ ನೀಡಿರುವ ವಿಚಾರದಲ್ಲಿ ಟ್ವೀಟ್ ಮಾಡಿದ್ದರು.












Click it and Unblock the Notifications