'ಕೈ' ನಾಯಕರ ಅತೃಪ್ತಿ ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಬೀರುತ್ತಾ?
Recommended Video
ಡಿಸೆಂಬರ್ 22ರ ಬಳಿಕ ರಾಜ್ಯದ ಮೈತ್ರಿ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಾ? ಎಂಬ ಸಂಶಯ ಎದ್ದು ಕಾಣುತ್ತಿದ್ದು ಇದಕ್ಕೆ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ಪೂರಕವಾಗಿರುವುದು ಗೋಚರಿಸುತ್ತಿದೆ.
ಒಂದೆಡೆ ಕಾಂಗ್ರೆಸ್ ಶಾಸಕಾಂಗ ಸಭೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿದ್ದರೆ, ಮತ್ತೊಂದೆಡೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚೆಲುರಾಯಸ್ವಾಮಿ ಅವರ ನೇತೃತ್ವದಲ್ಲಿ ಅತೃಪ್ತರ ನಾಯಕರ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದೆರಡನ್ನು ಗಮನಿಸಿದರೆ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನವಿರುವುದು ಗುಟ್ಟಾಗಿ ಉಳಿದಿಲ್ಲ.
ಕಳೆದ ಏಳು ತಿಂಗಳಿನಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಹಲವು ಸಂದರ್ಭಗಳಲ್ಲಿ ಬಯಲಾಗಿದೆ. ಅದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ನ ಹಲವು ಶಾಸಕರು ತಮಗೆ ಸಚಿವ ಸ್ಥಾನ ಇವತ್ತು ಸಿಗುತ್ತೆ ನಾಳೆ ಸಿಗುತ್ತೆ ಎಂದು ಕಾಯುತ್ತಲೇ ಬರುತ್ತಿದ್ದಾರೆ.
ಡಿ.22ಕ್ಕೆ ಸಂಪುಟ ವಿಸ್ತರಣೆ ಅಲ್ಲ, ಪುನಾರಚನೆ: ಸಚಿವರಿಗೆ ಆತಂಕ
ಸಚಿವ ಸಂಪುಟ ವಿಸ್ತರಣೆಯ ದಿನಾಂಕಗಳು ಮುಂದೂಡುತ್ತಲೇ ಬಂದಿದ್ದರಿಂದ ಕಾದು ಸುಸ್ತಾದ ಶಾಸಕರು ರೆಬಲ್ ಆಗಿರುವುದಂತು ನಿಜ. ಜತೆಗೆ ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಸಾಧಿಸಿದ ಕಾಂಗ್ರೆಸ್ನಲ್ಲಿ ಹುರುಪು ಬಂದಿದೆ. ಜತೆಗೆ ಕಾಂಗ್ರೆಸ್ ಗಾಳಿ ಎಲ್ಲೆಡೆ ಬೀಸುತ್ತಿದೆ ಎಂಬ ಆತ್ಮವಿಶ್ವಾಸವೂ ಅವರಲ್ಲಿ ಬಂದಂತಿದೆ. ಹೀಗಾಗಿ ನಾವೇಕೆ ಜೆಡಿಎಸ್ಗೆ ಶರಣಾಗಿ ಐದು ವರ್ಷವೂ ಅವರೇ ಮುಖ್ಯಮಂತ್ರಿಯಾಗಿ ಉಳಿಯಲು ಅವಕಾಶ ಮಾಡಿಕೊಡಬೇಕು? ನಮ್ಮ ಪಕ್ಷದ ಮುಖ್ಯಮಂತ್ರಿ ರಾಜ್ಯದಲ್ಲಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ಅನುಕೂಲವಾಗಲಿದೆ, ಜತೆಗೆ ಬಿಜೆಪಿಗೂ ತಕ್ಕ ಶಾಸ್ತಿ ಮಾಡಬಹುದು ಎಂಬ ಲೆಕ್ಕಚಾರವೂ ಕಾಂಗ್ರೆಸ್ ನಾಯಕರಲ್ಲಿದೆ.
ಖಾತೆ ಯಾರಿಗೆ ಹಂಚಲಿದ್ದಾರೆ ಎಚ್ಡಿಕೆ?
ಎಲ್ಲವನ್ನೂ ಮನಗಂಡಿರುವ ಕೈ ನಾಯಕರು ಇದೀಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಒತ್ತಡ ತಂದು ಸಂಪುಟ ವಿಸ್ತರಣೆಗೆ ಮುಂದಾಗುವಂತೆ ಮಾಡಿದ್ದಾರೆ. ಈಗಾಗಲೇ ಹಲವು ಖಾತೆಗಳನ್ನು ತನ್ನ ಬಳಿಯೇ ಇಟ್ಟುಕೊಂಡಿರುವ ಕುಮಾರಸ್ವಾಮಿ ಅವರು ಅದನ್ನು ಯಾರಿಗೆ ನೀಡುತ್ತಾರೆ ಎಂಬುದು ಬಹು ಮುಖ್ಯವಾಗಿದೆ.
ಇರುವ ಐದಾರು ಖಾತೆಗೆ ಸುಮಾರು ಇಪ್ಪತ್ತೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ಹೀಗಿರುವಾಗ ಯಾರಿಗೆ ನೀಡುವುದು ಎಂಬುದು ಕಾಂಗ್ರೆಸ್ ನಾಯಕರ ತಲೆ ನೋವಿಗೆ ಕಾರಣವಾಗಿದೆ. ಜತೆಗೆ ಯಾವ ಮಾನದಂಡವನ್ನು ಅನುಸರಿಸಿ ಶಾಸಕರಿಗೆ ಸಚಿವ ಸ್ಥಾನ ನೀಡುತ್ತಾರೆ ಎಂಬುದೇ ಬಹು ಮುಖ್ಯವಾಗಿದೆ. ಸದ್ಯ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಡಿಸಿಎಂ ಪರಮೇಶ್ವರ್ ಅವರು ದೆಹಲಿಗೆ ತೆರಳಲಿದ್ದಾರೆ.
ಮಹತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಮುಖ್ಯಾಂಶಗಳು
ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಕೆಲವರ ಗೈರು
ಅದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಕರೆದಿದ್ದು, ಇದಕ್ಕೆ ಕೇವಲ 58 ಶಾಸಕರು ಮಾತ್ರ ಹಾಜರಾಗಿದ್ದು ಉಳಿದವರು ಗೈರು ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನೊಂದೆಡೆ ಕಾಂಗ್ರೆಸ್ನಲ್ಲಿರುವ ಅತೃಪ್ತ ನಾಯಕರು ಮಾಜಿ ಸಚಿವ ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಇವರೆಲ್ಲ ಹೇಗಿದ್ದರೂ ಜೆಡಿಎಸ್ ನಿಂದ ಕಾಂಗ್ರೆಸ್ಸಿಗೆ ವಲಸೆ ಹೋದವರು. ಇವರು ಇಲ್ಲೂ ಇಲ್ಲ ಅಲ್ಲೂ ಇಲ್ಲದಂತೆ ಅತಂತ್ರರಾಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೂ ಅಚ್ಚರಿಪಡಬೇಕಾಗಿಲ್ಲ.
ಸಚಿವ ಸಂಪುಟ ವಿಸ್ತರಣೆ : ಕಾಂಗ್ರೆಸ್ ಶಾಸಕರಿಗೆ ಕಾದಿದೆ ನಿರಾಸೆ?
ಜೆಡಿಎಸ್ ಶಾಸಕರಿಂದ ಕಾಂಗ್ರೆಸ್ ನಾಯಕರು ಮೂಲೆಗುಂಪು
ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಇದುವರೆಗೆ ಸಚಿವ ಸ್ಥಾನ ಹೊಂದಿರುವ ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರನ್ನು ಜೆಡಿಎಸ್ನವರು ಮೂಲೆಗುಂಪು ಮಾಡಿದ್ದಾರೆ ಎಂಬು ಕೂಗು ಕೇಳಿ ಬರುತ್ತಲೇ ಇದೆ. ಒಂದು ವೇಳೆ ಸಂಪೂರ್ಣ ಐದು ವರ್ಷವೂ ಕಾಂಗ್ರೆಸ್ ಬೆಂಬಲದಿಂದ ಜೆಡಿಎಸ್ ಆಡಳಿತ ನಡೆಸಿದ್ದೇ ಆದರೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ನಗಣ್ಯವಾಗಿ ಬಿಡಬಹುದು ಎಂಬ ಭಯವೂ ಕಾಡತೊಡಗಿದೆ. ಆದರೆ, ಕಾಂಗ್ರೆಸ್ ನಲ್ಲಿ ನಡೆದಿರುವ ತಾಕಲಾಟಗಳಿಂದ ಜೆಡಿಎಸ್ ಪಕ್ಷಕ್ಕೆ ಕಳೆದುಕೊಳ್ಳುವಂಥದ್ದೇನೂ ಇಲ್ಲ. ಏಕೆಂದರೆ, ಸಿಕ್ಕಷ್ಟು ಅವಕಾಶದಲ್ಲೇ ಸಾಕಷ್ಟು ಅಧಿಕಾರ ಅನುಭವಿಸಿಯಾಗಿದೆ.
ಹೈಲೈಟ್ ಆಗುತ್ತಿರುವುದು ಕುಮಾರಸ್ವಾಮಿ
ಇದುವರೆಗೆ ಹಲವು ಘಟನೆಗಳು ನಡೆದಿವೆ. ಎಲ್ಲ ಸಂದರ್ಭಗಳಲ್ಲಿಯೂ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರೇ ಎಲ್ಲವನ್ನು ಮೈಮೇಲೆ ಎಳೆದುಕೊಳ್ಳುವ ಮೂಲಕ ಹೈಲೈಟ್ ಆಗುತ್ತಿದ್ದಾರೆ. ಯಾವುದೇ ಘಟನೆಗಳು ನಡೆಯಲಿ ಅಲ್ಲಿ ಮೊದಲಿಗೆ ಹಾಜರಾಗುವುದೇ ಜೆಡಿಎಸ್ನ ನಾಯಕರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಮಿಂಚಿದ್ದು ಜೆಡಿಎಸ್ ನಾಯಕರೇ. ಕಾಂಗ್ರೆಸ್ ಸಚಿವರು ಉಸ್ತುವಾರಿ ಇರುವ ಜಿಲ್ಲೆಗಳಲ್ಲಿಯೂ ಜೆಡಿಎಸ್ ಸಚಿವರು ಮುಂಚೂಣಿಗೆ ಬಂದು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿರುವುದು ಭವಿಷ್ಯದಲ್ಲಿ ಕಾಂಗ್ರೆಸ್ ನಾಯಕರಿಗೆ ಹೊಡೆತ ನೀಡುವುದಂತು ಸತ್ಯ.
ವಿಷಾಹಾರ ಸೇವೆ ದುರಂತ ನಡೆದಾಗಲೂ...
ಚಾಮರಾಜನಗರದಲ್ಲಿ ವಿಷ ಮಿಶ್ರಿತ ದೇವರ ಪ್ರಸಾದ ಸೇವಿಸಿ ನಡೆದ ದುರಂತ ಪ್ರಕರಣವನ್ನೇ ತೆಗೆದುಕೊಳ್ಳಿ. ವಿಷಯ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೈಸೂರಿಗೆ ಓಡೋಡಿ ಬಂದರು. ಜತೆಗೆ ಸಚಿವ ಪುಟ್ಟರಾಜು, ಸಾ.ರಾ. ಮಹೇಶ್ ಹೀಗೆ ಹಲವು ನಾಯಕರು ಬಂದು ಮಾಡಬೇಕಾದ ಕೆಲಸ ಕಾರ್ಯಗಳನ್ನು ಮಾಡಿದರು. ಆದರೆ ಜಿಲ್ಲಾ ಉಸ್ತುವಾರಿ ಹೊಂದಿದ್ದ ಪುಟ್ಟರಂಗಶೆಟ್ಟಿ ಅವರಿಗೆ ಅಲ್ಲಿಯ ಯಾವ ಮಾಹಿತಿಯೂ ಲಭ್ಯವಾಗಿರಲಿಲ್ಲ. ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರ ನೀಡಲು ತಿಣುಕಾಡ ಬೇಕಾಯಿತಲ್ಲದೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿ ಜನರ ಆಕ್ರೋಶಕ್ಕೆ ಕಾರಣವಾಯಿತು.
ಇದೆಲ್ಲವನ್ನು ಗಮನಿಸುತ್ತಾ ಹೋದರೆ ಎಲ್ಲೊ ಒಂದು ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಆಡಳಿತ ನಡೆಸುತ್ತಿದ್ದರೂ ಜನ ಮಾತ್ರ ಕುಮಾರಸ್ವಾಮಿ ಸರ್ಕಾರ ಅಂತನೇ ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ ನಾಯಕರ ಭಯಕ್ಕೂ ಕಾರಣವಾಗಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.