ಪತ್ರಕರ್ತರ ಮೇಲೆ ಇಂಥ ಕ್ರೌರ್ಯ ಏಕೆ: ರವಿ ಬೆಳಗೆರೆ
"ನಮಗೆ ಕೋರ್ಟ್ ನ ಮೊರೆ ಹೋಗುವುದು ಬಿಟ್ಟು ಬೇರೆ ದಾರಿ ಅಥವಾ ಆಯ್ಕೆಯಿಲ್ಲ. ಪತ್ರಕರ್ತರ ಮೇಲೆ ಇಂಥ ಕ್ರೌರ್ಯ ಏಕೆ ಅನ್ನೋದು ನನಗೆ ಅರ್ಥ ಆಗ್ತಿಲ್ಲ" ಎಂದು ಹಾಯ್ ಬೆಂಗಳೂರ್ ವಾರಪತ್ರಿಕೆ ಸಂಪಾದಕ ಹಾಗೂ ಪತ್ರಕರ್ತರಾದ ರವಿ ಬೆಳಗೆರೆ ಬುಧವಾರ ಒನ್ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದರು.
ಪತ್ರಕರ್ತರಾದ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಬಂಧನಕ್ಕೆ ವಿಧಾನಸಭಾ ಸಚಿವಾಲಯದಿಂದ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಲಾಯಿತು. "ಇದು ಪತ್ರಕರ್ತರ ಧ್ವನಿಯನ್ನು ಅಡಗಿಸುವ ಪ್ರಯತ್ನ. ಶಾಸಕರ- ಸಚಿವರ ಭ್ರಷ್ಟಾಚಾರದ ಬಗ್ಗೆ ಬರೆಯಲೇಬಾರದು ಎಂದು ಪರೋಕ್ಷವಾಗಿ ಹೇಳುವಂತಿದೆ" ಎಂದರು.

ಮಾನನಷ್ಟ ಆಗುವಂಥ ವರದಿಯನ್ನು ನಾವು ಮಾಡಿದ್ದರೆ ಕೋರ್ಟ್ ಗೆ ಹೋಗಬಹುದಿತ್ತು. ಅಲ್ಲಿ ವಿಚಾರಣೆ ನಡೆದು, ನಾವು ತಪ್ಪಿತಸ್ಥರಾಗಿದ್ದರೆ ಶಿಕ್ಷೆ ಆಗಿರುತ್ತಿತ್ತು. ಆದರೆ ಇವರ ಉದ್ದೇಶ ಬೇರೆ ಇದ್ದ ಹಾಗಿದೆ. ಈ ಹಂತದಲ್ಲಿ ನಾನು ಇನ್ನು ಹೆಚ್ಚು ಮಾತನಾಡುವುದಿಲ್ಲ. ಮುಂದಿನ ಆಯ್ಕೆಯಾಗಿ ನ್ಯಾಯಾಲಯವಿದೆ. ಅಲ್ಲಿಗೆ ಮೊರೆ ಹೋಗ್ತೀನಿ. ಬರುವ ತೀರ್ಪಿನ ಅನುಸಾರ ನಡೆದುಕೊಳ್ತೀನಿ ಎಂದರು.
ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಇಬ್ಬರನ್ನೂ ಕೂಡಲೇ ಬಂಧಿಸಲು ಕ್ರಮ ಕೈಗೊಳ್ಳುವಂತೆ ವಿಧಾನಸಭಾ ಸಚಿವಾಲಯದಿಂದ ಗೃಹ ಇಲಾಖೆಗೆ ಪತ್ರ ಕಳುಹಿಸಲಾಗಿದೆ.
ಈ ಹಿಂದೆ ಹಕ್ಕುಬಾಧ್ಯತಾ ಸಮಿತಿಯಿಂದ ಶಿಫಾರಸು ಮಾಡಿದ್ದ ಒಂದು ವರ್ಷದ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ತೀರ್ಮಾನವನ್ನು ವಿಧಾನಸಭೆಯಲ್ಲಿ ಮಂಗಳವಾರ ಎತ್ತಿ ಹಿಡಿಯಲಾಗಿದೆ. ಸದನದ ನಿರ್ಣಯವನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ.












Click it and Unblock the Notifications