ಕೈಮೀರಿ ಹೋಗಿರುವ ಕೊರೊನಾ: ಸ್ಪಷ್ಟ ಕಾರಣ, ಸರಕಾರದ 5 ಬೇಜಾಬ್ದಾರಿತನ
ವೀಕೆಂಡ್ ಕರ್ಫ್ಯೂ ಹೊರತಾಗಿಯೂ ಕರ್ನಾಟಕದಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಲೇ ಇದೆ. ಶವಸಂಸ್ಕಾರ ಮತ್ತು ಆಕ್ಸಿಜನ್ ಸಮಸ್ಯೆಗಳು ಒಂದು ಹಂತಕ್ಕೆ ದಾರಿಗೆ ಬರುತ್ತಿದೆಯಾದರೂ, ಸದ್ಯದ ಮಟ್ಟಿಗೆ ಈ ವಿಚಾರ ಸರಕಾರದ ಹಿಡಿತ ತಪ್ಪಿದಂತಿದೆ.
ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ಖುದ್ದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದರು. ಇಂತಹ ಸಂದರ್ಭದಲ್ಲಿ, ಹದಿನಾಲ್ಕು ದಿನಗಳ ಲಾಕ್ ಡೌನ್ ಆರಂಭವಾಗಿದೆ. ಸಾರ್ವಜನಿಕರ ಸಹಕಾರದೊಂದಿಗೆ ಈ ಲಾಕ್ ಡೌನ್ ಅವಧಿಯಲ್ಲಿ ಕೊರೊನಾ ಚೈನ್ ಬ್ರೇಕ್ ಆಗಲಿ ಎನ್ನುವುದು ಎಲ್ಲರ ಆಶಯ.
ಕೊರೊನಾ ಮೊದಲ ಅಲೆಯ ಅನುಭವವಿದ್ದರೂ, ಈ ಹಿಂದೆಯೂ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರೂ ಯಡಿಯೂರಪ್ಪ ಸರಕಾರ ಹೋದ ವರ್ಷದ ಆರೋಗ್ಯ ತುರ್ತುಪರಿಸ್ಥಿತಿಯ ವೇಳೆ ತೋರಿದ ಗಂಭೀರತೆಯನ್ನು ತೋರಲಿಲ್ಲ ಎನ್ನುವುದು ವಾಸ್ತವತೆ.
ಕೊರೊನಾ ಎರಡನೇ ಅಲೆ ಈ ಮಟ್ಟಿಗೆ ತೊಂದರೆಯನ್ನು ತಂದೊಡ್ಡಬಹುದು ಎನ್ನುವ ಲೆಕ್ಕಾಚಾರವಿಲ್ಲದ ಯಡಿಯೂರಪ್ಪ ಸರಕಾರ, ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಒಳಗಾಯಿತು. ಇದಕ್ಕೆ ಬಿಎಸ್ವೈ ಸರಕಾರದ ಬೇಜವಾಬ್ದಾರಿಯೇ ಕಾರಣ. ಸರಕಾರದ ಐದು ಬೇಜವಬ್ದಾರಿತನದ ನಿರ್ಧಾರಗಳು:

ಕೊರೊನಾ ಮಾರ್ಗಸೂಚಿ, ಬೆಳಗ್ಗೆಯೊಂದು , ಸಂಜೆಯೊಂದು ನಿರ್ಧಾರ
ಕೊರೊನಾ ಮಾರ್ಗಸೂಚಿಯ ವಿಚಾರದಲ್ಲಿ ಸರಕಾರ ಬೆಳಗ್ಗೆಯೊಂದು , ಸಂಜೆಯೊಂದು ನಿರ್ಧಾರಗಳನ್ನು ತೆಗೆದುಕೊಂಡು ಆಕ್ರೋಶಕ್ಕೆ ಗುರಿಯಾಗಿದ್ದು ಒಂದು ಕಡೆಯಾದರೆ, ನಗೇಪಟಾಲಿಗೂ ಗುರಿಯಾಯಿತು. ತೆಗೆದುಕೊಂಡ ನಿರ್ಧಾರದ ಮೇಲೆ ಹಿಡಿತವಿಲ್ಲದೇ ಮಾರ್ಗಸೂಚಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡು ಬಂತು. ಒತ್ತಡಕ್ಕೆ ಮಣಿಯುವ ಸರಕಾರದ ಬದಲಾವಣೆಗಳು, ಮೊದಲೇ ಕೊರೊನಾ ಬಗ್ಗೆ ಅಸಡ್ಡೆಯನ್ನು ಹೊಂದಿದ್ದ ಸಾರ್ವಜನಿಕರಿಗೂ ಇನ್ನಷ್ಟು ಕ್ಯಾರ್ ಲೆಸ್ ಆಗುವಂತೆ ಮಾಡಿತು.

ಮಂಜುನಾಥ ಪ್ರಸಾದ್ ಅಂತಹ ದಕ್ಷ ಅಧಿಕಾರಿಯ ವರ್ಗಾವಣೆ
ಕೊರೊನಾ ಎರಡನೇ ಅಲೆಯ ಬಗ್ಗೆ ತಾಂತ್ರಿಕ ಸಮಿತಿಯವರು ಎಚ್ಚರಿಕೆಯನ್ನು ನೀಡಿದ್ದರೂ, ಉಪಚುನಾವಣೆಯಲ್ಲಿ ಬ್ಯೂಸಿಯಾಗಿದ್ದ ಸರಕಾರ ಇದರ ಬಗ್ಗೆ ಗಮನಕೊಡಲಿಲ್ಲ. ಮಹಾರಾಷ್ಟ್ರದಲ್ಲಿ ಒಂದೇ ಸಮನೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದರೂ, ಸರಕಾರಕ್ಕೆ ಉಪ ಚುನಾವಣೆಯೇ ಹೆಚ್ಚಾಯಿತು. ಇದರಿಂದ ಸ್ವಾಭಾವಿಕವಾಗಿ ಅಧಿಕಾರಿಗಳು ಉದಾಸೀನತೆಯನ್ನು ತೋರಿದರು. ಮಂಜುನಾಥ ಪ್ರಸಾದ್ ಅಂತಹ ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡಲಾಯಿತು. ಮಂಗಳವಾರ (ಏ27) ಹೊರಡಿಸಲಾಗಿರುವ ಆದೇಶದಂತೆ ಪ್ರಸಾದ್ ಅವರನ್ನು ಬಿಬಿಎಂಪಿ ಆಯುಕ್ತರಿಗೆ ನೆರವು ಒದಗಿಸಲು ಸರಕಾರ ಸೂಚಿಸಲಾಗಿದೆ.

ಟೆಸ್ಟಿಂಗ್ ಪ್ರಮಾಣ ದಿನದಿಂದ ದಿನಕ್ಕೆ ಜಾಸ್ತಿ, ಪಾಸಿಟೀವ್ ಬಂದರೆ
ಆರೋಗ್ಯ ಇಲಾಖೆ ವಿಶೇಷ ಮುತುವರ್ಜಿ ತೆಗೆದುಕೊಂಡು ಟೆಸ್ಟಿಂಗ್ ಪ್ರಮಾಣವನ್ನು ದಿನದಿಂದ ದಿನಕ್ಕೆ ಜಾಸ್ತಿ ಮಾಡುತ್ತಾ ಸಾಗಿತು. ಟೆಸ್ಟಿಂಗ್ ರಿಪೋರ್ಟ್ ನಲ್ಲಿ ಪಾಸಿಟೀವ್ ಬಂದರೆ, ಹಿಂದಿನಂತೆ ಮಾರ್ಕಿಂಗ್ ಮಾಡುವುದನ್ನು ತಡಮಾಡಿತು. ಪಾಸಿಟೀವ್ ಬಂದವರಿಗೆ ಸ್ಪಷ್ಟ ನಿರ್ದೇಶನವಿರಲಿಲ್ಲ. ಹಾಗಾಗಿ, ಅವರಲ್ಲಿ ಹೆಚ್ಚಿನವರು ಗೃಹಬಂಧನಕ್ಕೆ ಒಳಗಾಗಲಿಲ್ಲ. ಇದು ವ್ಯಾಪಕ ಟೀಕೆಗೆ ಒಳಗಾದ ನಂತರ ಈ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲಾಯಿತು. ಅಷ್ಟೊತ್ತಿಗೆ ಇದು ಲೇಟ್ ಲತೀಫ್ ನಿರ್ಧಾರವಾಗಿತ್ತು.

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಸೋಂಕಿತರ ಪ್ರಮಾಣ ಹೆಚ್ಚು
ಪಕ್ಕದ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದರೂ, ಗಡಿ ಬಂದ್ ವಿಚಾರದಲ್ಲಿ ಸರಕಾರದ ಸ್ಪಷ್ಟ ನಿರ್ದೇಶನವೇ ಇರಲಿಲ್ಲ. ಬೆಳಗಾವಿ ಮತ್ತು ಕಾಸರಗೋಡು ಗಡಿಯಿಂದ ಜನರು ರಾಜ್ಯ ಪ್ರವೇಶಿಸುತ್ತಲೇ ಇದ್ದರು. ಈ ಎರಡು ಚೆಕ್ ಪೋಸ್ಟ್ ಗಳಿಂದ ತೊಂದರೆಯಾದರೆ, ಬೇರೆ ಕಡೆಯಿಂದ ರಾಜ್ಯಕ್ಕೆ ಪ್ರವೇಶಿಸಿದ್ದರು. ಸ್ಪಷ್ಟವಾಗಿ ಸರಕಾರದ ಉದಾಸೀನತೆ ಇಲ್ಲಿ ತೋರಿತ್ತು.
Recommended Video

ಸಹಾಯವಾಣಿ ಸತ್ತು ಹೋಗಿದೆ ಎಂದೇ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ
ಮೊದಲನೆಯ ಅಲೆಯ ವೇಳೆ ಸರಕಾರ ಸ್ಥಾಪಿಸಿದ್ದ ಸಹಾಯವಾಣಿ ಅಂತರಾಷ್ಟ್ರೀಯ ಮಟ್ಟದಲ್ಲಿ ಒಳ್ಲೆಯ ಹೆಸರನ್ನು ಮಾಡಿತ್ತು. ವೃತ್ತಿಪರ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು ನೇಮಿಸಿ ಉತ್ತಮ ಕೆಲಸವನ್ನೇ ಮಾಡಿತ್ತು. ಆದರೆ, ಈ ಬಾರಿ ಕೈತಪ್ಪಿ ಹೋಗಿರುವ ಪರಿಸ್ಥಿತಿಯಿಂದಾಗಿ ತಡವಾಗಿಯಾದರೂ, ವೃತ್ತಿಪರ ಅಧಿಕಾರಿಗಳನ್ನು ನೇಮಿಸಿದ್ದರೂ, ಇವರಿಂದ ಜನಮೆಚ್ಚುವ ಕೆಲಸವಾಗುತ್ತಿಲ್ಲ. ಸಹಾಯವಾಣಿ ಸತ್ತು ಹೋಗಿದೆ ಎಂದೇ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.












Click it and Unblock the Notifications