ಮಠಗಳು, ಮಠಾಧೀಶರು ಕಾನೂನಿಗಿಂತ ದೊಡ್ಡವರಾ?

'ಕಾನೂನು ಅಂಕುಶವಿಲ್ಲದ ಪರಮಾಧಿಕಾರ ಪರಮ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತದೆ. ಮಠಗಳು ಮತ್ತು ಮಠಾಧೀಶರ ವಿಚಾರದಲ್ಲಿ ಇದು ಸರಿ ಅನಿಸಲ್ವಾ? ಅವುಗಳನ್ನು ನಿಯಂತ್ರಿಸಲು ಕಾನೂನು ಏಕಿಲ್ಲ?' ಎಂದು ರಾಜ್ಯ ಸರಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ.
ಮೈಸೂರು ಜಿಲ್ಲೆಯ ಸೋಸಲೆ ವ್ಯಾಸರಾಜ ಮಠದ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿಎಸ್ ವಘೇಲಾ ಹಾಗೂ ನ್ಯಾ. ಎಸ್ಎನ್ ಸತ್ಯನಾರಾಯಣ ಅವರಿದ್ದ ವಿಭಾಗೀಯ ಪೀಠ ಮಠಗಳ ವ್ಯಾಪ್ತಿ, ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿತು.
ಮಠಗಳು ಯಾವ ಕಾನೂನಿನಡಿ ನಿರ್ವಹಿಸಲ್ಪಡುತ್ತವೆ? ಮಠಗಳು ಮತ್ತು ಮಠಾಧೀಶರು ಕಾನೂನಿಗೆ ಅತೀತರಾ? ಪರಮಾಧಿಕಾರ ಪರಮ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತದೆ ಎಂಬ ಮಾತು ಮಠಗಳ ವಿಚಾರದಲ್ಲಿ ಸರಿ ಅನಿಸುವುದಿಲ್ಲವೇ?
ಸೋಸಲೆ ಮಠದ ವಿಚಾರದಲ್ಲೂ ಮೇಲ್ನೋಟಕ್ಕೆ ಇದು ಕಂಡು ಬರುತ್ತಿಲ್ಲವೇ? ಕಾನೂನಿನ ವ್ಯಾಪ್ತಿಗೆ ತರದೇ ಇಲ್ಲಿವರೆಗೆ ಮಠದ ನಿರ್ವಹಣೆಗೆ ಅವಕಾಶ ಕೊಟ್ಟಿದ್ದು ಯಾವ ಆಧಾರದಲ್ಲಿ? ಈ ಎಲ್ಲ ವಿಚಾರಗಳು ಸರ್ಕಾರಕ್ಕೆ ಗೊತ್ತಿಲ್ಲವೆ? ಮಠಗಳ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಯಾವ ಕಾನೂನು ಇದೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.
ಸೋಸಲೆ ವ್ಯಾಸರಾಜ ಮಠದ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಏನು ಮಾಡುತ್ತದೆ? ಈವರೆಗೆ ಯಾವ ಕ್ರಮಗಳನ್ನು ಕೈಗೊಂಡಿದೆ? ಈ ಬಗ್ಗೆ ಸರ್ಕಾರದ ನಿಲುವು ಏನು? ವ್ಯಾಜ್ಯ ಇತ್ಯರ್ಥಕ್ಕೆ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿಗಳಾದ ಜಗನ್ನಾಥನ್ ಹಾಗೂ ನ್ಯಾ. ಪತ್ರಿ ಬಸನಗೌಡ ಅವರ ನೇತೃತ್ವದ ಸಮಿತಿಯ ಮಠದ ಭೇಟಿ, ಪರಿಶೀಲನೆ ಮತ್ತು ಮಾತುಕತೆಯ ಫಲಶೃತಿ ಏನು ಅನ್ನುವುದನ್ನು ಡಿ. 12ರೊಳಗೆ ನ್ಯಾಯಾಲಯಕ್ಕೆ ತಿಳಿಸುವಂತೆ ನಿರ್ದೇಶನ ನೀಡಿತು. ಈ ಪ್ರಕರಣದಲ್ಲಿ ಸಹಕರಿಸುವಂತೆ ಅಡ್ವೋಕೇಟ್ ಜನರಲ್ ಅವರಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಸರ್ಕಾರಕ್ಕೆ ಹೆಚ್ಚು ಅಧಿಕಾರವಿಲ್ಲ:
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿನಿಧಿ ನಿರ್ವಹಣೆ ಕಾಯ್ದೆ-2000ರಿಂದ ಮಠಗಳನ್ನು ಹೊರಗಿಡಲಾಗಿದೆ. ಹಾಗಾಗಿ ಮಠದ ಆಡಳಿತ ನಿರ್ವಹಣೆ ಮತ್ತು ನಿಯಂತ್ರಣದ ವಿಚಾರದಲ್ಲಿ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವಿಲ್ಲ. ಇದಕ್ಕಾಗಿ ಹೊಸ ಕಾಯ್ದೆ ತರುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್ ಗೆ ವಿವರಣೆ ನೀಡಿದರು.
ಯಾವ ಪ್ರಕರಣದ ಹಿನ್ನೆಲೆ:
ಸೋಸಲೆ ವ್ಯಾಸರಾಜ ಮಠದಲ್ಲಿ ಅವ್ಯವಹಾರ, ಆಸ್ತಿ ದುರ್ಬಳಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಠದ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದ ಸರ್ಕಾರ 2012ರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಕೆ. ಜೈರಾಜ್ ಅವರನ್ನು ಮಠದ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಆಡಳಿತಾಧಿಕಾರಿ ನೇಮಕ ಮಾಡಿದ್ದನ್ನು ಸೋಸಲೆ ಮಠದ ವಿದ್ಯಾ ಮನೋಹರ ತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದರು. ಸ್ವಾಮೀಜಿ ಅರ್ಜಿ ತಿರಸ್ಕರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಸ್ವಾಮೀಜಿ ಮೇಲ್ಮನವಿ ಸಲ್ಲಿಸಿದ್ದಾರೆ.












Click it and Unblock the Notifications