ಸಿದ್ದುಗೆ ಕಂಟಕ ತರಲಿದೆಯಾ ಉಬ್ಲೋ ಡೈಮಂಡ್ ವಾಚ್?
ಬೆಂಗಳೂರು, ಫೆಬ್ರವರಿ 27 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿರುವ ಜಗತ್ತಿನ ಅತ್ಯಂತ ದುಬಾರಿ ವಾಚ್ಗಳ ಪೈಕಿ ಒಂದಾಗಿರುವ ಉಬ್ಲೋ ವಾಚ್ನ ಟಿಕ್ ಟಿಕ್ ಸದ್ದು ದೆಹಲಿ ತಲುಪಿದೆ. ಹೈಕಮಾಂಡ್ ನಾಯಕರಿಗೆ ವಾಚ್ ಸದ್ದು ಕೇಳಿಸಿದ್ದು, ಅವರು wait and 'watch' ಎನ್ನುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿರೋಧಿಗಳಿದ್ದಾರೆ ಎಂಬುದು ಬಹಿರಂಗ ಸತ್ಯ. ವಿರೋಧಿಗಳ ಗುಂಪು ಕಳೆದ ಎರಡು ವಾರಗಳಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಹೈಕಮಾಂಡ್ ನಾಯಕರಿಗೆ ದೂರು ಕೊಟ್ಟಿದೆ. [ಸಖತ್ ಮಿಂಚುತ್ತಿರುವ ದುಬಾರಿ ಉಬ್ಲೋ ವಾಚುಗಳ ಕಥೆ]
50 ರಿಂದ 70 ಲಕ್ಷ ಬೆಲೆ ಬಾಳುವ ಊಬ್ಲೋ (Hublot- ಉಚ್ಚಾರಣೆ 'ooh-blow', 'hoo-blot' ಅಲ್ಲ) ವಾಚ್ ಅನ್ನು ದುಬೈನಲ್ಲಿ ನೆಲೆಸಿರುವ ಸ್ನೇಹಿತ ಡಾ.ಗಿರೀಶ್ ಚಂದ್ರ ವರ್ಮಾ ನನಗೆ ಉಡುಗೊರೆಯಾಗಿ ನೀಡಿದರು ಎಂದು ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. [ಗಡಿಯಾರದ ಗಲಾಟೆ, ಎಚ್ಡಿಕೆ ಬುಟ್ಟಿಯಲ್ಲಿ ಹೊಸ ಹಾವು!]
ವಾಚ್ಗೆ ತೆರಿಗೆ ಕಟ್ಟುವೆ, ಅದನ್ನು ಸರ್ಕಾರದ ವಶಕ್ಕೆ ಒಪ್ಪಿಸುವೆ ಎಂದು ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದಾರೆ. ಆದರೆ, ಪಕ್ಷದಲ್ಲಿರುವ ಅವರ ವಿರೋಧಿಗಳು ವಾಚ್ ವಿಚಾರವನ್ನು ಹೈಕಮಾಂಡ್ ಅಂಗಳಕ್ಕೆ ತಲುಪಿಸಿದ್ದಾರೆ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿ ಎಂದು ಬಯಸುತ್ತಿದ್ದಾರೆ......ವಿವರಗಳು ಚಿತ್ರಗಳಲ್ಲಿ [ಕೈಗಡಿಯಾರ ರಾದ್ಧಾಂತ, ಬಾಯ್ಬಿಟ್ಟ ಸಿದ್ದರಾಮಯ್ಯ]

ಕಾದು ನೋಡುತ್ತಿದೆ ಹೈಕಮಾಂಡ್
ಸಿದ್ದರಾಮಯ್ಯ ಅವರ ವಾಚ್ ವಿಚಾರದಲ್ಲಿ ಹೈಕಮಾಂಡ್ ನಾಯಕರಿಗೆ ದೂರುಗಳು ಹೋಗುತ್ತಿದ್ದರೂ, ಅವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಕಳೆದ ಎರಡು ವಾರದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಅವರ ಸಂಪುಟದ ಸಹೋದ್ಯೋಗಿಗಳೇ ಹೈಕಮಾಂಡ್ ನಾಯಕರಿಗೆ ದೂರು ಕೊಟ್ಟಿದ್ದಾರೆ.

ಹೆಬ್ಬಾಳ ಸೋಲಿಗೆ ಸಿದ್ದರಾಮಯ್ಯ ಕಾರಣ
ಫೆ.13ರಂದು ನಡೆದ ಹೆಬ್ಬಾಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸಿ.ಕೆ.ಅಬ್ದುಲ್ ರೆಹಮಾನ್ ಷರೀಫ್ ಅವರ ಸೋಲಿಗೂ ಸಿದ್ದರಾಮಯ್ಯ ಅವರು ಕಾರಣ ಎಂದು ಹೈಕಮಾಂಡ್ಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. ಅಭ್ಯರ್ಥಿ ಗೆಲುವಿಗಾಗಿ ಅವರು ಹೆಚ್ಚಾಗಿ ಶ್ರಮಿಸಲಿಲ್ಲ ಎಂಬುದು ದೂರಿನ ಪ್ರಮುಖ ಸಾರಾಂಶ.

ತೃಪ್ತಿದಾಯಕವಾಗಿಲ್ಲ
ಫೆ.23ರಂದು ಪ್ರಕಟಗೊಂಡ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷದ ಪರವಾಗಿದೆ. ಆದರೆ, ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ 10 ಸ್ಥಾನ, ಬಿಜೆಪಿ 7, ಜೆಡಿಎಸ್ 2 ಸ್ಥಾನ ಪಡೆದಿದೆ. 11 ಜಿಲ್ಲೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ.

ಉಡುಗೊರೆ ತೆಗೆದುಕೊಂಡರೆ ಭ್ರಷ್ಟಾಚಾರ
ಮುಖ್ಯಮಂತ್ರಿಗಳು ಉಡುಗೊರೆ ತೆಗೆದುಕೊಂಡರೆ ಅದನ್ನು ಭ್ರಷ್ಟಾಚಾರ ಎಂದು ಪರಿಗಣಿಸಬೇಕಾಗುತ್ತದೆ ಎಂದು ಕರ್ನಾಟಕದ ಕಾಂಗ್ರೆಸ್ ನಾಯಕರೊಬ್ಬರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ. ಹೆಸರು ಬಹಿರಂಗವಾಗಬಾರದು ಎಂದು ಹೇಳಿದ ಅವರು, ಸಿದ್ದರಾಮಯ್ಯ ಅವರು ಉಡುಗೊರೆ ತೆಗೆದುಕೊಂಡ ಬಗ್ಗೆ ಹೈಕಮಾಂಡ್ಗೆ ಮಾಹಿತಿ ನೀಡಿದ್ದೇವೆ. ಅಂತಿಮ ನಿರ್ಧಾರವನ್ನು ಅವರೇ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಕಾದು ನೋಡುವ ತಂತ್ರ ಪಾಲಿಸುವ ಹೈಕಮಾಂಡ್
ವಾಚ್ ವಿಚಾರದಲ್ಲಿ ಸದ್ಯ ಯಾವುದೇ ನಿರ್ಧಾರ ಕೈಗೊಳ್ಳದಿರಲು ಹೈಕಮಾಂಡ್ ನಿರ್ಧರಿಸಿದೆ. ಪ್ರತಿಪಕ್ಷಗಳು ಈ ವಿಚಾರವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತವೆ ಎಂಬುದರ ಮೇಲೆ ಇದು ನಿರ್ಧಾರವಾಗಲಿದೆ. ಸದ್ಯ ಜೆಡಿಎಸ್ ವಾಚ್ ವಿಚಾರವನ್ನು ದೊಡ್ಡದು ಮಾಡುತ್ತಿದೆ. ಆದರೆ, ಬಿಜೆಪಿ ಈ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ. ಆದ್ದರಿಂದ ಹೈಕಮಾಂಡ್ ಕಾದು ನೋಡುವ ತಂತ್ರ ಅನುಸರಿಸಿದೆ.












Click it and Unblock the Notifications