ಜಮೀರ್ ಅಹಮದ್ ಉಲ್ಟಾ ಹೊಡೆಯಲು ಕಾರಣ ಹೀಗೂ ಇರಬಹುದೇ?
ನ್ಯಾಷನಲ್ ಟ್ರಾವೆಲ್ಸ್ ಬಸ್ ವ್ಯವಹಾರ ನಡೆಸಿಕೊಂಡು, ಚಾಮರಾಜಪೇಟೆ ಭಾಗದಲ್ಲಿ ಮುಸ್ಲಿಂ ಸಮುದಾಯದ ಪ್ರಭಾವಿ ವ್ಯಕ್ತಿಯಾಗಿ, ಆರ್ಥಿಕವಾಗಿಯೂ ಬಲಾಢ್ಯವಾಗಿದ್ದಂತಹ ಜಮೀರ್ ಅಹಮದ್ ಖಾನ್ ಅವರನ್ನು ರಾಜಕೀಯಕ್ಕೆ ಎಂಟ್ರಿ ಕೊಡಿಸಿದ್ದೇ ದೇವೇಗೌಡ್ರು.
ಜಮೀರ್ ಜನಪ್ರಿಯತೆ ಅರಿತಿದ್ದ ಎಚ್ ಡಿ ದೇವೇಗೌಡ್ರು ಅಂದು (2005) 'ದರಿದ್ರ ನಾರಾಯಣ' ರ್ಯಾಲಿ ನಡಿಸಿ ಜಮೀರ್ ಅವರಿಗೆ ಜೆಡಿಎಸ್ ಶಾಲು ಹೊದಿಸಿ, ಚಾಮರಾಜಪೇಟೆ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಜಯಶೀಲರಾಗುವಂತೆ ಮಾಡಿದ್ದರು. (ಜಾಫರ್ ಷರೀಫ್, ಗೌಡ್ರ ಮಾತಿನ ಚಕಮಕಿ)
ಆ ಸಮಯದಲ್ಲಿ ರಾಜಕೀಯವಾಗಿ ಅಷ್ಟೇನೂ ಪಳಗಿರದ ಜಮೀರ್, ಗೌಡ್ರ ಋಣವನ್ನು ಎಂದೆಂದಿಗೂ ಮರೆಯುವುದಿಲ್ಲ ಎಂದು ಕಸಂ ಮಾಡಿದ್ದರು. ಗೌಡ್ರ ಕುಟುಂಬದ ಮೇಲೆ ಇವರ ನಿಯತ್ತು ಎಷ್ಟಿತ್ತೆಂದರೆ ಟ್ವೆಂಟಿ ಟ್ವೆಂಟಿ ಅಧಿಕಾರದ ಅವಧಿಯಲ್ಲಿ ಗೌಡ್ರು ಮತ್ತು ಕುಮಾರಸ್ವಾಮಿಗಾಗಿ ತನ್ನದೇ ಬಸ್ಸಿನಲ್ಲಿ, ತಾನೇ ಡ್ರೈವ್ ಮಾಡಿಕೊಂಡು ಶಾಸಕರನ್ನು ರಾಜಭವನಕ್ಕೆ ಕರೆತಂದಿದ್ದರು.
ದೇವೇಗೌಡರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದ ಜಮೀರ್, ಅದ್ಯಾಕೋ ಅವರ ಪುತ್ರ ಕುಮಾರಸ್ವಾಮಿ ಜೊತೆ ಇವರ ಸಂಬಂಧ ದಿನದಿಂದ ದಿನಕ್ಕೆ ಹಳಸುತ್ತಲೇ ಹೋಯಿತು. ಜಮೀರ್ ಹಾಗೇ, ಚೆಲುವರಾಯಸ್ವಾಮಿ ಮತ್ತು ಬಾಲಕೃಷ್ಣ ಕೂಡಾ ಜೆಡಿಎಸ್ ಪಕ್ಷದ ಪ್ರಮುಖ ವೇದಿಕೆಯಿಂದ ಹಿಂದಕ್ಕೆ ಸರಿಯುತ್ತಾ ಹೋದರು. (ಜಮೀರ್ ಹೇಳಿದರೆ ಮಾತ್ರ ಹೆಬ್ಬಾಳದಲ್ಲಿ ಸ್ಪರ್ಧೆ)
ಗೌಡ್ರ ಮತ್ತು ಎಚ್ಡಿಕೆ ಗರಡಿಯಲ್ಲಿ ಪಳಗಿರುವ ಜಮೀರ್ ಈಗ ಇಡುತ್ತಿರುವ ಒಂದೊಂದು ರಾಜಕೀಯ ನಡೆ ಜೆಡಿಎಸ್ ಪಕ್ಷಕ್ಕೆ ಮುಜುಗರ ತಂದಿಡುತ್ತಿರುವುದಂತೂ ಹೌದು.
ಗೌಡ್ರು ಮತ್ತು ಕುಮಾರಸ್ವಾಮಿಗೆ ಇತರ ನಾಯಕರ ಮೇಲೆ ವಿಶ್ವಾಸವಿಲ್ಲ ಎನ್ನುವ ಜಮೀರ್ ಈಗ ಗೌಡ್ರ ವಿರುದ್ದ ಜಾಹೀರಾತು ನೀಡುವಷ್ಟರ ಮಟ್ಟಿಗೆ ಗೌಡ್ರ ಕುಟುಂಬದಿಂದ ದೂರವಾಗಿದ್ದಾರೆ ಅಥವಾ ರಾಜಕೀಯವಾಗಿ ಬೆಳೆದು ನಿಂತಿದ್ದಾರೆ.
ಜಾಫರ್ ಷರೀಫ್ ಮೇಲಿನ ಗೌರವ, ಗೌಡ್ರ ವಿರುದ್ದ ಜಮೀರ್ ತಿರುಗಿ ಬೀಳಲು ಕಾರಣವಿರಬಹುದೇ? ಮುಂದೆ ಓದಿ..
ಬಿಜೆಪಿಯನ್ನು ಗೆಲ್ಲಿಸಲು ನಾನ್ಯಾಕೆ ಪ್ರಚಾರ ಮಾಡಲಿ
ಹೆಬ್ಬಾಳ ಕ್ಷೇತ್ರದಲ್ಲಿ ಜಮೀರ್ ಸೂಚಿಸುವ ಹೆಸರನ್ನು ಅಂತಿಮಗೊಳಿಸುತ್ತೇನೆ ಎಂದು ಗೌಡ್ರು ಹೇಳಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಾಫರ್ ಮೊಮ್ಮಗ ಎಂದು ಖಾತ್ರಿಯಾದ ನಂತರ ಮುಸ್ಲಿಂ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕಿಳಿಸಿತ್ತು. ನಾನು ಜೆಡಿಎಸ್ ಅಭ್ಯರ್ಥಿ ಪರ ಮತಯಾಚಿಸಿದರೆ, ಮುಸ್ಲಿಂ ಮತಗಳು ಇಬ್ಭಾಗವಾಗುತ್ತದೆ, ಇದು ಬಿಜೆಪಿಗೆ ಲಾಭವಾಗುತ್ತದೆ. ಹಾಗಾಗಿ ಬಿಜೆಪಿಯನ್ನು ಗೆಲ್ಲಿಸಲು ನಾನ್ಯಾಕೆ ಪ್ರಚಾರ ಮಾಡಲಿ ಎಂದು ಜಮೀರ್ ಸ್ಪಷ್ಟವಾಗಿ ಗೌಡ್ರಿಗೆ ಸಂದೇಶ ರವಾನಿಸಿದ್ದರು.
ಹಜ್ ಘರ್ ಸಂಸ್ಥಾಪನಾ ಕಾರ್ಯಕ್ರಮ
ಜನವರಿ 2012ರಲ್ಲಿ ನಡೆದ ಒಂದು ಘಟನೆಯನ್ನು ಸ್ಮರಿಸಿಕೊಳ್ಳುವುದಾದರೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 'ಹಜ್ ಘರ್' ಸಂಸ್ಥಾಪನಾ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಿತ್ತು. ಆ ಕಾರ್ಯಕ್ರಮದಲ್ಲಿ ಸಿಎಂ ಆಗಿದ್ದ ಸದಾನಂದ ಗೌಡ, ಸಚಿವ ಆರ್ ಅಶೋಕ್, ಜಾಫರ್ ಷರೀಫ್, ಜಮೀರ್ ಅಹಮದ್ ಸೇರಿದಂತೆ ಪ್ರಮುಖ ಮುಖಂಡರು ಭಾಗವಹಿಸಿದ್ದರು.
ಜಾಫರ್ ಷರೀಫ್ ಹೆಸರನ್ನು ಮೊದಲು ಉಲ್ಲೇಖಿಸುವಂತೆ ಸೂಚನೆ
ಆ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಸೈಯದ್ ಜಮೀರ್ ಪಾಷಾ, ಶಿಷ್ಟಾಚಾರದಂತೆ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರ ಹೆಸರುಗಳನ್ನು ಉಲ್ಲೇಖಿಸಿ ಸ್ವಾಗತಿಸಲಾರಭಿಸಿದರು. ಆಗ, ಜಾಫರ್ ಷರೀಫ್ ಅವರ ಹೆಸರನ್ನು ಮೊದಲು ಉಲ್ಲೇಖಿಸುವಂತೆ ಜಮೀರ್ ಸೂಚಿಸಿದರು.
ಸಿಟ್ಟಿಗೆದ್ದ ಜಮೀರ್
ಜಮೀರ್ ಕೋರಿಕೆಯನ್ನು ಪಾಷಾ ಮಾನ್ಯ ಮಾಡದೇ ಇದ್ದಾಗ, ಸಿಟ್ಟಿಗೆದ್ದ ಜಮೀರ್ ವೇದಿಕೆಯಲ್ಲಿನ ಟೀಪಾಯಿ ಮೇಲಿದ್ದ ಗಾಜಿನ ಲೋಟವನ್ನು ಒಡೆದು ಹಾಕಿ, ಟೀಪಾಯಿಯನ್ನೇ ಎತ್ತಿ ಉರುಳಿಸಿ ಐಎಎಸ್ ಅಧಿಕಾರಿಯ ವಿರುದ್ಧ ಕೋಪ ಪ್ರದರ್ಶಿಸಿದರು. ನಮ್ಮ ಸಮುದಾಯದ ಹಿರಿಯ ನಾಯಕ ಜಾಫರ್ ಷರೀಫ್ ಅವರಿಗೆ ಗೌರವ ಸಿಗುತ್ತಿಲ್ಲ ಎಂದು ವೇದಿಕೆಯಲ್ಲೇ ಕೂಗಿ ಜಾಫರ್ ಷರೀಫ್ ಮೇಲೆ ತಮಗಿರುವ ಗೌರವವನ್ನು ಪ್ರದರ್ಶಿಸಿದ್ದರು.
ಜಮೀರ್ ಅಹಮ್ಮದ್ಗೆ ನನ್ನ ಮೇಲೆ ಪ್ರೀತಿ ಜಾಸ್ತಿ
ಇದಾದ ಬಳಿಕ ಮಾತನಾಡಿದ ಜಾಫರ್ ಷರೀಫ್, ಜಮೀರ್ ಅಹಮ್ಮದ್ಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಅದಕ್ಕೆ ಹೀಗೆ ವರ್ತಿಸಿದ್ದಾರೆ. ಜಮೀರ್ ಅವರ ವರ್ತನೆಯ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ. ಇದು ನಮ್ಮ ಸಮುದಾಯಕ್ಕೆ ಸಂಭ್ರಮದ ಕ್ಷಣ. ಎಲ್ಲರೂ ಶಾಂತಚಿತ್ತರಾಗಿ ವರ್ತಿಸಿ ಎಂದು ಜಮೀರ್ ಪರವಾಗಿ ಜಾಫರ್ ಷರೀಫ್ ಮಾತಾಡಿದ್ದರು. ಇದು ಜಮೀರ್ ತಮ್ಮದೇ ಕೋಮಿನ ಹಿರಿಯ ಮುಖಂಡ ಜಾಫರ್ ಷರೀಫ್ ಮೇಲೆ ಗೌರವಹೊಂದಿದ್ದಾರೆ ಎಂದು ತೋರಿಸುವ ಒಂದು ಉದಾಹರಣೆ.
ಸಿದ್ದರಾಮಯ್ಯ ಅವರತ್ತ ಹೆಚ್ಚು ಒಲವು
ಜಾಫರ್ ಷರೀಫ್ ಮತ್ತು ಜಮೀರ್ ಅಹಮದ್ ನಡುವೆ ಉತ್ತಮ ಸಂಬಂಧವಿದೆ. ಈ ಮೇಲಿನ ಘಟನೆಯನ್ನು ಉಲ್ಲೇಖಿಸಿ ಹೇಳುವುದಾದರೆ, ಷರೀಫ್ ಮೇಲಿನ ಗೌರವ ಮತ್ತು ಪ್ರೀತಿಗೆ ಕಟಿಬಿದ್ದು ಜಮೀರ್ ಹೆಬ್ಬಾಳ ಚುನಾವಣೆಯಲ್ಲಿ ಕಾಂಗ್ರೆಸ್ ಪರ ನಿಂತರೂ ಆಶ್ಚರ್ಯ ಪಡಬೇಕಾಗಿಲ್ಲ ಅಥವಾ ಈಗಾಗಲೇ ಅದೇ ಕೆಲಸವನ್ನು ಮಾಡುತ್ತಿರಬಹುದು. ರಾಜಕೀಯ ನಿಂತ ನೀರಲ್ಲ ಎನ್ನುವ ಹಾಗೇ, ಹೇಗೂ ಜಮೀರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ಹೆಚ್ಚು ಒಲವನ್ನು ಇತ್ತೀಚಿನ ದಿನಗಳಲ್ಲಿ ತೋರುತ್ತಿದ್ದಾರೆ.