ಯಡಿಯೂರಪ್ಪ ಸಂಪುಟ ರಚನೆ ವಿಳಂಬಕ್ಕೆ 'ಕೆಜೆಪಿ' ಎಫೆಕ್ಟ್ ಕಾರಣ?
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ, ಸರಕಾರ ಬರ ಪರಿಹಾರದ ಕೆಲಸವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ರಾಜ್ಯ ಪ್ರವಾಸಕ್ಕೆ ಹೊರಟಿದ್ದ ಯಡಿಯೂರಪ್ಪನವರಿಗೆ, ಈಗ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿನ ಅತಿವೃಷ್ಟಿಯ ಸಮಸ್ಯೆ ಎದುರಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಹತ್ತು ದಿನದ ಮೇಲಾದರೂ ಸಂಪುಟ ರಚನೆಯಾಗಿಲ್ಲ. ವರಿಷ್ಠರಿಂದ ಯಾವುದೇ ಸೂಚನೆ ಬರದ ಹಿನ್ನಲೆಯಲ್ಲಿ, ಯಡಿಯೂರಪ್ಪ ತಾವೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಏಕಾಂಗಿಯಾಗಿ ಭೇಟಿ ನೀಡುತ್ತಿದ್ದಾರೆ.
ಸಚಿವರು ಮತ್ತು ಜಿಲ್ಲಾ ಉಸ್ತುವಾರಿಗಳು ಇನ್ನೂ ನೇಮಕವಾಗದ ಹಿನ್ನಲೆಯಲ್ಲಿ, ಅಧಿಕಾರಿಗಳನ್ನು ಹಿಡಿದುಕೊಂಡೇ ಸಂತ್ರಸ್ತರ ನೆರವಿನ ಕಾರ್ಯವನ್ನು ನಿಭಾಯಿಸುವ ಅನಿವಾರ್ಯತೆಯಲ್ಲಿ ಯಡಿಯೂರಪ್ಪ ಇದ್ದಾರೆ. ಇದರಿಂದಾಗಿ, ಕುಮಾರಸ್ವಾಮಿ 'ಯಡಿಯೂರಪ್ಪ ಎಲ್ಲಿದ್ದೀರಾ' ಎಂದು ಪ್ರಶ್ನಿಸುತ್ತಿದ್ದಾರೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ಬಿಜೆಪಿ ವರಿಷ್ಠರು ಸಂಪುಟ ರಚನೆಗೆ ಯಾಕೆ ಆಸಕ್ತಿ ತೋರುತ್ತಿಲ್ಲ ಎನ್ನುವ ಪ್ರಶ್ನೆ ಬಂದಾಗ, ಯಡಿಯೂರಪ್ಪ, ತಮ್ಮ ಹಿಂದಿನ ಕೆಜೆಪಿ ಜೊತೆಗಿದ್ದವರಿಗೆ, ಈಗಲೂ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ, ಸಂಪುಟ ರಚನೆ ವಿಳಂಬವಾಗಲು ಇದೂ ಒಂದು ಕಾರಣ ಎನ್ನುವ ಮಾತು ಕೇಳಿಬರುತ್ತಿದೆ.

ಯಡಿಯೂರಪ್ಪನವರಿಗೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಸಾಧ್ಯವಾಗದೇ ವಾಪಸ್
ಕಾಶ್ಮೀರ ವಿಚಾರ, ಇದಾದ ನಂತರ ಸುಷ್ಮಾ ಸ್ವರಾಜ್ ನಿಧನದಿಂದಾಗಿ, ಯಡಿಯೂರಪ್ಪನವರಿಗೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಸಾಧ್ಯವಾಗದೇ ವಾಪಸ್ ಬಂದಿದ್ದಾರೆ. ದೆಹಲಿಯಿಂದ ವಾಪಸ್ ಆದ ಕೂಡಲೇ, ಯಡಿಯೂರಪ್ಪ ಬೆಳಗಾವಿಗೆ ಹೋಗಿ, ಪರಿಹಾರ ಕಾರ್ಯದ ಅವಲೋಕನ ಮಾಡುತ್ತಿದ್ದಾರೆ.

ಅಮಿತ್ ಶಾ ಸಂಪುಟ ರಚನೆ ವಿಳಂಬ ಮಾಡಲು ಇದೂ ಒಂದು ಕಾರಣ
ಕೆಲವೊಂದು ಗುಸುಗುಸು ಸುದ್ದಿಗಳ ಪ್ರಕಾರ, ಈ ಹಿಂದೆ ಕರ್ನಾಟಕ ಜನತಾ ಪಕ್ಷವನ್ನು (ಕೆಜೆಪಿ) ಯಡಿಯೂರಪ್ಪ ಹುಟ್ಟಿ ಹಾಕಿದಾಗ, ಅವರಿಗೆ ಅಂದು ಸಾಥ್ ನೀಡಿದವರ ಜೊತೆ, ಬಿಎಸ್ವೈ ಇಂದೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಮತ್ತು ಸಂಘ ಪರಿವಾರ, ಬಿಜೆಪಿಯ ಇತರ ಮುಖಂಡರನ್ನು ಹೆಚ್ಚಾಗಿ ಗಮನಿಸುತ್ತಿಲ್ಲ ಎನ್ನುವ ವಿಷಯ ದೆಹಲಿಗೆ ತಲುಪಿದೆ. ಹಾಗಾಗಿ, ಅಮಿತ್ ಶಾ ಸಂಪುಟ ರಚನೆ ವಿಳಂಬ ಮಾಡಲು ಇದೂ ಒಂದು ಕಾರಣ ಎನ್ನುವ ಮಾತು ಕೇಳಿಬರುತ್ತಿದೆ.

ಪ್ರವಾಹ ಪರಿಸ್ಥಿತಿ ನಿಭಾಯಿಸುವಂತೆ ಅಮಿತ್ ಶಾ ಸೂಚನೆ
ಬುಧವಾರ (ಆ 7) ಅಮಿತ್ ಶಾ ಅವರನ್ನು ಭೇಟಿಯಾಗಲು ಸಮಯ ನಿಗದಿಯಾಗಿತ್ತು. ಆದರೆ, ಸುಷ್ಮಾ ಸ್ವರಾಜ್ ನಿಧನದ ಹಿನ್ನಲೆಯಲ್ಲಿ ಇದು ಸಾಧ್ಯವಾಗಲಿಲ್ಲ. 'ಪ್ರವಾಹ ಪರಿಸ್ಥಿತಿ ನಿಭಾಯಿಸುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರೆ. ಹಾಗಾಗಿ, ನಾನು ತುರ್ತಾಗಿ ಬೆಳಗಾವಿಗೆ ತೆರಳುತ್ತಿದ್ದೇನೆ' ಎಂದು ಯಡಿಯೂರಪ್ಪ ಹೇಳಿದ್ದರು.

ಯಡಿಯೂರಪ್ಪ ಮತ್ತೆ ದೆಹಲಿಗೆ ತೆರಳುವ ಸಾಧ್ಯತೆ
ಈ ವಾರಾಂತ್ಯದಲ್ಲಿ ಯಡಿಯೂರಪ್ಪ ಮತ್ತೆ ದೆಹಲಿಗೆ ತೆರಳುವ ಸಾಧ್ಯತೆಯಿದೆ. ಅಮಿತ್ ಶಾ ಹಲವು ಆಯಾಮಗಳಿಂದ ಸಂಪುಟ ರಚನೆಯ ಬಗ್ಗೆ ಚಿಂತನೆ ನಡೆಸುತ್ತಿರುವುದರಿಂದ, ಸಂಪುಟ ರಚನೆಯ ಗ್ರಹಣಕ್ಕೆ ಸದ್ಯ ಪರಿಹಾರ ಸಿಗುವ ಲಕ್ಷಣಗಳು ಕಾಣುತ್ತಿಲ್ಲ.

2012ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕೆಜೆಪಿ 2014ರಲ್ಲಿ ವಿಲೀನ
2012ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕೆಜೆಪಿ 2014ರಲ್ಲಿ ಬಿಜೆಪಿ ಜೊತೆ ವಿಲೀನಗೊಂಡಿತ್ತು. 2013ರ ಅಸೆಂಬ್ಲಿ ಚುನಾವಣೆಯಲ್ಲಿ ಕೆಜೆಪಿಯ (ಯಡಿಯೂರಪ್ಪ ಸೇರಿದಂತೆ) ಆರು ಜನ ಆಯ್ಕೆಯಾಗಿದ್ದರು. ಜೊತೆಗೆ, ಆ ಚುನಾವಣೆಯಲ್ಲಿ ಕೆಜೆಪಿ ಶೇ. ಹತ್ತರಷ್ಟು ಮತಗಳಿಸುವಲ್ಲಿ ಯಶಸ್ವಿಯಾಗಿತ್ತು. ಹಲವಾರು ಕ್ಷೇತ್ರಗಳಲ್ಲಿ ಕೆಜೆಪಿ ಸ್ಪರ್ಧೆಯಿಂದ ಬಿಜೆಪಿಗೆ ಹಿನ್ನಡೆಯೂ ಆಗಿತ್ತು.












Click it and Unblock the Notifications