ಸಂಪುಟ ವಿಸ್ತರಣೆಯ ಸುದ್ದಿಯೇ ಇಲ್ಲ: ರಾಜಾಹುಲಿ ಬಿಎಸ್ವೈಗೆ ಆಗುತ್ತಿರುವ ಹಿನ್ನಡೆಗೆ ಇದಾ ಕಾರಣ?
ಸಚಿವ ಸಂಪುಟ ಸಭೆಯನ್ನು ಒಂದು ಗಂಟೆಗೆ ಮುಂಚಿತವಾಗಿಯೇ ಮುಗಿಸಿ, ತರಾತುರಿಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಜೊತೆ ದೆಹಲಿಗೆ, ಸಿಎಂ ಯಡಿಯೂರಪ್ಪ ದೌಡಾಯಿಸಿ, ಅದೇ ದಿನ ವಾಪಸ್ ಆಗಿ ಇಂದಿಗೆ ಐದು ದಿನಗಳಾದವು.
ಬಿಎಸ್ವೈ ದೆಹಲಿಗೆ ಹೋದ ದಿನದ ಸಂಜೆಯೇ ಕ್ಯಾಬಿನೆಟ್ ವಿಸ್ತರಣೆಯಾಗಬಹುದು ಎನ್ನುವ ಲೆಕ್ಕಾಚಾರವನ್ನು ಬಿಜೆಪಿಗರು ಹೊಂದಿದ್ದರು. ಆದರೆ, ಯಾವುದೇ ಸ್ಪಷ್ಟ ಭರವಸೆಯನ್ನು ನೀಡದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಬಿಎಸ್ವೈ ಅವರನ್ನು ನಗುನಗುತ್ತಲೇ ಕಳುಹಿಸಿಕೊಟ್ಟಿದ್ದರು.
ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಅದು ನಿಮ್ಮ ಪಕ್ಷದ ಹಣೆಬರಹ
ಅಸಲಿಗೆ, ಯಡಿಯೂರಪ್ಪನವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗಲು ಬಯಸಿದ್ದರು. ಆದರೆ, ಅವರ ಅಪಾಯಿಂಟ್ಮೆಂಟ್ ಬಿಎಸ್ವೈಗೆ ಸಿಕ್ಕಿರಲಿಲ್ಲ. ಒಂದು ರಾಜ್ಯದ ಮುಖ್ಯಮಂತ್ರಿಗೆ ಕನಿಷ್ಠ ಐದು ನಿಮಿಷವಾದರೂ ಸಮಯ ನೀಡುವಷ್ಟು ಸೌಜನ್ಯತೆ ಬೇಡವೇ ಎಂದು ಇದು ವಿರೋಧ ಪಕ್ಷಗಳಿಗೆ ಆಹಾರವಾಗಿತ್ತು.
ನಾವು ಹೇಳಿದ್ದೇ ಅಂತಿಮ ಎಂದು ಬಿಜೆಪಿ ವರಿಷ್ಥರು ರಾಜ್ಯ ಬಿಜೆಪಿ ಮುಖಂಡರಿಗೆ ಸಾರಿಸಾರಿ ಸ್ಪಷ್ಟ ಪಡಿಸುತ್ತಿದ್ದಾರೆ. ಅದೇನೇ ಇರಲಿ, ಇನ್ನೆರಡ್ಮೂರು ದಿನದಲ್ಲಿ ಎಲ್ಲಾ ಅಂತಿಮವಾಗುತ್ತದೆ ಎನ್ನುವ ಸಿಎಂ ಗಳಿಗೆಯೂ ದಾಟಿಯಾಗಿದೆ. ಹಾಗಾದರೆ, ಯಡಿಯೂರಪ್ಪನವರಿಗೆ ಆಗುತ್ತಿರುವ ಹಿನ್ನಡೆಗೆ ಕಾರಣವಾದರೂ ಏನು?
ಬಿ. ಎಲ್. ಸಂತೋಷ್ ಭೇಟಿಯಾದ ರಮೇಶ್ ಜಾರಕಿಹೊಳಿ
ಕೇಡರ್ ಬೇಸ್ ಪಕ್ಷವಾಗಿರುವ ಬಿಜೆಪಿ
ಕೇಡರ್ ಬೇಸ್ ಪಕ್ಷವಾಗಿರುವ ಬಿಜೆಪಿಯ ನೆಲೆಯನ್ನು ಕರ್ನಾಟಕದಲ್ಲಿ ಇಷ್ಟು ಸುಭದ್ರಗೊಳಿಸಿದ್ದು ಯಡಿಯೂರಪ್ಪ ಎನ್ನುವುದು ಎಲ್ಲರೂ ಒಪ್ಪುವ ಮಾತು. ರಾಜ್ಯದ ಇದುವರೆಗಿನ ರಾಜಕೀಯ ಇತಿಹಾಸದಲ್ಲಿ ಮಾಸ್ ಲೀಡರ್ ಎಂದು ಗುರುತಿಸಿಕೊಂಡಿರುವ ಮುಖಂಡರಲ್ಲಿ ಯಡಿಯೂರಪ್ಪ ಮಂಚೂಣಿಯಲ್ಲಿ ಬರುವ ಹೆಸರು. ಆದರೂ, ಸಾಲುಸಾಲಾಗಿ, ಹೈಕಮಾಂಡ್ ಕಡೆಯಿಂದ ಇವರಿಗೆ ಹಿನ್ನಡೆಯಾಗಲು ಕಾರಣವೇನು ಎಂದಾಗ, ವಿಚಾರ ಅವರ ಪುತ್ರನತ್ತ ವಾಲುತ್ತಿದೆಯಾ?
ದೆಹಲಿ ವರಿಷ್ಠರಿಂದ ಯಡಿಯೂರಪ್ಪನವರಿಗೆ ಮರ್ಯಾದೆ ಸಿಗುತ್ತಿಲ್ಲ
ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ನಂತರ, ಹಿರಿಯ ಮತ್ತು ಮಾಸ್ ನಾಯಕ ಎನ್ನುವ ಮರ್ಯಾದೆ, ದೆಹಲಿ ವರಿಷ್ಠರಿಂದ ಯಡಿಯೂರಪ್ಪನವರಿಗೆ ಸಿಗುತ್ತಿಲ್ಲ. ಉಪಚುನಾವಣೆಯಲ್ಲಿ ಗೆದ್ದರೂ, ಯಡಿಯೂರಪ್ಪನವರ ಡಿಮಾಂಡ್ ಗಳಿಗೆ ದೊಡ್ಡವರು ಸೊಪ್ಪು ಹಾಕುತ್ತಿಲ್ಲ. ಇದಕ್ಕೆ, ಪಕ್ಷದ ಮೂಲ ಮುಖಂಡರು, ಹೈಕಮಾಂಡ್ ಗೆ ನೀಡಿದ್ದಾರೆ ಎನ್ನಲಾಗುತ್ತಿರುವ ದೂರುಗಳು ಕಾರಣನಾ ಎನ್ನುವ ಪ್ರಶ್ನೆ ಮೂಡಲು ಕಾರಣ ಇಲ್ಲದಿಲ್ಲ.
ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೇರಿದ ಯಡಿಯೂರಪ್ಪ
ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೇರಿದ ಯಡಿಯೂರಪ್ಪನವರಿಗೆ ವಲಸೆ ಬಂದ ಮುಖಂಡರನ್ನು ತೃಪ್ತಿ ಪಡಿಸುವುದೇ ಕೆಲಸವಾಗಿದೆ ಎನ್ನುವುದು ಮೂಲ ಬಿಜೆಪಿಗರಿಗಿರುವ ಒಂದು ಅಸಮಾಧಾನ. ಇನ್ನೊಂದು ಕಾರಣ, ದಿನದಿಂದ ದಿನಕ್ಕೆ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದಲ್ಲಿ ಸಾಧಿಸುತ್ತಿರುವ ಹಿಡಿತವೇ ಬಿಜೆಪಿ ಆಂತರಿಕ ವಲಯದಲ್ಲಿ ಸಿಟ್ಟಿಗೆ ಕಾರಣ ಎಂದು ಹೇಳಲಾಗುತ್ತಿದೆ.
Recommended Video
ಬಿ.ವೈ.ವಿಜಯೇಂದ್ರ ಅವರ ಪ್ರಭಾವ ಹೆಚ್ಚಾಗಿರುವುದಂತೂ ಹೌದು
ಕೆ.ಆರ್.ಪೇಟೆ ಮತ್ತು ಶಿರಾದಲ್ಲಿ ಬಿಜೆಪಿ ಜಯಗಳಿಸಿದ ನಂತರ ಬಿ.ವೈ.ವಿಜಯೇಂದ್ರ ಅವರ ಪ್ರಭಾವ ಹೆಚ್ಚಾಗಿರುವುದಂತೂ ಹೌದು. ದೈನಂದಿನ ಆಡಳಿತದಲ್ಲಿ ಅವರ ಹಸ್ತಕ್ಷೇಪದ ಬಗ್ಗೆ ದೂರು ಹೋಗಿದ್ದದ್ದೂ ಸುದ್ದಿಯಾಗಿತ್ತು. ಹೈಕಮಾಂಡ್ ಮಟ್ಟದಲ್ಲಿ ರಾಜ್ಯದ ಮುಖಂಡರು ಪದೇಪದೇ ಈ ವಿಚಾರಗಳನ್ನು ಎತ್ತುತ್ತಿರುವುದೇ ಯಡಿಯೂರಪ್ಪನವರಿಗೆ ಆಗುತ್ತಿರುವ ಹಿನ್ನಡೆಗೆ ಪ್ರಮುಖ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.