ಸರ್ಕಾರದ ಜುಟ್ಟು ದೇವೇಗೌಡ ಕೈಯಲ್ಲೋ ಸಿದ್ದರಾಮಯ್ಯ ಕೈಯಲ್ಲೋ?
ಬೆಂಗಳೂರು, ಮೇ 23: ಜೆಡಿಎಸ್-ಕಾಂಗ್ರೆಸ್ ಪಕ್ಷ ಸರ್ಕಾರ ಎರಡನೇ ಬಾರಿ ಕರ್ನಾಟಕದಲ್ಲಿ ಸರ್ಕಾರ ರಚಿಸುತ್ತಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ, ಜಿ.ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ಈ ಸರ್ಕಾರದ ಜುಟ್ಟು ಯಾರ ಕೈಯಲ್ಲಿರಲಿದೆ, ಜೆಡಿಎಸ್ ನಾಯಕರೋ ಅಥವಾ ಕಾಂಗ್ರೆಸ್ ನಾಯಕರೋ ಎಂಬುದು ಚರ್ಚೆಯ ವಿಷಯ.
ಕುಮಾರಸ್ವಾಮಿ ಸರ್ಕಾರ ನಡೆಸಿದರೂ ಹಿಂದೆ ನಿಂತು ದಾರಿ ತೋರುವುದು ದೇವೇಗೌಡರೇ ಎಂದೇ ಹೇಳಲಾಗುತ್ತಿದೆ. ಇದಕ್ಕೆ ತಕ್ಕಂತೆ ಮೊನ್ನೆ ಯಡಿಯೂರಪ್ಪ ಅವರು ರಾಜಿನಾಮೆ ನೀಡಿದ ದಿನವೇ ರಾಜ್ಯ ಮುಖ್ಯಕಾರ್ಯದರ್ಶಿ, ಐಜಿ-ಡಿಜಿಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಲ್ಲರೂ ದೇವೇಗೌಡರ ಮುಂದೆ ಕೈಕಟ್ಟಿ ಕೂತಿದ್ದರು.
ಕಾಂಗ್ರೆಸ್ - ಜೆಡಿಎಸ್ ಅಧಿಕಾರ ಹಂಚಿಕೆ ಅಂತಿಮ, 'ಕೈ'ಗೆ ಸಿಂಹ ಪಾಲು
ರಾಜ್ಯದ ಟಾಪ್ 5 ಅಧಿಕಾರಿಗಳು ದೇವೇಗೌಡರ ಮುಂದೆ ಕೂತಿದ್ದ ಆ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ತಕ್ಕ ಮಟ್ಟಿದೆ ಸದ್ದು ಮಾಡಿತು ಕೂಡ. ಆ ಚಿತ್ರವೇ ಸಾರಿ ಹೇಳುತ್ತಿತ್ತು ದೇವೇಗೌಡರೇ 'ಬಾಸ್ ಆಫ್ ದಿ ಗೌರ್ನಮೆಂಟ್' ಎಂದು.
ಮಂಡಿ ಊರಿಲ್ಲ ಕಾಂಗ್ರೆಸ್
ಹಾಗೆಂದು ಸರ್ಕಾರದ ಮೇಲೆ ಕಾಂಗ್ರೆಸ್ ನಾಯಕರ ಹಿಡಿತ ಇರುವುದೇ ಇಲ್ಲ ಅಥವಾ ಕಾಂಗ್ರೆಸ್ ಹಿರಿಯ ನಾಯಕರು ಆಡಳಿತದಲ್ಲಿ ತಲೆ ಹಾಕುವುದೇ ಎಂದೇನಲ್ಲ. ಆರಂಭದಲ್ಲಿ ನೀವೇ ಎಲ್ಲಾ ಎಂದು ಜೆಡಿಎಸ್ ಮುಂದೆ ಮಂಡಿ ಊರಿದ್ದವರು ಈಗ ನಮಗಿಷ್ಟು, ನಿಮಗಿಷ್ಟು ಲೆಕ್ಕಕ್ಕೆ ಬಂದಿದ್ದಾರೆ.
ಸಿದ್ದರಾಮಯ್ಯ ಏನು ಹೇಳಿದ್ದರು?
ಫಲಿತಾಂಶ ಬಂದ ದಿನ ಸಿದ್ದರಾಮಯ್ಯ ಅವರು ಹೇಳಿದ್ದ ಮಾತನ್ನು ನೆನಪಿಸಿಕೊಳ್ಳಿ, 'ಜೆಡಿಎಸ್ ಸರ್ಕಾರ ರಚಿಸಲು ಕಾಂಗ್ರೆಸ್ ಬೇಷರತ್ ಬೆಂಬಲ ನೀಡುತ್ತದೆ' ಎಂದು ಸಿದ್ದರಾಮಯ್ಯ ಅವರೇ ಒತ್ತಿ ಹೇಳಿದ್ದರು. ಆದರೆ ಈಗ ಹಾಗೆ ಆಗುತ್ತಿಲ್ಲ ಎಂಬುದು ಸ್ಪಷ್ಟ, ಸಚಿವ ಸ್ಥಾನಕ್ಕೆ ಜೆಡಿಎಸ್ ಶಾಸಕರ ಬೇಡಿಕೆಗಿಂತಲೂ ಕಾಂಗ್ರೆಸ್ ಶಾಸಕರ ಬೇಡಿಕೆಗಳೇ ಹೆಚ್ಚಾಗಿದೆ. ಸಿದ್ದರಾಮಯ್ಯ, ಡಿಕೆಶಿ ಅಂತಹಾ ನಾಯಕರು ತಮಗಾಗಿ ಹಾಗೂ ಬೆಂಬಲಿಗರಿಗಾಗಿ ವಶೀಲಿ ಭಾಜಿ ಸಹ ನಡೆಸುತ್ತಿದ್ದಾರೆ.
Array
ಸರ್ಕಾರ ಮತ್ತು ಅದರ ಮಂತ್ರಿಗಳನ್ನು ಕಾವಲು ಕಾಯಲೆಂದೇ ಸಮನ್ವಯ ಸಮಿತಿ ರಚಿಸಲಾಗಿದ್ದು ಅದರ ಚುಕ್ಕಾಣಿಯನ್ನು ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ. ಅಧಿಕಾರವನ್ನು ತೀಕ್ಷಣವಾಗಿ ಬಳಸಿ ಅನುಭವವಿರುವ ಒರಟು ಮಾತಿನ ಸಿದ್ದರಾಮಯ್ಯ ಅವರು ಈ ಅವಕಾಶವನ್ನು ಸರ್ಕಾರದ ಮೇಲೆ, ಮಂತ್ರಿಗಳ ಮೇಲೆ ಪ್ರಭಾವ ಬೀರಲು ಪರಿಣಾಮಕಾರಿಯಾಗಿಯೇ ಉಪಯೋಗಿಸಲಿದ್ದಾರೆ.
ಹಿಡಿತ ಗೌಡರದ್ದಾ, ಸಿದ್ದರಾಮಯ್ಯನದ್ದಾ?
ಒಟ್ಟಿನಲ್ಲಿ ಹೇಳಬೇಕೆಂದರೆ ಸರ್ಕಾರದ ಮೇಲೆ ಹಿಡಿತ ಸಾಧಿಸಲು ದೇವೇಗೌಡ ಹಾಗೂ ಸಿದ್ದರಾಮಯ್ಯ ಇಬ್ಬರೂ ತುದಿ ಗಾಲ ಮೇಲೆ ನಿಂತಿದ್ದಾರೆ, ಆರಂಭದಲ್ಲಿ ಮೇಲ್ನೋಟಕ್ಕೆ ದೇವೇಗೌಡರದ್ದೇ ಮೇಲುಗೈ ಎಂಬಂತೆ ಕಾಣುತ್ತಿದೆಯಾದರೂ ಚಾಣಾಕ್ಷ ಸಿದ್ದರಾಮಯ್ಯ ಹೆಚ್ಚು ಹಿಂದೆ ಏನೂ ಇಲ್ಲ.