ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಹೆಸರು ಸೇರ್ಪಡೆ?
ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ ಜಯಭೇರಿ ಬಾರಿಸಿದ ಮೇಲೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರು ಸಂಭ್ರಮದಿಂದ ಬೆಂಗಳೂರಿಗೆ ಬಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಚರ್ಚೆಗೆ ಹೊಸ ತಿರುವು ಸಿಕ್ಕಿದೆ
ಬೆಂಗಳೂರು, ಏಪ್ರಿಲ್ 17: ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ ಜಯಭೇರಿ ಬಾರಿಸಿದ ಮೇಲೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರು ಸಂಭ್ರಮದಿಂದ ಬೆಂಗಳೂರಿಗೆ ಬಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಚರ್ಚೆಗೆ ಹೊಸ ತಿರುವು ಸಿಕ್ಕಿದೆ. ಸಚಿವ ಎಂಬಿ ಪಾಟೀಲ್ ಅವರ ಹೆಸರು ಹೊಸದಾಗಿ ಸೇರ್ಪಡೆಗೊಂಡಿದೆ.
ಕೆಪಿಸಿಸಿ ನೂತನ ಸಾರಥಿಯಾಗಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗುವ ಕಾಲ ಕೂಡಿ ಬಂದಿದೆ. ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ ಎಂಬ ಸುದ್ದಿಯೊಂದು ಉಪ ಚುನಾವಣೆಗೂ ಮುನ್ನ ಹಬ್ಬಿತ್ತು.
ಆದರೆ, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಲಾಬಿ ನಡೆಸಲು ದೆಹಲಿಗೆ ತೆರಳಿಲ್ಲ ಎಂದು ಇಂಧನ ಸಚಿವರು ಸ್ಪಷ್ಟಪಡಿಸಿದ್ದರು. ಇದಾದ ಬಳಿಕ ಉಪ ಚುನಾವಣೆ ನಡೆದು ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿತು. ಫಲಿತಾಂಶದ ನಂತರ ಹೈಕಮಾಂಡ್ ನಿಂದ ರಾಜ್ಯ ನಾಯಕರಿಗೆ ಸಿಕ್ಕಿರುವ ಸಂದೇಶವೇನು? ಮುಂದೆ ಓದಿ...

ಜಿ ಪರಮೇಶ್ವರ ಮುಂದುವರಿಕೆ?
ಜಿ ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮತ್ತೊಮ್ಮೆ ಅಧಿಕಾರ ಮುಂದುವರೆಯಲು ಆಸಕ್ತಿ ಹೊಂದಿಲ್ಲ ಎಂಬ ಸುದ್ದಿ ಹರಿದಾಡಿತ್ತು. ಆದರೆ, ದೆಹಲಿಗೆ ಹೋಗಿ ಬಂದ ಮೇಲೆ ಚಿತ್ರಣ ಬದಲಾಗಿದ್ದು, ಉಳಿದಿರುವಷ್ಟು ಕಾಲ ಗೃಹ ಸಚಿವ ಕಮ್ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲು ನಿರ್ಧರಿಸಿದ್ದಾರೆ. 2018ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲಬಲ್ಲವರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸಲು ಚಿಂತನೆ ನಡೆದಿದೆ.

ಸಿದ್ದರಾಮಯ್ಯ ಅವರಿಗೆ ಆನೆಬಲ
ಸಿಎಂ ಸಿದ್ದರಾಮಯ್ಯ ಅವರಿಗೆ ಆನೆಬಲ ಬಂದಂತೆ ಆಗಿದೆ. ಪಕ್ಷದಲ್ಲೂ ಅವರ ಮಾತಿಗೆ ಇನ್ನಷ್ಟು ಬೆಲೆ ಸಿಗುತ್ತದೆ. ಉಳಿದ ಒಂದೂವರೆ ವರ್ಷದಲ್ಲಿ ಸಂಪುಟ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷರ ನೇಮಕ, ಕೊನೆಗೆ ಟಿಕೆಟ್ ಹಂಚಿಕೆಯಲ್ಲೂ ಅವರ ಮಾತಿಗೆ ಹೈಕಮಾಂಡ್ ತಲೆದೂಗಲಿದೆ
ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಒಲವಿದೆ, ಆಡಳಿತ ವಿರೋಧಿ ಅಲೆ ಇಲ್ಲ ಎಂಬ ಸಂದೇಶ ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.

ಲಿಂಗಾಯತರು ಅಧ್ಯಕ್ಷರಾಗುವರೆ?
ಲಿಂಗಾಯತ ಸಮುದಾಯದ ಎಸ್ ಆರ್ ಪಾಟೀಲ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸುವ ಮಾತು ಕೇಳಿ ಬಂದಿತ್ತು. ಆದರೆ, ಯಡಿಯೂರಪ್ಪ ಅವರ ವಿರುದ್ಧ ನಿಲ್ಲಬಲ್ಲ ಸಮರ್ಥವಾಗಿ ತಂತ್ರ ರೂಪಿಸಬಲ್ಲ ಅರ್ಹತೆ ಇರುವವರನ್ನು ಹಾಗೂ ಉತ್ತರಕರ್ನಾಟಕ ಭಾಗದಲ್ಲಿ ಮತಗಳನ್ನು ಸೆಳೆಯಬಲ್ಲವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ವಯಸ್ಸಿನ ಕಾರಣ ಎಸ್ ಆರ್ ಪಾಟೀಲರು ರೇಸಿನಿಂದ ಹಿಂದೆ ಸರಿಯುವ ಎಲ್ಲಾ ಸಾಧ್ಯತೆಯಿದೆ

ಎಂಬಿ ಪಾಟೀಲ
ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂಬ ಬೇಡಿಕೆ ಈಡೇರಿಸಲು ಹೈಕಮಾಂಡ್ ಮುಂದಾಗಿದೆ. ಅಲ್ಲದೆ, ಎಂಬಿ ಪಾಟೀಲರು ಅಧ್ಯಕ್ಷರಾದರೆ, ಸಿಎಂ ಸಿದ್ದರಾಮಯ್ಯ ಅವರಿಗೂ ಸೂಕ್ತ ಬೆಂಬಲ ಸಿಗಲಿದೆ. ದಕ್ಷಿಣ ಭಾಗದಲ್ಲಿ ಸಿದ್ದರಾಮಯ್ಯ ಅವರು ಮತ ಸೆಳೆಯುವ ತಂತ್ರ ಪ್ರಯೋಗಿಸಿದರೆ, ಪಾಟೀಲರನ್ನು ಮುಂದಿಟ್ಟುಕೊಂಡು ಉತ್ತರ ಕರ್ನಾಟಕದಲ್ಲಿ ಮತ ಗಳಿಸಲು ಕಾಂಗ್ರೆಸ್ ಯತ್ನಿಸುತ್ತಿದೆ.

ಅಧ್ಯಕ್ಷರಾದರೆ ಮುಂದೆ ಸಿಎಂ
ಡಿ.ಕೆ.ಶಿವಕುಮಾರ್ ಅವರ ಹೆಸರು ಹೊರತುಪಡಿಸಿದರೆ ದೆಹಲಿಯಲ್ಲಿ ರಾಜ್ಯದ ಪ್ರತಿನಿಧಿಯಾಗಿರುವ ಅಪ್ಪಾಜಿ ನಾಡಗೌಡ, ಮಾಜಿ ಐಟಿ ಬಿಟಿ ಸಚಿವ ಎಸ್.ಆರ್.ಪಾಟೀಲ್, ತುಮಕೂರು ಸಂಸದ ಮುದ್ದಹನುಮೇಗೌಡ, ಶಾಸಕ ಅಪ್ಪಾಜಿ ನಾಡಗೌಡ ಹಾಗೂ ಈಗ ಎಂಬಿಪಾಟೀಲ ಅವರ ಹೆಸರು ಕೇಳಿ ಬಂದಿದೆ. ಅಲ್ಲದೆ ಮಾಜಿ ಕೇಂದ್ರ ಸಚಿವ ಕೆ ಮುನಿಯಪ್ಪ ಅವರಿಗೂ ಆಫರ್ ಸಿಕ್ಕಿತ್ತು. ದಲಿತ ವರ್ಗಕ್ಕೆ ಈಗಾಗಲೇ ಪ್ರಾತಿನಿಧ್ಯ ಸಿಕ್ಕಿರುವುದರಿಂದ ಈ ಬಾರಿ ಒಕ್ಕಲಿಗರಿಗೆ ಅವಕಾಶ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕೆಪಿಸಿಸಿ ಅಧ್ಯಕ್ಷರಾದವರ ಕಣ್ಣು ಸಿಎಂ ಕುರ್ಚಿ ಮೇಲೆ ಇರುತ್ತದೆ

ಚುನಾವಣೆ ಗೆದ್ದಿದ್ದು ಪ್ಲಸ್ ಪಾಯಿಂಟ್
ಉಪ ಚುನಾವಣೆ ಗೆದ್ದಿದ್ದು ಸಿದ್ದರಾಮಯ್ಯ ಅವರಿಗೆ ಪ್ಲಸ್ ಪಾಯಿಂಟ್ ಆಗಿದ್ದು, ಪರಮೇಶ್ವರ ಅಥವಾ ಎಂಬಿ ಪಾಟೀಲ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯ, ರಾಮನಗರ, ಹಳೇ ಮೈಸೂರು ಭಾಗದಲ್ಲಿ ದೇವೇಗೌಡರು, ಎಚ್ಡಿ ಕುಮಾರಸ್ವಾಮಿ ಅವರಿಗೆ ಸಮನಾಗಿ ರಾಜಕೀಯ ತಂತ್ರ ಹೆಣೆಯುವುದು, ಜೆಡಿಎಸ್ ಹಾಗೂ ಬಿಜೆಪಿ ಬಂಡಾಯ, ಭಿನ್ನಮತದ ಲಾಭ ಪಡೆದು ಕಾಂಗ್ರೆಸ್ಸಿಗೆ ಲಾಭ ತರುವುದು ಕಾಂಗ್ರೆಸಿನ ಆಲೋಚನೆಯಾಗಿದೆ.












Click it and Unblock the Notifications