ರಮೇಶ್ ಕುಮಾರ್ ರಾಜೀನಾಮೆ: ಮುಂದಿನ ಸ್ಪೀಕರ್ ಯಾರು?
ಬೆಂಗಳೂರು, ಜುಲೈ 29: ಸರ್ಕಾರಕ್ಕೆ ಕೈ ಕೊಟ್ಟ ಅತೃಪ್ತ ಶಾಸಕರೆಲ್ಲರನ್ನೂ ಅನರ್ಹಗೊಳಿಸಿ ಐತಿಹಾಸಿಕ ತೀರ್ಪು ನೀಡಿದ ಸ್ಪೀಕರ್ ರಮೇಶ್ ಕುಮಾರ್ ಅವರು ತೀರ್ಪು ನೀಡಿದ ಮರುದಿನವೇ ನಿರ್ಗಮಿಸಿದ್ದಾರೆ. ಯಡಿಯೂರಪ್ಪ ಅವರು ವಿಶ್ವಾಸಮತ ಗೆದ್ದ ಕೂಡಲೇ ರಮೇಶ್ ಕುಮಾರ್ ಅವರು ಭಾವುಕ ಭಾಷದೊಂದಿಗೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸಂವಿಧಾನದ ಜ್ಞಾನ, ಕಾನೂನು ಮಾಹಿತಿ, ರಾಜಕೀಯ ಇತಿಹಾಸ, ನಿಷ್ಪಕ್ಷಪಾತ, ಹಾಸ್ಯ ಪ್ರಜ್ಞೆ, ಸಿಟ್ಟು, ನಿಷ್ಠುರತೆ ಎಲ್ಲವನ್ನೂ ಒಳಗೊಂಡಿದ್ದ ಮಾದರಿ ಸ್ಪೀಕರ್ ರಮೇಶ್ ಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದು ಅತ್ಯಂತ ಕುತೂಹಲ ಕೆರಳಿಸಿದೆ.
ಬಿಜೆಪಿಯ ಶಾಸಕರೊಬ್ಬರು ಸ್ಪೀಕರ್ ಆಗಲಿದ್ದು, ಬಿಜೆಪಿಯ ಯಾವ ಹಿರಿಯ ಶಾಸಕರು ಜವಾಬ್ದಾರಿಯುತ ಸ್ಪೀಕರ್ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ನಾಳೆ (ಮಂಗಳವಾರ) ಮಧ್ಯಾಹ್ನ 12 ಗಂಟೆ ವೇಳೆಗೆ ಸ್ಪೀಕರ್ ಆಗಬಯಸುವವರ ಹೆಸರನ್ನು ಕಾರ್ಯದರ್ಶಿ ಅವರ ಬಳಿ ನೊಂದಾಯಿಸಬೇಕಿದ್ದು, ಸ್ಪೀಕರ್ ಆಯ್ಕೆಯು ಬುಧವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಸಾಮಾನ್ಯವಾಗಿ ಸ್ಪೀಕರ್ ಆಯ್ಕೆಯನ್ನು ಅವಿರೋಧವಾಗಿ ಮಾಡಲಾಗುತ್ತದೆ. ಈ ಬಾರಿ ಬಿಜೆಪಿಯು ಯಾರಾದರೂ ಒಬ್ಬರ ಹೆಸರನ್ನು ಸೂಚಿಸಲಿದೆ. ಪ್ರತಿಪಕ್ಷಗಳು ಯಾವುದೇ ಹೆಸರನ್ನು ಸೂಚಿಸುವ ಸಾಧ್ಯತೆ ಬಹಳ ಕಡಿಮೆ. ಬಿಜೆಪಿಯು ಯಾರ ಹೆಸರನ್ನು ಸೂಚಿಸುವ ಸಾಧ್ಯತೆ ಇದೆ ಎಂಬ ಅಂದಾಜು ಪಟ್ಟಿ ಇಲ್ಲಿದೆ.

ಜಗದೀಶ್ ಶೆಟ್ಟರ್ ಹೆಸರು ಮುಂಚೂಣಿಯಲ್ಲಿ
ಸದನದಲ್ಲಿ ಹಿರಿಯರೂ, ಸರ್ವ ಪಕ್ಷಗಳ ಮಿತ್ರರೂ ಆಗಿರುವ ಜಗದೀಶ್ ಶೆಟ್ಟರ್ ಅವರ ಹೆಸರನ್ನು ಬಿಜೆಪಿ ಸೂಚಿಸುವ ಸಾಧ್ಯತೆ ಹೆಚ್ಚಿದೆ. ಸ್ಪೀಕರ್ ಸ್ಥಾನಕ್ಕೆ ಅವರ ಹೆಸರೇ ಮುಂಚೂಣಿಯಲ್ಲಿದೆ. ಮಾಜಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಬೇರೆ ಸಚಿವ ಸ್ಥಾನಗಳನ್ನು ನೀಡುವುದಕ್ಕೆ ಬದಲಾಗಿ, ಗೌರವಾನ್ವಿತ ಹುದ್ದೆಯಾದ ಸ್ಪೀಕರ್ ಹುದ್ದೆಯನ್ನು ನೀಡುವುದು ಲೇಸು ಎಂದು ಬಿಜೆಪಿ ಆಂತರಿಕ ಲೆಕ್ಕಾಚಾರ ಹಾಕಿದೆ.

ಬೋಪಯ್ಯ ಮೇಲೆ ಯಡಿಯೂರಪ್ಪಗೆ ಒಲವು
ಈ ಹಿಂದೆ ಸ್ಪೀಕರ್ ಆಗಿದ್ದ ಆಗ ಬಹು ವಿವಾದ ಹುಟ್ಟುಹಾಕಿದ್ದ ಬೋಪಯ್ಯ ಅವರನ್ನೇ ಮತ್ತೆ ಸ್ಪೀಕರ್ ಹುದ್ದೆಗೆ ಪರಿಗಣಿಸುವ ಸಾಧ್ಯತೆ ಇದೆ. ಬೋಪಯ್ಯ ಅವರು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಪಕ್ಷದ ನೆರವಿಗೆ ಬರುತ್ತಾರೆ, ಅವಶ್ಯಕತೆ ಬಿದ್ದಾಗ ಪಕ್ಷಪಾತಿ ಆಗುತ್ತಾರೆ ಎಂಬ ಕಾರಣಕ್ಕೆ ಯಡಿಯೂರಪ್ಪ ಅವರಿಗೆ ಬೋಪಯ್ಯ ಅವರ ಮೇಲೆ ಒಲವಿದೆ ಎನ್ನಲಾಗುತ್ತಿದೆ. ಬೋಪಯ್ಯ ಅವರು ಹಿರಿಯರಾದರೂ ಈ ಹಿಂದೆ ಅವರ ಪಕ್ಷಪಾತಿ ನಿಲವು ಕಂಡಿರುವರು ಅವರ ಆಯ್ಕೆಯನ್ನು ವಿರೋಧಿಸುತ್ತಿದ್ದಾರೆ. ಸ್ವತಃ ಬಿಜೆಪಿಯಲ್ಲಿಯೇ ಅವರ ಆಯ್ಕೆಗೆ ವಿರೋಧವಿದೆ.

ಕಳೆದ ಬಾರಿ ಸುರೇಶ್ ಕುಮಾರ್ ಹೆಸರು ಸೂಚಿಸಲಾಗಿತ್ತು
15ನೇ ವಿಧಾನಸಭೆಗೆ ಸ್ಪೀಕರ್ ಆಯ್ಕೆ ನಡೆದಾಗ ಸುರೇಶ್ ಕುಮಾರ್ ಅವರ ಹೆಸರನ್ನು ಬಿಜೆಪಿ ಮೊದಲಿಗೆ ಸೂಚಿಸಿತ್ತು, ಆದರೆ ಅಂತಿಮವಾಗಿ ಯಡಿಯೂರಪ್ಪ ಅವರು ಸ್ಪೀಕರ್ ಆಯ್ಕೆಯನ್ನು ಸರ್ವಾನುಮತದಿಂದ ಆಯ್ಕೆ ಮಾಡುವ ಪರಿಪಾಠವನ್ನು ಮುಂದುವರೆಸುವ ಉದ್ದೇಶದಿಂದ ಸುರೇಶ್ ಅವರ ಹೆಸರನ್ನು ಹಿಂಪಡೆದರು. ಆದರೆ ಸುರೇಶ್ ಕುಮಾರ್ ಅವರಿಗೆ ಸದನದ ನಡಾವಳಿ, ನಿಯಮಗಳ ಬಗ್ಗೆ ಜ್ಞಾನವಿದ್ದು, ಪಕ್ಷಾತೀತವಾಗಿ ಕೆಲಸ ಮಾಡುವ ವ್ಯಕ್ತಿತ್ವವನ್ನೂ ಹೊಂದಿದ್ದಾರೆ. ಹಾಗಾಗಿ ಅವರನ್ನೂ ಬಿಜೆಪಿಯು ಸ್ಪೀಕರ್ ಆಯ್ಕೆಗೆ ಪರಿಗಣಿಸುವ ಸಾಧ್ಯತೆ ಇದೆ.

ಅನುಭವಿ ವಿಶ್ವೇಶ್ವರ ಹೆಗಡೆ ಕಾಗೇರಿ ಆಗುವರೇ ಸ್ಪೀಕರ್?
ಆರು ಬಾರಿ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸ್ಪೀಕರ್ ಮಾಡುವ ಉದ್ದೇಶವೂ ಯಡಿಯೂರಪ್ಪ ಅವರಿಗೆ ಇದೆ ಎನ್ನಲಾಗಿದೆ. ಕಾಗೇರಿ ಅವರಿಗೆ ಹಿರಿತನವೂ ಇದ್ದು, ಸದನದ ನಡಾವಳಿಗಳ ಪರಿಚಯವೂ ಇದೆ. ಹಾಗಾಗಿ ಅವರನ್ನು ಸ್ಪೀಕರ್ ಹುದ್ದೆಗೆ ಪರಿಗಣಿಸುವ ಸಾಧ್ಯತೆ ಇದೆ.

ಇನ್ನೂ ಕೆಲವು ಹೆಸರುಗಳು ಚಾಲ್ತಿಯಲ್ಲಿ
ಹಿರಿಯ ಶಾಸಕರಾದ ಸಿಎಂ ಉದಾಸಿ, ಉತ್ತಮ ಸಂಸದೀಯ ಪಟುವಾದ ಬಸವರಾಜ ಬೊಮ್ಮಾಯಿ ಅವರುಗಳ ಹೆಸರೂ ಸಹ ಕೇಳಿಬರುತ್ತಿದೆ. ಆದರೆ ಬಸವರಾಜ ಬೊಮ್ಮಾಯಿ ಅವರು ಸ್ಪೀಕರ್ ಹುದ್ದೆ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಇದೆ.











Click it and Unblock the Notifications