ನಲಪಾಡ್ ಗ್ಯಾಂಗ್ ದಾಳಿಗೆ ನಲುಗಿದ ವಿದ್ವತ್ ಯಾರು?
ಬೆಂಗಳೂರು, ಫೆಬ್ರವರಿ 22: ಭದ್ರಾವತಿಯಿಂದ ಬೆಂಗಳೂರಿಗೆ ಬಂದು ಸಣ್ಣ ಮಟ್ಟದ ವ್ಯಾಪಾರ, ಗುತ್ತಿಗೆಗಳನ್ನು ಪಡೆಯುವ ಮೂಲಕ ಬೆಳದ ನಲಪಾಡ್ ಕುಟುಂಬ ಇಂದು ದೇಶ- ವಿದೇಶಗಳಲ್ಲಿ ಬೇಡದ ವಿಷಯಕ್ಕೆ ಚರ್ಚೆಗೊಳಲಾಗುತ್ತಿದೆ.
ನಲಪಾಡ್ ಕುಟುಂಬದ ಮೊಹಮ್ಮದ್ ಹ್ಯಾರೀಸ್ ನಿಂದಾಗಿ ಕುಟುಂಬಕ್ಕೆ ಕಳಂಕ ಮೆತ್ತುಕೊಂಡಿದೆ. ಇನ್ನೊಂಡೆದೆ ನಲಪಾಡ್ ಗ್ಯಾಂಗಿನ ಹೊಡೆತಕ್ಕೆ ಸಿಲುಕಿ ನಲುಗಿರುವ ವಿದ್ವತ್ ಇನ್ನೂ ಚೇತರಿಸಿಕೊಂಡಿಲ್ಲ. ವಿದ್ವತ್ ಯಾರು ಎಂಬ ಹುಡುಕುತ್ತಾ ಹೊರಟರೆ, ಆಧುನಿಕ ಬೆಂಗಳೂರಿನ ನಿರ್ಮಾತೃ ಎಂದೆನಿಸಿರುವ ದಿವಾನ್ ಕೆ ಶೇಷಾದ್ರಿ ಅಯ್ಯರ್ ಅವರ ಕುಟುಂಬಸ್ಥ ಎಂದು ತಿಳಿದು ಬರುತ್ತದೆ.
ಮೈಸೂರು ಒಡೆಯರ ಕಾಲದಲ್ಲಿ 1883 ರಿಂದ 1901ರ ತನಕ ದಿವಾನರಾಗಿ ಕರ್ತವ್ಯ ನಿರ್ವಹಿಸಿದ ಶೇಷಾದ್ರಿ ಅಯ್ಯರ್ ಅವರ ಮರಿ ಮೊಮ್ಮಗನೇ ವಿದ್ವತ್. ಸಿಂಗಪುರದಲ್ಲಿ ಪದವಿ ಪಡೆದು ಅಲ್ಲೆ ಉದ್ಯೋಗ ಕೂಡಾ ಮಾಡಲು ಮುಂದಾಗಿದ್ದ ವಿದ್ವತ್, ಬೆಂಗಳೂರಿಗೆ ಈಗ ಬಂದಿದ್ದು ರಜೆಯ ವಿಹಾರಕ್ಕಾಗಿ, ಆದರೆ, ಯಾವ ಕೆಟ್ಟ ಗಳಿಗೆಯೋ ಏನೋ ಪರಿಚತ ನಲಪಾಡ್ ಗ್ಯಾಂಗಿನಿಂದಲೇ ಹೊಡೆತ ತಿನ್ನ ಬೇಕಾಯಿತು.
ಕೆಜಿಎಫ್, ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರಿಗೆ ವಿದ್ಯುತ್ ಹರಿಸಿದ ಶಿವನಸಮುದ್ರ ಯೋಜನೆ, ಗಣ್ಯಾತಿಗಣ್ಯರ ವಾಸಸ್ಥಾನ ಕುಮಾರಕೃಪ ಗೆಸ್ಟ್ ಹೌಸ್, ಸೇರಿದಂತೆ ಕಟ್ಟಡಗಳು ದಿವಾನ್ ಶೇಷಾದ್ರಿ ಆಯ್ಯರ್ ಅವರ ಕಾಲದಲ್ಲಿ ತಲೆ ಎತ್ತಿದ್ದು ಎಂಬುದನ್ನು ಮರೆಯುವಂತಿಲ್ಲ. ದಿವಾನರ ಘನತೆ ಚ್ಯುತಿ ಬಾರದಂತೆ ಇಂದಿಗೂ ಈ ಕುಟುಂಬ ನಡೆದುಕೊಂಡು ಬಂದಿದೆ.

ಬಂಧನ ಬಗ್ಗೆ ಆಶ್ವಾಸನೆ ಇರಲಿಲ್ಲ
ಆ ದಿನ ಫರ್ಜಿ ಕೆಫೆಯಲ್ಲಿ ನಡೆದಿದ್ದೇನು? ಈಗ ಎಲ್ಲರಿಗೂ ತಿಳಿದಿದೆ. ವಿದ್ವತ್ ಸೋದರ ಸಾತ್ವಿಕ್ ಬೇಡಿಕೊಂಡರೂ, ನಲಪಾಡ್ ಗ್ಯಾಂಗಿನ ಆಟಾಟೋಪ ನಿಲ್ಲಲಿಲ್ಲ. ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ನಿಂತು ವಿದ್ವತ್ ಗೆಳೆಯ ಪ್ರವೀಣ್ ವೆಂಕಟಚಲಯ್ಯ ದೂರು ನೀಡಿದರೂ ಮೊಹಮ್ಮದ್ ಬಂಧನ ಬಗ್ಗೆ ಆಶ್ವಾಸನೆ ಇರಲಿಲ್ಲ.
ನಲಪಾಡ್ ಮತ್ತು ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್ 341, 506, 143, 144, 146, 147, 326 ಮತ್ತು 504 ಅನ್ವಯ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

ಕಾಂಗ್ರೆಸ್ಸಿನಿಂದ ನಲಪಾಡ್ ಉಚ್ಚಾಟನೆ
ಬೆಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ನಲಪಾಡ್ ಅವರನ್ನು 6 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಸದಸ್ಯತ್ವದಿಂದ ಉಚ್ಚಾಟಣೆ ಮಾಡಲಾಗಿದೆ. ನಂತರ ಕಬ್ಬನ್ ಪಾರ್ಕಿನ ಕೆಲ ಪೊಲೀಸರು ನಲಪಾಡ್ ಗ್ಯಾಂಗ್ ರಕ್ಷಣೆಗೆ ನಿಂತಿದ್ದು, ಕೊನೆಗೂ ನಲಪಾಡ್ ಮೊಹಮ್ಮದ್ ಹ್ಯಾರೀಸ್ ಬಂಧನವಾಗಿದೆ. ಆದರೆ, ಯಾವುದೇ ವಿಷಾದವಾಗಲಿ, ಪಶ್ಚಾತ್ತಾಪವಿರದ ಮೊಹಮ್ಮದ್ ವಿರುದ್ಧ ವಿರೋಧ ಹೆಚ್ಚಾಗುತ್ತಲೇ ಇದೆ.

ವಿದ್ವತ್ ಆರೋಗ್ಯ ಸುಧಾರಣೆಯಾಗದಿದ್ದರೆ
ಮೊಹಮ್ಮದ್ ಕಥೆ ಹಾಗಿರಲಿ, ವಿದ್ವತ್ ಆರೋಗ್ಯ ಸುಧಾರಣೆಯಾಗದಿದ್ದರೆ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಸೇರಿಸಲು ಲೋಕನಾಥ್ ಅವರ ಕುಟುಂಬ ಮುಂದಾಗಿದೆ. ಈ ನಡುವೆ ವಿದ್ವತ್ ನನ್ನು ಬಿಜೆಪಿ ಕಾರ್ಯಕರ್ತ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದು, ಲೋಕನಾಥ್ ರಿಗೆ ನೋವು ತಂದಿದ್ದು ಸುಳ್ಳಲ್ಲ. ಕೊನೆಗೆ ಮಾಜಿ ಸಚಿವ ಆರ್ ಅಶೋಕ್ ಅವರು ಸಂಧಾನ ಮಾಡಿ, ಅಮಿತ್ ಶಾ ಅವರು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಮಾಡುವಷ್ಟರಲ್ಲಿ ಸಾಕಾಯಿತು. ವಿದ್ವತ್ ಎಡಗಣ್ಣಿಗೆ ಭಾರಿ ಪೆಟ್ಟಾಗಿದೆ. ಮೂಗು ಮುರಿದಿದೆ. ಎದೆಯ ಪಕ್ಕೆಲುಬುಗಳು ಮುರಿದಿವೆ. ಆದರೆ, ಪ್ಲಾಸ್ಟಿಕ್ ಸರ್ಜರಿ ಅಗತ್ಯವಿಲ್ಲ ಎಂದು ವೈದ್ಯ ಆನಂದ್ ಹೇಳಿರುವುದು ಸಮಾಧಾನಕರ ಸಂಗತಿ.

ಉದ್ಯಮಿ ಲೋಕನಾಥ್ ಅಂದರೆ ಹಾಗೆ
ಉದ್ಯಮಿ ಲೋಕನಾಥ್ ಅಂದರೆ ಹಾಗೆ, ಎಲ್ಲಾ ಪಕ್ಷಗಳಿಗೂ ಬೇಕಾದವರು. ನಲಪಾಡ್ ಗ್ಯಾಂಗಿನ ದಾಳಿ, ವಿದ್ವತ್ ಆರೋಗ್ಯದ ಬಗ್ಗೆ ನಿರಂತರವಾಗಿ ವಿಚಾರಿಸುತ್ತಿರುವವರ ಪೈಕಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಬಿಜೆಪಿಯ ನಾಯಕ, ಮಾಜಿ ಡಿಸಿಎಂ ಆರ್ ಅಶೋಕ್, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿ ಸಂಸದ ಪಿ.ಸಿ ಮೋಹನ್ ಹೆಸರಿಸದೇ ಇರಲಾಗದು.

ಇವರೆಲ್ಲರಿಗಿಂತ ನೊಂದಿರುವುದು ಡಾ. ರಾಜ್ ಕುಟುಂಬ
ಇವರೆಲ್ಲರಿಗಿಂತ ನೊಂದಿರುವುದು ಡಾ. ರಾಜ್ ಕುಮಾರ್ ಕುಟುಂಬ. ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಗುರು ಅವರ ಬಾಲ್ಯದ ಗೆಳೆಯರಾಗಿರುವ 24 ವರ್ಷ ವಯಸ್ಸಿನ ವಿದ್ವತ್ ಬಗ್ಗೆ ಇಡೀ ಡಾ. ರಾಜ್ ಕುಟುಂಬಕ್ಕೆ ಕಾಳಜಿಯಿದೆ. ಮನೆ ಮಗನಂತೆ ಪ್ರೀತಿಯಿಂದ ಕಾಣುತ್ತಾರೆ. ಮಲ್ಯ ಆಸ್ಪತ್ರೆಯಲ್ಲಿ ಹಲ್ಲೆ ನಡೆಸಲು ಬಂದಾಗ ಗುರು ಅವರು ಅಲ್ಲಿದ್ದರು, ಹಾಸ್ಯ ನಟರೊಬ್ಬರ ಮಗ ಮುಂದೆ ಬಂದು ನಲಪಾಡ್ ಗ್ಯಾಂಗಿಗೆ ಇಲ್ಲಿರುವುದು ಡಾ. ರಾಜ್ ಅವರ ಮೊಮ್ಮಗ ಎಂದು ಪರಿಚಯಿಸುತ್ತಿದ್ದಂತೆ, ನಲಪಾಡ್ ಹೆಜ್ಜೆ ಹಿಂದಿಟ್ಟಿದ್ದು ಗೊತ್ತಿಗಿರಬಹುದು.












Click it and Unblock the Notifications