ರೀಲ್ಸ್ ಮಾಡಿದವನನ್ನು ಹುಡುಕುವ ಪೊಲೀಸರಿಗೆ ಎಂಎಲ್ಎ ಸಿಗಲ್ವಾ?
ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎಲ್ಲಿ?. ಒಬ್ಬ ಶಾಸಕನನ್ನು ಹುಡುಕಿ ಬಂಧಿಸಲು ಎಷ್ಟು ದಿನ ಬೇಕು? ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನಿಸಿದೆ.
ಬೆಂಗಳೂರು, ಮಾರ್ಚ್ 05; ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಲಂಚ ಪ್ರಕರಣ ರಾಜ್ಯ ರಾಜಕೀಯದಲ್ಲಿ ಬಿಸಿ-ಬಿಸಿ ಚರ್ಚೆಗೆ ಕಾರಣವಾಗಿದೆ. ಚುನಾವಣಾ ಸಮಯದಲ್ಲಿ ಈ ವಿಚಾರವನ್ನು ಪ್ರತಿಪಕ್ಷ ಕಾಂಗ್ರೆಸ್ ಬಳಕೆ ಮಾಡಿಕೊಂಡು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಈ ಪ್ರಕರಣದಲ್ಲಿ ದೊಡ್ಡ ಹೋರಾಟ ನಡೆಸಲು ತಂತ್ರ ರೂಪಿಸಿದೆ.
ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಹಾಕಿದ್ದಾರೆ. ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಶಾಸಕರು ಮೊದಲ ಆರೋಪಿ. ಪುತ್ರನ ಲಂಚ ಪ್ರಕರಣ ಬೆಳಕಿಗೆ ಬಂದ ಬಳಿಕ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ಡಿಎಲ್) ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ ನೀಡಿದ್ದಾರೆ.

ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಸೋಮವಾರ ವಿಚಾರಣೆಗೆ ಹಾಜರಾಗಿ ಎಂದು ಲೋಕಾಯುಕ್ತ ಪೊಲೀಸರು ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಎರಡು ದಿನ ಕಳೆದರೂ ಶಾಸಕರನ್ನು ಹುಡುಕಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ಕುರಿತು ಕರ್ನಾಟಕ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. '@BSBommai ಅವರೇ, ನೀವು ಮತ್ತು ನಿಮ್ಮ 40% ಪಟಾಲಂ ಯಾರ #KiviMeleHoova ಇಡಲು ಹೊರಟಿದ್ದೀರಿ?' ಎಂದು ಪ್ರಶ್ನೆ ಮಾಡಿದೆ.
ಭಾನುವಾರ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ಯಾಕೆ ಇನ್ನೂ ಮಾಡಾಳ್ ವಿರೂಪಾಕ್ಷಪ್ಪ ಬಂಧಿಸಿಲ್ಲ ಎಂದು ಕರ್ನಾಟಕದ ಬಿಜೆಪಿ ಸರ್ಕಾರವನ್ನು ಕೇಳಿದೆ. 'ಒಬ್ಬ ಶಾಸಕರನ್ನು ಬಂಧಿಸಲು ಮೂರ್ನಾಲ್ಕು ದಿನದಿಂದ ಶೋಧ ನಡೆಸಬೇಕೆ?. ಇದನ್ನು ಜನ ನಂಬಬೇಕೆ?. ಹಂಪಿಯಲ್ಲಿ ರೀಲ್ಸ್ ಮಾಡಿದವರನ್ನೆಲ್ಲ ಹುಡುಕಿ ಬಂಧಿಸುವ ಪೊಲೀಸರಿಗೆ ಜನಪ್ರತಿನಿಧಿಯೊಬ್ಬರು ಕೈಗೆ ಸಿಗುವುದಿಲ್ಲವೇ?' ಎಂದು ಕಾಂಗ್ರೆಸ್ ತನ್ನ ಟ್ವೀಟ್ನಲ್ಲಿ ಪ್ರಶ್ನಿಸಿದೆ.
ಕಾಂಗ್ರೆಸ್ #40PercentSarkara ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿಕೊಂಡು ಟ್ವೀಟ್ ಮಾಡಿದ್ದು,
'ಭ್ರಷ್ಟಾಚಾರದ ಆರೋಪಿ ಶಾಸಕ ಮಾಡಾಳ್ ವೀರೂಪಾಕ್ಷಪ್ಪರನ್ನು ಇನ್ನೂ ಬಂಧಿಸಲಾಗಿಲ್ಲ ಎಂದರೆ ಏನರ್ಥ @BSBommai ಅವರೇ?. ಪೊಲೀಸರು ಅಸಮರ್ಥರೇ?, ಸರ್ಕಾರದ ಅಸಾಮರ್ಥ್ಯವೇ?, ಅಥವಾ ಭ್ರಷ್ಟರ ರಕ್ಷಣೆಯೇ?. ಶಾಸಕರಾದವರು ಪೊಲೀಸರ ಕೈಗೆ ಸಿಗದಿರಲು ಸಾಧ್ಯವೇ? ಇಂಟಲಿಜೆನ್ಸ್ ನಿದ್ದೆ ಮಾಡುತ್ತಿದೆಯೇ?' ಎಂದು ಕೇಳಿದೆ.

'KSDL ಸಂಸ್ಥೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದ ಸುಳಿವು ಸರ್ಕಾರಕ್ಕಿದ್ದರೂ ಸುಮ್ಮನೆ ಕುಳಿತಿದ್ದೇಕೆ @BSBommai ಅವರೇ?. ಸ್ವತಂತ್ರ ಸಂಸ್ಥೆ ಲೋಕಾಯುಕ್ತದ ದಾಳಿಯನ್ನು 'ಕ್ರೆಡಿಟ್' ಆಗಿ ಪರಿವರ್ತಿಸಲು ಹವಣಿಸುವ ಮೊದಲು ಭ್ರಷ್ಟಾಚಾರದ ನಿಗ್ರಹಕ್ಕೆ ಸರ್ಕಾರದ ಕ್ರಮ ಏನಿದೆ ಹೇಳಿ? ಇನ್ನೂ ಶಾಸಕರ ಬಂಧನವೇಕಿಲ್ಲ?' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮತ್ತೊಂದು ಟ್ವೀಟ್ನಲ್ಲಿ ಕಾಂಗ್ರೆಸ್ ಪಕ್ಷ, 'ಪಂಚಮಸಾಲಿ ಹೋರಾಟಗಾರರಿಗೆ @BSBommai ಅವರ ಉಡುಗೊರೆ- ಬಂಧನ. ಭ್ರಷ್ಟ ಶಾಸಕ ವೀರೂಪಾಕ್ಷಪ್ಪರಿಗೆ- ರಕ್ಷಣೆ. ಭೇಷ್ ಮುಖ್ಯಮಂತ್ರಿಗಳೇ!. ಹೋರಾಟಗಾರರ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸರಿಗೆ ಭ್ರಷ್ಟಾಚಾರದ ಆರೋಪಿ ಶಾಸಕರು ಕಾಣಿಸುತ್ತಿಲ್ಲವೇಕೆ?. ಮಾಡಾಳ್ ವೀರೂಪಾಕ್ಷಪ್ಪರನ್ನು ಹುಡುಕುವ ಬದಲು ಹೋರಾಟಗಾರರನ್ನು ಹತ್ತಿಕ್ಕುವುದೇ ನಿಮ್ಮ ಆದ್ಯತೆಯೇ?'
'ರಾಜ್ಯ ಆಳುತ್ತಿರುವುದು ಸಿಎಂ @BSBommai ಅವರೊ ಅಥವಾ ಬಿಜೆಪಿಯ ವರಿಷ್ಠರೋ?. ತಮ್ಮ ಶಾಸಕರ ಭ್ರಷ್ಟಾಚಾರ ಹೊರಬಂದ ನಂತರವೂ ಗಟ್ಟಿ ನಿರ್ಧಾರ ಕೈಗೊಳ್ಳಲಾಗದೆ "ಪಕ್ಷದ ವರಿಷ್ಠರ" ಕಡೆ ಕೈ ತೋರುವವರನ್ನು #PuppetCM ಎನ್ನದೆ ಇನ್ನೇನು ಹೇಳಬೇಕು?. ಪರಿಸ್ಥಿತಿ ಹೀಗಿರುವಾಗ "ಅಸಮರ್ಥ ಸಿಎಂ" ಎಂದರೆ ಕೋಪವೇಕೆ ಬೊಮ್ಮಾಯಿಯವರೇ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.












Click it and Unblock the Notifications