ಕಸದ ಲಾರಿ ವೇಗವಾಗಿ ಹೋಯ್ತು, ಆಸ್ಪತ್ರೆ ತ್ಯಾಜ್ಯ ರಸ್ತೆ ಪಾಲಾಯ್ತು
ನೀವು ಯಾವುದೋ ಕೆಲಸದ ನಿಮಿತ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತೀರಿ. ಇದಕ್ಕಿದ್ದಂತೆ ಆಗಮಿಸುವ ಕಸ ತುಂಬಿದ ಲಾರಿ ನಿಮ್ಮೆದುರೇ ಯು ಟರ್ನ್ ತೆಗೆದುಕೊಳ್ಳುತ್ತದೆ. ಅದು ನಂತರ ಬಂದ ಮಾರ್ಗದಲ್ಲಿ ಮುಂದಕ್ಕೆ ಸಾಗುವಾಗ ತನ್ನೊಡಲ್ಲಿದ್ದ ಕಸವನ್ನು ರಸ್ತೆ ತುಂಬಾ ಸುರಿಸಿ ಸಾಗುತ್ತದೆ. ಅದರಲ್ಲಿ ಆಸ್ಪತ್ರೆ ತ್ಯಾಜ್ಯವೂ ಇರುತ್ತದೆ. ಹೌದು ಇಂಥದ್ದೊಂದು ಘಟನೆ ನನ್ನ ಕಣ್ಣೆದುರೆ ಬುಧವಾರ ಮಧ್ಯಾಹ್ನ ನಡೆಯಿತು.
ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಊಟಕ್ಕೆಂದು ಜಯನಗರದದ ಎನ್ ಎಂಕೆಆರ್ ವಿ ಕಾಲೇಜಿನ ಎದುರು ತೆರಳುತ್ತಿದ್ದೆ. ದೂರದಲ್ಲಿಯೇ ಕಂಡ ಕಸ ತುಂಬಿದ ಲಾರಿಯನ್ನು ನೋಡಿ, 'ಓ ಹೋ ಕಸ ವಿಲೇವಾರಿ ಸಮಸ್ಯೆ ಬಗೆಹರಿದಿದೆ. ಬೆಂಗಳೂರು ಸ್ವಚ್ಛವಾಗಿದೆ' ಎಂದು ಹೆಮ್ಮೆ ಪಟ್ಟುಕೊಂಡೆ.[ಬೆಂಗಳೂರಿನ ಕಸದ ಸಮಸ್ಯೆಗೆ ಯುಎಸ್ ಕಂಪನಿಯಿಂದ ಪರಿಹಾರ]
ಬನಶಂಕರಿಗೆ ತೆರಳುವ ರಸ್ತೆಯಿಂದ ಎನ್ ಎಂಕೆಆರ್ ವಿ ಕಾಲೇಜಿನ ಎದುರು ಆಗಮಿಸಿದ ಕಸದ ಲಾರಿ ತುಂಬಿ ತುಳುಕುತ್ತಿತ್ತು. ಬಿಬಿಎಂಪಿ ಸರಿಯಾದ ರೀತಿ ಕೆಲಸ ಮಾಡುತ್ತಿದೆ ಎಂದು ಅಂದುಕೊಂಡು ನಾನು ಹೊಟ್ಟೆ ತುಂಬಿಸಿಕೊಳ್ಳಲು ಹೋಟೆಲ್ ಕಡೆ ಹೆಜ್ಜೆ ಹಾಕುತ್ತಿದ್ದೆ. ಆದರೆ ಮುಂದಕ್ಕೆ ಬಂದ ಲಾರಿ ಭೀಮಾ ಆಭರಣ ಮಳಿಗೆ ಎದುರು ಯು ಟರ್ನ್ ತೆಗೆದುಕೊಳ್ಳಲು ಆರಂಭಿಸಿತು.
ವಾಸನೆ ಸಹಿಸಿಕೊಳ್ಳದೇ ಬೇರೆ ದಾರಿ ಇರಲಿಲ್ಲ. ಅದು ಅನಿವಾರ್ಯ ಕೂಡಾ. ಪಕ್ಕದ ಫುಟ್ ಪಾತ್ ಏರಿ ನಿಂತುಕೊಂಡೆ. ನನ್ನಂತೆ ಬೈಕ್ ಸವಾರರು, ದಾರಿಹೋಕರು ಅಲ್ಲಲ್ಲೇ ನಿಂತುಕೊಂಡರು. ಯು ಟರ್ನ್ ಮಾಡಿಕೊಂಡ ಲಾರಿ ಒಮ್ಮೆಲೇ ವೇಗವಾಗಿ ಮುಂದಕ್ಕೆ ತೆರಳಿತು.[ಬೆಂಗಳೂರು: ಶಂಕರ್ ನಾಗ್ ವೃತ್ತದ ಸುತ್ತ ಇದೆಂಥ ವಾಸನೆ?]
ಮುಂದಕ್ಕೆ ತೆರಳುವ ಭರದಲ್ಲಿ ಲಾರಿಯಿಂದ ಆಸ್ಪತ್ರೆ ತ್ಯಾಜ್ಯಗಳು, ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಕವರ್, ಖಾಲಿಯಾದ ಔಷಧ ಬಾಟಲಿಗಳು ಉದುರಿಬಿದ್ದಿದ್ದವು. ಪಕ್ಕದ ಜ್ಯೂಸ್ ಸೆಂಟರ್ ನಲ್ಲಿ ಯುವತಿಯರು ಪಾನೀಯ ಹೀರುತ್ತಿದ್ದರೆ, ಬೇಕರಿ ತಿಂಡಿಗಳನ್ನು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರಿಗೂ ಕಡಿಮೆ ಇರಲಿಲ್ಲ. ಲಾರಿಯಿಂದ ಹಾರಿಬಂದ ಕಾಗದದ ಚೂರುಗಳು ಅವರಿಗೆ ರಾಚಿದ್ದವು.
ಲಾರಿಯ ಹಿಂಬದಿಯ ಬಾಗಿಲು ತೆರೆದೇ ಇತ್ತು. ಓವರ್ ಲೋಡ್ ಆದ ಲಾರಿಯಲ್ಲಿ ಇಂಧನದ ಟ್ಯಾಂಕ್ ಮೇಲೂ ಕಸದ ಕವರ್ ಗಳನ್ನು ಕಟ್ಟಿದ್ದರು. ಬಾಗಿಲು ತೆರೆದಿದ್ದ ಪರಿಣಾಮ ರಸ್ತೆಯೂದ್ದಕ್ಕೂ ತ್ಯಾಜ್ಯ ಬೀಳುತ್ತಲೇ ಇತ್ತು. ಲಾರಿ ಮುಂದೆ-ತ್ಯಾಜ್ಯ ಹಿಂದೆ ಎಂಬ ಸ್ಥಿತಿಯಿದ್ದರೂ ಜನ ನೋಡುತ್ತಲೇ ಇದ್ದರು. ಲಾರಿ ಮುಂದೆ ಸಾಗಿ ಟರ್ನ್ ತೆಗೆದುಕೊಂಡು ಮರೆಯಾಯಿತು.
ಲಾರಿ ಉದುರಿಸಿಹೋಗಿದ್ದು ಕಾಗದ ಚೂರುಗಳಾಗಿದ್ದರೆ ಅಷ್ಟೇನು ತಾಪತ್ರಯವಲ್ಲ ಎಂದು ಸುಮ್ಮನಾಗಬಹುದಿತ್ತು. ಆದರೆ ಯಾವುದೋ ಆಸ್ಪತ್ರೆಯ ರೋಗಿಗೇ ನೀಡಿದ್ದ ಗ್ಲೂಕೋಸ್ ಖಾಲಿ ಬಾಟಲಿ, ಔಷಧ ಡಬ್ಬಿ ಮಧ್ಯ ರಸ್ತೆಯಲ್ಲಿ ಬಿದ್ದಿತ್ತು. ಜನರು ಅನಿವಾರ್ಯವಾಗಿ ಅದನ್ನು ತುಳಿದುಕೊಳ್ಳುತ್ತಲೇ ಸಾಗುತ್ತಿದ್ದರು. ವೇಗವಾಗಿ ಬಂದ ಕಾರಿನ ಚಕ್ರ ಗ್ಲೂಕೋಸ್ ಖಾಲಿ ಬಾಟಲಿ ಮೇಲೆ ಹರಿದು ಅಪ್ಪಚ್ಚಿ ಮಾಡಿತ್ತು. ಒಳಗಿದ್ದ ಔಷಧದ ಅಂಶ ರಸ್ತೆಯಲ್ಲಿ ಹರಡಿತ್ತು.
ಡೆಂಗ್ಯೂ, ಮಲೇರಿಯಾದ ಬಗ್ಗೆ ತಿಳಿವಳಿಕೆ ನೀಡುವ ಆರೋಗ್ಯ ಇಲಾಖೆ, ಬಿಬಿಎಂಪಿ ಇದಕ್ಕೆ ಯಾವ ಉತ್ತರವನ್ನು ನೀಡುತ್ತದೆಯೋ ಕಾದು ನೋಡಬೇಕು. ಇನ್ನಾದರೂ ಕಸ ವಿಲೇವಾರಿ ಮಾಡುವಾಗ ಸುರಕ್ಷಿತ ತಂತ್ರ ಅನುಸರಿಸಲಿ ಎಂದು ಬಯಸುವುದೊಂದೆ ನಮಗೆ ಉಳಿದಿರುವ ದಾರಿ.