ಆರೋಗ್ಯ ಎಮರ್ಜೆನ್ಸಿಯ ವೇಳೆ ರಾಜಕಾರಣಿಗಳು ದೇವೇಗೌಡರಿಂದ ಕಲಿಯಬೇಕಾದ ಪಾಠ
ರಾಜ್ಯ ರಾಜಕೀಯದಲ್ಲಿ ಒಂದು ಮಾತಿದೆ. ಎಲ್ಲಿ, ಯಾವಾಗ, ಹೇಗೆ ರಾಜಕೀಯ ಮಾಡಬೇಕು, ಸಮಯ ಸಂದರ್ಭದಲ್ಲಿ ಹೇಗೆ ಪಕ್ಷಾತೀತವಾಗಿ ದೇಶದ ಪರವಾಗಿ ನಿಲ್ಲಬೇಕು ಎನ್ನುವುದನ್ನು ಜೆಡಿಎಸ್ ವರಿಷ್ಠ ದೇವೇಗೌಡ್ರಿಂದ ಕಲಿಯಬೇಕು ಎಂದು.
ಕೇಂದ್ರದಲ್ಲಿ ಸತತವಾಗಿ ಎರಡು ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರಕಾರವಿದ್ದರೂ, ಯಾವ ಸಂದರ್ಭದಲ್ಲಿ ಮೋದಿ ಸರಕಾರವನ್ನು ವಿರೋಧಿಸಬೇಕು, ಯಾವ ಸಂದರ್ಭದಲ್ಲಿ ತಮ್ಮ ಆಳವಾದ ಅನುಭವದ ಸಲಹೆಯನ್ನು ನೀಡಬೇಕು ಎನ್ನುವುದನ್ನು ಗೌಡ್ರಿಗಿಂತ ಚೆನ್ನಾಗಿ ಹಾಲೀ ರಾಜಕೀಯದಲ್ಲಿ ಇನ್ನೊಬ್ಬರಿಲ್ಲ ಎನ್ನಬಹುದು.
ಈಗಿನ ಕೊರೊನಾ ಎರಡನೇ ಅಲೆಯಂತಹ ಆರೋಗ್ಯ ತುರ್ತು ಪರಿಸ್ಥಿತಿಯ ವೇಳೆ ಜೆಡಿಎಸ್, ಅದರಲ್ಲೂ ಪ್ರಮುಖವಾಗಿ ದೇವೇಗೌಡ್ರು ತೋರುತ್ತಿರುವ ಮುತ್ಸದ್ದಿತನ ಪ್ರಶಂಸೆಗೊಳಗಾಗಿದೆ.
ಕೊರಾನಾ ಎರಡನೇ ಅಲೆ ವ್ಯಾಪಕವಾಗಿ ಹರಡಲು ಕೇಂದ್ರ ಸರಕಾರದ ನಿರ್ಲ್ಯಕ್ಷತನವೂ ಕಾರಣ ಎನ್ನುವುದು ತಿಳಿದಿದ್ದರೂ, ಬೇರೆ ರಾಜಕೀಯ ಪಕ್ಷಗಳ ಹಾಗೇ ಇದನ್ನೇ ದಾಳವಾಗಿ ಬಳಸಿಕೊಳ್ಳದೇ, ಕೇಂದ್ರಕ್ಕೆ ಸಲಹೆ ನೀಡುವ ಕೆಲಸವನ್ನು ಗೌಡ್ರು ಮಾಡುತ್ತಿದ್ದಾರೆ.

ಗೌಡ್ರ ಪತ್ರ ಕೈಸೇರುತ್ತಿದ್ದಂತೆಯೇ ಮೋದಿ ದೂರವಾಣಿ ಮೂಲಕ ಅವರ ಜೊತೆಗೆ ಮಾತುಕತೆ
ಕಳೆದ ಏಪ್ರಿಲ್ 25ಕ್ಕೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಗೌಡ್ರು, ಉಪಚುನಾವಣೆಯ ಫಲಿತಾಂಶದ ನಂತರ ವಿಜಯೋತ್ಸವ, ದೊಡ್ಡ ಪ್ರಮಾಣದಲ್ಲಿ ಜನ ಸೇರುವುದು, ಎಲ್ಲಾ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಮುಂದಿನ ಆರು ತಿಂಗಳವರೆಗೆ ಮುಂದೂಡುವಂತೆ ಸಲಹೆ ನೀಡಿದ್ದರು. ಗೌಡ್ರ ಪತ್ರ ಕೈಸೇರುತ್ತಿದ್ದಂತೆಯೇ ಮೋದಿ ದೂರವಾಣಿ ಮೂಲಕ ಅವರ ಜೊತೆಗೆ ಮಾತುಕತೆ ನಡೆಸಿದ್ದರು. ನಿಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮೋದಿ ಹೇಳಿದ್ದಾರೆ ಎಂದು ಗೌಡ್ರೇ ಹೇಳಿದ್ದರು.

ಹದಿನಾರು ಸಲಹೆಗಳನ್ನು ದೇವೇಗೌಡ್ರು, ಪ್ರಧಾನಿ ಮೋದಿಗೆ ಪತ್ರದ ಮುಖೇನ ನೀಡಿದ್ದರು
ಜಿಲ್ಲಾಡಳಿತಕ್ಕೆ ಸಹಾಯವಾಗಲು ತುರ್ತಾಗಿ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಬೇಕು. ಕೋವಿಡ್ ವಾರ್ ರೂಂ ಎನ್ನುವುದು ರಾಜಧಾನಿಯಲ್ಲಿ ಮಾತ್ರ ಕಾರ್ಯನಿರ್ವಹಿಸಿದರೆ ಮಾತ್ರ ಸಾಲದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇದನ್ನು ತೆರೆಯಬೇಕು, ಗ್ರಾಮೀಣ ಭಾಗದಲ್ಲಿ ಕೋವಿಡ್ ಹರಡದಂತೆ ನೋಡಿಕೊಳ್ಳಬೇಕು.. ಹೀಗೆ ಹದಿನಾರು ಸಲಹೆಗಳನ್ನು ದೇವೇಗೌಡ್ರು, ಪ್ರಧಾನಿ ಮೋದಿಗೆ ಪತ್ರದ ಮುಖೇನ ನೀಡಿದ್ದರು.

ಸ್ಥಳೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮಾಹಿತಿ ನೀಡುವ ಕೆಲಸ ಎಚ್ಡಿಕೆಯವರಿಂದ
ಇನ್ನು ಜೆಡಿಎಸ್ ಮುಖಂಡರುಗಳು ಕೂಡಾ ಸರಕಾರಕ್ಕೆ ಸಲಹೆಗಳನ್ನು ನೀಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಾ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆಯೇ ಹೊರತು, ಈ ಸಂದರ್ಭದಲ್ಲಿ ಪ್ರತಿಭಟನೆಗೆ ಇಳಿದ ಉದಾಹರಣೆ ಕಮ್ಮಿ. ಜಿಲ್ಲಾವಾರು ಮುಖಂಡರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಸ್ಥಳೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸರಕಾರಕ್ಕೆ ಮಾಹಿತಿ ನೀಡುವ ಕೆಲಸವನ್ನು ಎಚ್ಡಿಕೆ ಮಾಡುತ್ತಿದ್ದಾರೆ.
Recommended Video

ಗೌಡ್ರು ಕೇಂದ್ರ, ರಾಜ್ಯ ಸರಕಾರವನ್ನು ಟೀಕಿಸುವ ಕೆಲಸ ಮಾಡದೇ ಸಲಹೆಗಳನ್ನು ನೀಡುತ್ತಿದ್ದಾರೆ
ಬಿಜೆಪಿಯ ಇಬ್ಬರು ಮುಖಂಡರು, ಕಳೆದ ಒಂದು ವಾರದಲ್ಲಿ ದೇವೇಗೌಡ್ರನ್ನ ನೋಡಿ ಕಲಿಯಿರಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಬುದ್ದಿವಾದ ಹೇಳಿದ್ದಾರೆ. ಸಚಿವ ಶ್ರೀರಾಮುಲು ಮತ್ತು ಸಂಸದ ತೇಜಸ್ವಿ ಸೂರ್ಯ, ಯಾವ ಸಂದರ್ಭದಲ್ಲಿ ದೇಶದ ಪರವಾಗಿ ನಿಲ್ಲಬೇಕು ಎನ್ನುವುದನ್ನು ಗೌಡ್ರಿಂದ ಕಲಿಯಿರಿ ಎಂದು ತಾಕೀತು ಮಾಡಿದ್ದಾರೆ. ಒಟ್ಟಿನಲ್ಲಿ, ಪ್ರಸಕ್ತ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಯ ವೇಳೆ ಗೌಡ್ರು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಟೀಕಿಸುವ ಕೆಲಸ ಮಾಡದೇ ಸಲಹೆಗಳನ್ನು ನೀಡುತ್ತಿದ್ದಾರೆ.












Click it and Unblock the Notifications