ರಾಜ್ಯದಲ್ಲಿ ಮಳೆ- ಪ್ರವಾಹ ಇರುವಾಗ ಮದುವೆ, ಗೃಹ ಪ್ರವೇಶದಲ್ಲಿ ಬ್ಯುಸಿಯಾಗಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ!
ಬೆಂಗಳೂರು, ನ.20: ರೋಮ್ ಹೊತ್ತಿ ಉರಿಯುತ್ತಿರುವಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ ಎಂಬುದು ಜಗತ್ಪ್ರಸಿದ್ದ ವಾಕ್ಯ. ಅದರ ತದ್ರೂಪದಂತೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ನಮ್ಮ ಎದುರಿಗೆ ಕಾಣಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಕಳೆದ 30-40 ವರ್ಷಗಳಲ್ಲಿ ಕಂಡು ಕೇಳರಿಯದ ಕುಂಭದ್ರೋಣ ಮಳೆ ಸುರಿಯುತ್ತಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಬೆಳೆದು ನಿಂತ ಬೆಳೆಗಳು ಮಳೆ ನೀರಿಗೆ ಕೊಚ್ಚಿ ಹೋಗಿ ರೈತ ಕಂಗಾಲಾಗಿದ್ದಾನೆ. ಈ ಸಂದರ್ಭದಲ್ಲಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದ್ದ ರಾಜ್ಯದ ಮುಖ್ಯಮಂತ್ರಿ ಮಾತ್ರ ಮದುವೆ, ಗೃಹ ಪ್ರವೇಶ, ಸಿನಿಮಾ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.
ರಾಜ್ಯದ ಮುಕ್ಕಾಲು ಭಾಗ ಮಳೆಯಿಂದ ಆವೃತವಾಗಿದೆ. ಬಹುತೇಕ ಜಿಲ್ಲೆಗಳು ನಡುಗಡ್ಡೆಗಳಂತಾಗಿವೆ. ಮನೆಯೊಳಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ಧವಸ-ಧಾನ್ಯ ಪದಾರ್ಥಗಳೆಲ್ಲಾ ಕೊಚ್ಚಿ ಹೋಗಿ ಜನರು ತುರ್ತು ಪರಿಹಾರಕ್ಕಾಗಿ ಯಾಚಿಸುತ್ತಿದ್ದಾರೆ. ತರಕಾರಿ, ಹಣ್ಣು, ಹೂ ಮುಂತಾದ ಬೆಳೆಗಳು ನಾಶವಾಗಿ ಮಾರುಕಟ್ಟೆಯಲ್ಲಿ ಬೆಲೆಗಳು ಗಗನಕ್ಕೇರುತ್ತಿವೆ. ಮತ್ತೊಂದೆಡೆ ಅಕ್ಕಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳದಲ್ಲಿಯೂ ಧಾರಾಕಾರ ಮಳೆ ಸುರಿದು ಗಡಿ ಭಾಗದ ಜನ ಮಳೆ ನೀರು, ಪ್ರವಾಹಗಳಿಂದ ತೊಂದರೆಗೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯಾದವರು ಪರಿಹಾರ ಕಾರ್ಯಗಳ ಬಗ್ಗೆ ತ್ವರಿತವಾಗಿ ಸ್ಪಂದಿಸುವುದನ್ನು ರಾಜ್ಯದ ಜನ ನಿರೀಕ್ಷಿಸುತ್ತಾರೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತ್ರ ತಮ್ಮದೇ ಲೋಕದಲ್ಲಿ ಮುಳುಗಿದ್ದಾರೆ ಎಂದು ಭಾಸವಾಗುತ್ತಿದೆ.

ಮುಖ್ಯಮಂತ್ರಿ ಕಾರ್ಯಕಲಾಪ ಬಿಡುಗಡೆ
ಮುಖ್ಯಮಂತ್ರಿ ಸಚಿವಾಲಯ ಮುಖ್ಯಮಂತ್ರಿಯವರ ಕಾರ್ಯಕಲಾಪವನ್ನು ಬಿಡುಗಡೆ ಮಾಡುತ್ತದೆ. ಅಂದರೆ, ನಾಳೆ ಮುಖ್ಯಮಂತ್ರಿಯವರು ಯಾವ ಯಾವ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ? ಎಲ್ಲಿಗೆ ಭೇಟಿ ನೀಡುತ್ತಾರೆ? ಯಾರೊಂದಿಗೆ ಸಭೆಗಳನ್ನು ಮಾಡುತ್ತಾರೆ? ಎಂಬಂತಹ ವಿವರಗಳು ಇರುತ್ತವೆ. ಅದೇ ರೀತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾನುವಾರದ (ನ.21) ಕಾರ್ಯಕಲಾಪಗಳ ಪಟ್ಟಿಯನ್ನೂ ಸಹ ಬಿಡುಗಡೆ ಮಾಡಿದ್ದಾರೆ. ರಾಜ್ಯ ತುರ್ತು ಪರಿಸ್ಥಿತಿಯಲ್ಲಿ ಇರುವಂತಹ ಸಂದರ್ಭದಲ್ಲಿ ಇದನ್ನು ನೋಡಿದಾಗ ಎಂತಹವರಿಗೂ ಅಚ್ಚರಿಯಾಗುತ್ತದೆ.

ಮದುವೆ, ಮದುವೆ, ಗೃಹ ಪ್ರವೇಶ:
ಬೆಳಗ್ಗೆ 9 ಗಂಟೆಗೆ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರ ದ್ವಿತೀಯ ಪುತ್ರಿ ಅನುಷಾ ಮತ್ತು ಅಭಿಷೇಕ್ ಅವರ ಮದುವೆ ಸಮಾರಂಭ. ಅರಮನೆ ಮೈದಾನದ ಗೇಟ್ ನಂ.4 'ವೃಕ್ಷ' ದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುತ್ತಾರೆ.
ಬಳಿಕ ಬೆಳಗ್ಗೆ 9.30ರಿಂದ 10.15ರ ವರೆಗೆ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಡೆಯುವ ಟಿ.ವಿ. ಮೋಹನ್ದಾಸ್ ಪೈ ಅವರ ಪುತ್ರ ಸಿದ್ಧಾರ್ಥ ಮತ್ತು ಸುನಂದಿತ ಅವರ ವಿವಾಹ ಸಮಾರಂಭಕ್ಕೆ ಮುಖ್ಯಮಂತ್ರಿ ಹೋಗಲಿದ್ದಾರೆ.

ಮಧ್ಯಾಹ್ನ ಪೂರ್ತಿ ದಿನ ಅವರ ದಿನಚರಿ ಕಾಯ್ದರಿಸಲಾಗಿದೆ. ಸಂಜೆಯಾಗುತ್ತಲೇ 6 ಗಂಟೆಗೆ ಶಾಸಕ ಹಾಗೂ ಕರ್ನಾಟಕ ವಿಧಾನಸಭೆ ಮುಖ್ಯ ಸಚೇತಕ ಸತೀಶ್ ರೆಡ್ಡಿ ಅವರು ಎಚ್ ಎಸ್ ಆರ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಮನೆಗೆ ಮುಖ್ಯಮಂತ್ರಿಗಳು ಭೇಟಿ ನೀಡಿ ಅಲ್ಲಿನ ವೈಭೋಗ ಕಣ್ತುಂಬಿಕೊಳ್ಳಲಿದ್ದಾರೆ.
ಇವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರದ ಕಾರ್ಯಕಲಾಪಗಳು. ಎಲ್ಲಿಯೂ ಸಹ ಮಳೆ,ನೆರೆ, ಜನರ ಸಂಕಷ್ಟ, ಅಧಿಕಾರಿಗಳೊಂದಿಗೆ ಸಭೆ ಇಂತಹ ಒಂದು ಸಭೆಗಳೂ ಸಹ ನಡೆಸುವ ಬಗ್ಗೆ ಅಧಿಕೃತವಾಗಿ ಪ್ರಕಟಿಸಿಲ್ಲ.
ಪ್ರತಿಪಕ್ಷಗಳಿಂದ ಟೀಕೆ:
ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
"ಮಳೆಯಿಂದ ರಾಜ್ಯದ ಜನ ತತ್ತರಿಸಿಹೋಗ್ತಿದ್ದಾರೆ. ಕೋಟ್ಯಂತರ ರೂ.ಬೆಳೆ ಮಳೆಗೆ ಹಾನಿಯಾಗಿದೆ. ಬೆಂಗಳೂರಿನಲ್ಲಿ ರಸ್ತೆಗಳು ಗುಂಡಿ ಬಿದ್ದು ಹೋಗಿವೆ. ಆದ್ರೆ ಸಿಎಂ ಸಾಹೇಬ್ರಿಗೆ ಇದ್ರ ಬಗ್ಗೆ ಕಾಳಜಿಯಿಲ್ಲ. ನಿನ್ನೆ ಡಿಸಿಗಳ ಜೊತೆ ಸಭೆ ನಡೆಸಿದ್ದು ಬಿಟ್ಟರೆ ಬೇರೇನು ಮಾಡಿಲ್ಲ. ವಾರದಲ್ಲಿ ಎರಡೆರಡು ಸಿನಿಮಾ ಕಾರ್ಯಕ್ರಮದಲ್ಲಿ ಸಿಎಂ ಬ್ಯುಸಿಯಾಗಿದ್ದಾರೆ. ಮಳೆ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಬೇಕು. ರೈತರು, ಸಂತ್ರಸ್ಥರ ಸಮಸ್ಯೆ ತಿಳಿಯಬೇಕು. ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲವನ್ನ ಪರಿಶೀಲಿಸಬೇಕು. ಇದ್ಯಾವುದರ ಕಡೆಗೂ ಸಿಎಂ ಸಾಹೇಬ್ರಿಗೆ ಸಮಯ ಸಿಗ್ತಿಲ್ಲ ಅನಿಸುತ್ತೆ" ಎಂದು ಜಯಚಂದ್ರ ಟೀಕಿಸಿದ್ದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, "ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಆದರೆ ಸಚಿವರಿಗೆ ಒಂದು ಮಾತನ್ನೂ ಹೇಳಿಲ್ಲ. ಆದರೆ, ಅಧಿಕಾರಿಗಳು ಯಾರೂ ಜಿಲ್ಲೆಗಳ ಪ್ರವಾಸಕ್ಕೆ ಹೋಗಿಲ್ಲ. ಮತ್ತೊಂದೆಡೆ ಇಡೀ ಸರ್ಕಾರ ವಿಧಾನ ಪರಿಷತ್ತು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡದೆ" ಎಂದು ಟೀಕಿಸಿದ್ದಾರೆ.











Click it and Unblock the Notifications