Breaking; ಕುತೂಹಲ ಮೂಡಿಸಿದ ಎಂ. ಆರ್. ಸೀತಾರಾಂ ಮುಂದಿನ ನಡೆ!
ಬೆಂಗಳೂರು, ಜೂನ್ 25; ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಂ. ಆರ್. ಸೀತಾರಾಂ ಮುಂದಿನ ರಾಜಕೀಯ ನಡೆ ಕುತೂಹಲಕ್ಕೆ ಕಾರಣವಾಗಿದೆ. ವಿಧಾನ ಪರಿಷತ್ ಚುನಾವಣೆ ಟಿಕೆಟ್ ಕೈ ತಪ್ಪಿದ ಬಳಿಕ ಅವರು ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಎಂ. ಆರ್. ಸೀತಾರಾಂ ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಬಲಿಗರ ಸಭೆ ನಡೆಸಿದರು. ಮುಂದಿನ ರಾಜಕೀಯ ನಡೆ ಬಗ್ಗೆ ಅಭಿಪ್ರಾಯ ಸಂಗ್ರಹಣೆ ಮಾಡಿದರು. ಬಲಿಜ ಸಮುದಾಯದ ಹಲವಾರು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆ ಕುರಿತು ಅವರು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. 'ನಿನ್ನೆ ನಾನು ಅರಮನೆ ಮೈದಾನದಲ್ಲಿ ಕರೆದ ಸಭೆಗೆ ಹಾಲಿ ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ನನ್ನ ಹಿತೈಷಿಗಳು ಹಾಜರಾಗಿದ್ದು ಖುಷಿಕೊಟ್ಟಿದೆ' ಎಂದು ಹೇಳಿದ್ದಾರೆ.

'ಈ ಕಾರ್ಯಕ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನನಗೆ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬರಿಗೂ ನನ್ನ ಅನಂತಾನಂತ ಧನ್ಯವಾದಗಳು. ಎಲ್ಲರ ಅಭಿಪ್ರಾಯ ಸಲಹೆಯನ್ನು ಪರಿಗಣಿಸಿ ಶೀಘ್ರದಲ್ಲೇ ನನ್ನ ನಿರ್ಧಾರವನ್ನು ತಿಳಿಸಲಿದ್ದೇನೆ' ಎಂದು ಅವರು ಪೋಸ್ಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಎಂ. ಆರ್. ಸೀತಾರಾಂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸದೇ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಹೇಳಿದ್ದಾರೆ. ಹಲವಾರು ವರ್ಷಗಳಿಂದ ಪಕ್ಷದಲ್ಲಿ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ನಾನು ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿಲ್ಲ. ಅದನ್ನು ಮುನ್ನಡೆಸುತ್ತಿರುವ ನಾಯಕರ ಬಗ್ಗೆ" ಎಂದು ಅವರು ಬೆಂಬಲಿಗರ ಮುಂದೆ ಹೇಳಿದ್ದಾರೆ. ಅಲ್ಲದೇ, "1983ರಿಂದ ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಅವರಂತೆ ನಾನು ಸಹ ಹಿರಿಯ" ಎಂದು ತಿಳಿಸಿದ್ದಾರೆ.
ಎಂ. ಆರ್. ಸೀತಾರಾಂ ರಾಮಯ್ಯ ಶಿಕ್ಷಣ, ಆಸ್ಪತ್ರೆಗಳ ಉಪಾಧ್ಯಕ್ಷರು. ಎಂ. ಎಸ್. ರಾಮಯ್ಯ ವಿದ್ಯಾ ಸಂಸ್ಥೆಗಳ ತಾಂತ್ರಿಕ, ವಿದ್ಯಾಲಯ ಬೆಂಗಳೂರು ನಿರ್ದೇಶಕರು.
ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ 2016 ರಿಂದ ಯೋಜನೆ ಮತ್ತು ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದರು.












Click it and Unblock the Notifications