ಟಿಪ್ಪು ಜಯಂತಿ ವಿವಾದದ ಒಳ-ಹೊರಗು, ನಿಮ್ಮ ಮುಂದೆ
ಬೆಂಗಳೂರು, ನವೆಂಬರ್, 14: ಕರ್ನಾಟಕದಲ್ಲಿ ಪ್ರತಿಭಟನೆಗಳ ಪರ್ವವೇ ಆರಂಭವಾಗಿದೆ. ಕೊಡಗಿನ ಮಡಿಕೇರಿಯಲ್ಲಿ ಸಂಭವಿಸಿದ ಗುಂಪು ಘರ್ಷಣೆ ಇದಕ್ಕೆಲ್ಲ ಮೂಲ ಕಾರಣ. ಟಿಪ್ಪು ಸುಲ್ತಾನ್ ಜಯಂತಿ ಹೆಸರಿನಲ್ಲಿ ಆರಂಭವಾದ ಸಂಘರ್ಷ ದಿನೇ ದಿನೇ ಹೊಸ ಹೊಸ ಮುಖಗಳನ್ನು ಪಡೆದುಕೊಳ್ಳುತ್ತಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಟಿಪ್ಪು ಜನ್ಮದಿನವನ್ನು ಸರ್ಕಾರಿ ಹಬ್ಬವನ್ನಾಗಿ ಘೋಷಣೆ ಮಾಡಿದ ನಂತರ ಪರ ವಿರೋಧದ ಚರ್ಚೆಗಳು ಆರಂಭವಾದವು. ಅದು ಇಂದು ಕೋಮು ಸಂಘರ್ಷದ ಹಂತಕ್ಕೆ ಬಂದು ತಲುಪಿದೆ.
ಇತಿಹಾಸವನ್ನು ವಿವಿಧ ದೃಷ್ಟಿಕೋನ ಮತ್ತು ಆಯಾಮಗಳಲ್ಲಿ ವಿಶ್ಲೇಷಣೆ ಮಾಡುತ್ತಿರುವವರು ಅವರದ್ದೇ ಆದ ವಿಚಾರಧಾರೆಗಳನ್ನು ಮುಂದೆ ಇಡುತ್ತಿದ್ದಾರೆ. [ಕೊಡಗಿನ ಕುಟ್ಟಪ್ಪ ಸಾವು: ಆಕಸ್ಮಿಕವೋ, ಪೂರ್ವ ನಿಯೋಜಿತವೋ?]

ಟಿಪ್ಪು ಸುಲ್ತಾನ್ ಜಯಂತಿಗೆ ಸಂಬಂಧಿಸಿ ಗೊಂದಲ ಹುಟ್ಟಿಕೊಂಡಿದ್ದು ಏಕೆ?
* 2014ರ ಆರಂಭದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ನವೆಂಬರ್ 10ನ್ನು ಟಿಪ್ಪು ಜಯಂತಿಯಾಗಿ ಆಚರಣೆ ಮಾಡುವ ಘೋಷಣೆ ಮಾಡಿದರು.
* ಬಹುಸಂಖ್ಯಾತ ವರ್ಗದ ಜನ ಈ ಆಚರಣೆಯನ್ನು ವಿರೋಧ ಮಾಡಿಕೊಂಡೇ ಬಂದರು.
* ಸಂಘ ಪರಿವಾರದ ಸಂಘಟನೆಗಳ ವಿರೋಧದ ನಡುವೆಯೂ ಸರ್ಕಾರ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿತು.
* ಇತಿಹಾಸದ ಅನ್ವಯ ಹೇಳುವುದಾದರೆ ಇದು ಟಿಪ್ಪು ಸುಲ್ತಾನ್ ಅವರ 266 ನೇ ಜಯಂತಿ.[ಕೊಡವರು ಟಿಪ್ಪುವನ್ನು ವಿರೋಧಿಸುವುದೇಕೆ?]
ವಿಎಚ್ ಪಿ ಕಾರ್ಯಕರ್ತ ಸಾವು
* ವಿಶ್ವ ಹಿಂದೂ ಪರಿಷತ್ ಮತ್ತು ಸಂಘ ಪರಿವಾರ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಪ್ರತಿಭಟನೆಯನ್ನು ಆರಂಭಿಸಿದವು.
* ಮಡಿಕೇರಿಯಲ್ಲಿ ನವೆಂಬರ್ 10 ರಂದು ಸಂಭವಿಸಿದ ಘರ್ಷಣೆಯಲ್ಲಿ ಹಿಂದೂ ಸಂಘಟನೆಯ ಎರಡು ಜನ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದರು.
* ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ಅಲ್ಪಸಂಖ್ಯಾತ ಸಮುದಾಯದ ನಾಗರಿಕರು ಆಗಮಿಸುತ್ತಿದ್ದ ವೇಳೆ ಘರ್ಷಣೆ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಕುಟ್ಟಪ್ಪ ಎಂಬುವರು ಆಸ್ಪತ್ರೆಗೆ ಸೇರಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದರು.[ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ: ಕಾರ್ನಾಡ್]
ವಿವಾದಕ್ಕೆ ಸಿಲುಕಿದ ಗಿರೀಶ್ ಕಾರ್ನಾಡ್
* ಇದೆಲ್ಲದರ ಮಧ್ಯೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿವಾದಕ್ಕೆ ಸಿಲುಕಿಕೊಂಡರು.
* ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕಿತ್ತು ಎಂಬ ಕಾರ್ನಾಡ್ ಹೇಳಿಕೆ ತೀವ್ರ ಟೀಕೆಗೆ ಗುರಿಯಾಯಿತು.
* ಬೆಂಗಳೂರು ಸ್ಥಾಪಕ ಕೆಂಪೇಗೌಡರ ಬಗ್ಗೆ ಹೇಳಿಕೆ ನೀಡಿದ್ದ ಸಾಹಿತಿ ನಂತರ ಕ್ಷಮೆಯಾಚಿಸಿದರು.[ಕಾರ್ನಾಡ್ ಹೇಳಿಕೆಗೆ ವ್ಯಾಪಕ ವಿರೋಧ: ಅವರೊಬ್ಬ ತಲೆತಿರುಕ ಸಾಹಿತಿ: ಗೌಡ]
ಕಾರ್ನಾಡ್ ಗೆ ಜೀವ ಬೆದರಿಕೆ
* ನಾನು ಯಾರ ಮನಸ್ಸಿಗೆ ಘಾಸಿ ಮಾಡಬೇಕೆಂದು ಹೇಳಿಕೆ ನೀಡಲಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಕಾರ್ನಾಡ್ ಹೇಳಿದರು.
* ಟ್ವಿಟ್ಟರ್ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಕಾರ್ನಾಡ್ ಗೆ ಜೀವ ಬೆದರಿಕೆಯನ್ನು ಒಡ್ಡಿದ ಪ್ರಕರಣವೂ ನಡೆಯಿತು.
* ಸಾಹಿತಿ ಎಂ ಎಂ ಕಲಬುರ್ಗಿ ಅವರ ರೀತಿಯಲ್ಲೇ ಕಾರ್ನಾಡ್ ಅವರನ್ನು ಹತ್ಯೆ ಮಾಡಲಾಗುವುದು ಎಂದು ವ್ಯಕ್ತಿ ಬೆದರಿಕೆ ಹಾಕಿದ್ದ.
* ಇದಾದ ನಂತರ ಪೊಲೀಸರು ಕಾರ್ನಾಡ್ ಅವರಿಗೆ ನೀಡಿದ್ದ ಭದ್ರತೆಯನ್ನು ಹೆಚ್ಚಳ ಮಾಡಿದರು.
ಒಟ್ಟಿನಲ್ಲಿ ಟಪ್ಪು ಸುಲ್ತಾನ್ ಜಯಂತಿ ಆಚರಣೆ ವೇಳೆ ಹುಟ್ಟಿಕೊಂಡ ಗೊಂದಲಗಳು ರಾಜಕೀಯದ ದಾಳವಾಗಿ, ಸಾಹಿತಿಗಳ ಹೇಳಿಕೆಗೆ, ಆರೋಪ ಪ್ರತ್ಯಾರೋಪದ ಅಸ್ತ್ರವಾಗಿ ಬಳಕೆಯಾಗಿದ್ದು, ಬಳಕೆಯಾಗುತ್ತಿರುವುದು ವಿಪರ್ಯಾಸ.(ಒನ್ ಇಂಡಿಯಾ ನ್ಯೂಸ್)












Click it and Unblock the Notifications