ರಾಮಮಂದಿರ ಭೂಮಿ ಪೂಜೆ ಕರ್ನಾಟಕದ ಕೊಡುಗೆಯೇನು?
ಬೆಂಗಳೂರು, ಆ.3: ಹಿಂದೂಗಳ ಪಾಲಿನ ಆರಾಧ್ಯದೈವ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಮಂದಿರ ನಿರ್ಮಾಣ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ಸಿಗುವ ಮುಹೂರ್ತ ನಿಗದಿಯಾಗಿದೆ. ರಾಮಮಂದಿರ ಭೂಮಿ ಪೂಜೆ ಕರ್ನಾಟಕದ ಕೊಡುಗೆಯೇನು? ಎಂದು ಪ್ರಶ್ನಿಸಿದವರಿಗೆ ಸಂಸದ ಸುರೇಶ್ ಅಂಗಡಿ ಉತ್ತರಿಸಿದ್ದಾರೆ.
Recommended Video
ಆಯೋಧ್ಯೆಯ ರಾಮಮಂದಿರ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ, ಭೂಮಿ ಪೂಜೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ದೇಶದೆಲ್ಲೆಡೆಯಿಂದ ಮಂದಿರ ನಿರ್ಮಾಣಕ್ಕೆ ಸಾರ್ವಜನಿಕರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.
ಉತ್ತರಪ್ರದೇಶ ಪುಟ್ಟ ಬಾಲಕ ಪರಾಶರ್ ಎಂಬಾತ, ಸುಮಾರು 1610ಕ್ಕೂ ಅಧಿಕ ಯೋಧರ ಮನೆಗಳಿಗೆ ತೆರಳಿ ಅವರು ನೆಲೆಸಿದ್ದ ಭೂಮಿಯ ಮಣ್ಣನ್ನು ಸಂಗ್ರಹಿಸಿ, ವಿಶ್ವ ಹಿಂದು ಪರಿಷತ್ ಗೆ ಸಲ್ಲಿಸಿ, ರಾಮ ಮಂದಿರ ನಿರ್ಮಾಣಕ್ಕೆ ಬಳಸಲು ಕೋರಿದ್ದಾನೆ.
ದೇಶದ ವಿವಿಧ ತೀರ್ಥ ಕ್ಷೇತ್ರಗಳಿಂದ ಪಾವನ ಮೃತ್ತಿಕೆ ಹಾಗೂ ಹಲವು ನದಿಗಳಿಂದ ಸಂಗ್ರಹಿಸಲಾದ ಜಲವನ್ನು ಅಯೋಧ್ಯೆಯ ಶ್ರೀರಾಮಜನ್ಮ ಭೂಮಿಯಲ್ಲಿ ಪೂಜೆಗೆ ಸಹಾಯವಾಗುವಂತೆ ಅನುವು ಮಾಡಲಾಗಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ.
ರಾಮಜನ್ಮಭೂಮಿ ಬಗ್ಗೆ ತಕರಾರು ಎತ್ತಿದ್ದ ಇಕ್ಬಾಲ್ ಗೂ ಆಹ್ವಾನ
ರಾಮ ಮಂದಿರ 161 ಅಡಿ ಎತ್ತರವಿರಲಿದೆ. 1988ರಲ್ಲಿ ತಯಾರಿಸಲಾಗಿದ್ದ ಮಾದರಿ 141 ಅಡಿ ಎತ್ತರವಿತ್ತು. ಈಗ ಎತ್ತರವನ್ನು ಹೆಚ್ಚಳ ಮಾಡಲಾಗಿದೆ. ಎರಡು ಮಂಟಪಗಳನ್ನು ಹೊಸ ವಿನ್ಯಾಸಕ್ಕೆ ಸೇರಿಸಲಾಗಿದೆ.
ಆಗಸ್ಟ್ 5ರ ಭೂಮಿ ಪೂಜೆ ಕಾರ್ಯಕ್ರಮ
ಆಗಸ್ಟ್ 5ರ ಬುಧವಾರ ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12.30ಕ್ಕೆ ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಶಂಕು ಸ್ಥಾಪನೆ ದಿನದಂದು 40 ಕೆಜಿ ಬೆಳ್ಳಿಯ ಇಟ್ಟಿಗೆಯನ್ನು ಇಟ್ಟು ಮೋದಿ ಪೂಜಿಸಲಿದ್ದಾರೆ.
ಒಟ್ಟು 50 ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಆರ್ಎಸ್ಎಸ್ನ ಪ್ರಮುಖ ನಾಯಕರು ಸೇರಿದ್ದಾರೆ. ಆಹ್ವಾನಿತರು, ಗಣ್ಯರು ಸೇರಿದಂತೆ 200 ಜನರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಮಾಜಿಕ ಅಂತರವನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಲಿದ್ದಾರೆ. ದೂರದರ್ಶನ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ.
ವಿವಿಧ ಪವಿತ್ರ ತಾಣದಿಂದ ಮೃತಿಕೆ ಸಂಗ್ರಹ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನನವಾದ ನಾಗಪುರವಿರಬಹುದು, ಸಂತ ರವಿದಾಸರ ಪಾವನ ಕ್ಷೇತ್ರವಾದ ಕಾಶಿ ಇರಬಹುದು, ಮಹರ್ಷಿ ವಾಲ್ಮೀಕಿಗಳ ಆಶ್ರಮವಾದ ಸೀತಾಮಢಿ ಇರಬಹುದು, ವಿದರ್ಭದ ಗೊಂದಿಯಾ ಜಿಲ್ಲೆಯ ಕಾಚಾರಗಡ್ ಇರಬಹುದು,ಜಾರ್ಖಂಡ್ ನ ರಾಮರೇಖಾಧಾಮ್, ಮಧ್ಯಪ್ರದೇಶದ ಟಂಟ್ಯಾ ಭಿಲ್ ಪುಣ್ಯಭೂಮಿ, ಪಂಜಾಬಿನ ಅಮೃತಸರದ ಶ್ರೀ ಹರಮಂದಿರ ಸಾಹಿಬ್, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮಸ್ಥಳವಾದ ಮಹೂವಿನ, ದಿಲ್ಲಿಯ ಜೈನ ಲಾಲ್ ಮಂದಿರ, ಮಹಾತ್ಮ ಗಾಂಧಿಯವರು 72 ದಿನಗಳು ನೆಲೆಸಿದ್ದ ವಾಲ್ಮೀಕಿ ಮಂದಿರವಿರಬಹುದು ಇಲ್ಲಿಂದ ಮೃತ್ತಿಕೆಯನ್ನು ಸಂಗ್ರಹಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.
ಶ್ರೀರಾಮನಿಂದ ಸಾಮಾಜಿಕ ಸಮರಸತೆ: ಮಿಲಿಂದ್ ಪರಾಂಡೆ
ಕರ್ನಾಟಕದ ತಾಣಗಳಿಂದ ಜಲ, ಮೃತಿಕೆ ಸಂಗ್ರಹ
ಸುತ್ತೂರಿನ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿಗಳು ಕಾವೇರಿ ಹಾಗೂ ಕಪಿಲಾ ನದಿ ನೀರು, ಧರ್ಮಸ್ಥಳ ಮಂಜುನಾಥ ದೇಗುಲದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ನೇತ್ರಾವತಿ ನದಿ ನೀರು, ಶೃಂಗೇರಿ ಶಂಕರಾಚಾರ್ಯ ಪೀಠದ ಶ್ರೀಭಾರತೀ ತೀರ್ಥ ಸ್ವಾಮೀಜಿಗಳು ತುಂಗ-ಭದ್ರಾ ಹಾಗೂ ಶರಾವತಿ ನದಿ ನೀರು ಸಂಗ್ರಹಿಸಿ ಕಳಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಮುಖ್ ಬಸವರಾಜ್ ತಿಳಿಸಿದ್ದಾರೆ.
ಅಡ್ವಾಣಿ ರಥಯಾತ್ರೆ ಸ್ಮರಿಸಿದ ಸಂಸದ ಅಂಗಡಿ
ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಅಂದು ರಥಯಾತ್ರೆ ನಡೆಸಿದ್ದ ಫಲವೇ ಇಂದು 400 ವರ್ಷಗಳ ಇತಿಹಾಸ ಹಾಗೂ ಹಲವು ಜನರ ಕನಸು ನನಸಾಗಿದೆ. ಹಲವರ ತ್ಯಾಗ, ಬಲಿದಾನದ ಸಂಕೇತವಾದ ಮಂದಿರದಿಂದ ಮುಂದೆ ರಾಮರಾಜ್ಯಕ್ಕೆ ಅಡಿಪಾಯ ಬೀಳಲಿದೆ. ಗಾಂಧೀಜಿ ಕನಸು ನನಸಾಗಲಿದೆ ಎಂದು ಅಂಗಡಿ ಹೇಳಿದರು.