ಏನಿದು ಪಕ್ಷಾಂತರ ನಿಷೇಧ ಕಾಯ್ದೆ? ಈಗ ರಾಜೀನಾಮೆ ನೀಡಿದವರ ಕಥೆ?
ಪ್ರಸಕ್ತ ಕರ್ನಾಟಕ ರಾಜಕೀಯದ ವಿದ್ಯಮಾನಗಳು ನಿರ್ಣಾಯಕ ಹಂತವನ್ನು ತಲುಪಿದೆ. ರಾಜೀನಾಮೆ ನೀಡಿದ 13 ಶಾಸಕರಲ್ಲಿ ಎಂಟು ಶಾಸಕರ ರಾಜೀನಾಮೆ ಕ್ರಮಬದ್ದವಾಗಿಲ್ಲ, ಉಳಿದವರದ್ದು ಸರಿಯಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಈ ನಡುವೆ ಶಾಸಕಾಂಗ ಸಭೆಯ ನಂತರ ಸಿದ್ದರಾಮಯ್ಯ ಅತೃಪ್ತ ಶಾಸಕರಿಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ. ಮುಂಬೈನಿಂದ ಬಂದು ರಾಜೀನಾಮೆ ವಾಪಸ್ ಪಡೆಯಿರಿ ಇಲ್ಲವೆ ಅನರ್ಹತೆಗೆ ದೂರು ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಾಯ್ದೆ 164-1ಬಿ ಅನ್ವಯ ಎಲ್ಲಾ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್ಗೆ ನಾವು ಮನವಿ ಮಾಡಲಿದ್ದೇವೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಏನಿದು ಪಕ್ಷಾಂತರ ನಿಷೇಧ ಕಾಯೆ? ಈಗ ರಾಜೀನಾಮೆ ನೀಡಿರುವ ಶಾಸಕರಿಗೆ ಇದು ಅನ್ವಯಿಸುತ್ತದಾ ಎನ್ನುವುದು ಮತ್ತೆ ಚರ್ಚೆಯ ವಿಷಯವಾಗಿದೆ. ಹದಿಮೂರು ಜನ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು ಪಕ್ಷದ ಸದಸ್ಯತ್ವಕ್ಕಲ್ಲ.
ಹಾಗಿದ್ದಾಗ, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇವರ ಮೇಲೆ ಪ್ರಯೋಗಿಸಲು ಸಾಧ್ಯವೇ ಎನ್ನುವುದಕ್ಕೆ ಕಾನೂನು ಪಂಡಿತರ ಅಭಿಪ್ರಾಯವೇನು? ಈ ಕಾಯ್ದೆ ಯಾವಾಗ ಜಾರಿಗೆ ಬಂದಿತು ಎನ್ನುವುದರ ಬಗ್ಗೆ ಒಂದು ಸಂಕ್ಷಿಪ್ತ ಮಾಹಿತಿ:

ದಿನೇಶ್ ಗೋಸ್ವಾಮಿ ಸಮಿತಿಯ ವರದಿ - 1990
ಚುನಾವಣಾ ಸುಧಾರಣೆ ಕುರಿತಾದ ದಿನೇಶ್ ಗೋಸ್ವಾಮಿ ಸಮಿತಿಯ ವರದಿ - 1990, ಚುನಾವಣಾ ಕಾನೂನು ಸುಧಾರಣಾ ಅಂಶಗಳು - 1999 ಮತ್ತು NCRWC ನೀಡಿದ ವರದಿಯನ್ನು ಆಧರಿಸಿ, ಸಂವಿಧಾನದ ಹತ್ತನೇ ಪರಿಶಿಷ್ಟ, 91ನೇ ತಿದ್ದುಪಡಿಯಲ್ಲಿ, ಪಕ್ಷಾಂತರ ನಿಷೇಧ ಕಾಯ್ದೆಯನ್ನು ತರಲಾಯಿತು.

(ವಿಪ್) ಧಿಕ್ಕರಿಸಿ, ಬೇರೆ ಪಕ್ಷದ ಜೊತೆಗೆ ತನ್ನನ್ನು ಗುರುತಿಸಿಕೊಂಡರೆ ಆತನ ಸದಸ್ಯತ್ವ ರದ್ದು
ಇದರ ಪ್ರಕಾರ, ' ಯಾವುದೇ ಜನಪ್ರತಿನಿಧಿ ತಾನು ಚುನಾಯಿತನಾದ ಪಕ್ಷವನ್ನು ರಾಜೀನಾಮೆ ನೀಡದೇ ತೊರೆದು, ಅಥವಾ ಪಕ್ಷದ ಆದೇಶವನ್ನು (ವಿಪ್) ಧಿಕ್ಕರಿಸಿ, ಬೇರೆ ಪಕ್ಷದ ಜೊತೆಗೆ ತನ್ನನ್ನು ಗುರುತಿಸಿಕೊಂಡರೆ/ ಮತ ಚಲಾಯಿಸಿದರೆ, ಆತನ ಸದಸ್ಯತ್ವನ್ನು ರದ್ದುಗೊಳಿಸಲಾಗುವುದು'.

ಪಕ್ಷದ ಒಟ್ಟು ಚುನಾಯಿತ ಸದಸ್ಯ ಬಲದಲ್ಲಿ 2/3 ಭಾಗಕ್ಕಿಂತ ಕಮ್ಮಿ
ಪಕ್ಷದ ಒಟ್ಟು ಚುನಾಯಿತ ಸದಸ್ಯ ಬಲದಲ್ಲಿ 2/3 ಭಾಗಕ್ಕಿಂತ ಕಮ್ಮಿ ಸದಸ್ಯರು ಪಕ್ಷವನ್ನು ಬಿಟ್ಟಾಗ, ಅಥವಾ ಪಕ್ಷದ ಅತ್ಯುನ್ನತ ಆದೇಶ ವಿಪ್ ಉಲ್ಲಂಘಿಸಿದಾಗ ಈ ಕಾಯ್ದೆ ಅನ್ವಯಿಸುತ್ತದೆ. ಉದಾಹರಣೆಗೆ, ಪಕ್ಷವೊಂದು 120 ಸದಸ್ಯರನ್ನು ಹೊಂದಿದ್ದು, ಅದರಲ್ಲಿ 80ಕ್ಕಿಂತ ಹೆಚ್ಚು ಸದಸ್ಯರು ಪಕ್ಷ ಬಿಡಲು ನಿರ್ಧರಿಸಿದರೆ, ಆ ಸಮಯದಲ್ಲಿ ಈ ಕಾಯ್ದೆ ಅನ್ವಯವಾಗುವುದಿಲ್ಲ.

ಪಕ್ಷದ ಮುಖ್ಯಸ್ಥರಿಂದ ಅನುಮತಿ ಪಡೆದಿದ್ದರೆ ಕೂಡಾ ಸದಸ್ಯರು ಅನರ್ಹರಾಗುವುದಿಲ್ಲ
ತಮ್ಮ ಸ್ವಇಚ್ಚೆಯಿಂದ, ಎರಡು ವಾರ ಮುಂಚಿತವಾಗಿ ಪಕ್ಷದ ಮುಖ್ಯಸ್ಥರಿಂದ ಅನುಮತಿ ಪಡೆದಿದ್ದರೆ ಕೂಡಾ ಸದಸ್ಯರು ಅನರ್ಹರಾಗುವುದಿಲ್ಲ. ಲೋಕಸಭೆ ಮತ್ತು ವಿಧಾನಸಭೆಯ ಸ್ಫೀಕರ್ ಅನರ್ಹತೆಯನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿರುತ್ತಾರೆ. 30.01.1985ರಂದು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಈ ಕಾಯ್ದೆಯನ್ನು ಜಾರಿಗೆಗೊಳಿಸಲಾಯಿತು ಮತ್ತು ವಾಜಪೇಯಿ ತಮ್ಮ ಆಧಿಕಾರದ ಅವಧಿಯಲ್ಲಿ ಈ ಕಾಯ್ದೆಗೆ ಇನ್ನಷ್ಟು ಬಲತುಂಬಿದರು.

ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಲು ಬರುವುದಿಲ್ಲ
ಕಾನೂನು ಪಂಡಿತರು ಹೇಳುವಂತೆ, ಈಗ ನಡೆಯುತ್ತಿರುವ ರಾಜಕೀಯ ವಿದ್ಯಮಾನದ ಪ್ರಕಾರ, ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಲು ಬರುವುದಿಲ್ಲ. ಒಂದು ವೇಳೆ, ಎದುರಾಳಿ ಪಕ್ಷಕ್ಕೆ ಲಿಖಿತ ಬೆಂಬಲ ಸೂಚಿಸಿ ರಾಜ್ಯಪಾಲರಿಗೆ ಸಲ್ಲಿಸಿದರೆ, ಅದು ಪಕ್ಷಾಂತರಕ್ಕೆ ಸಮನಾಗಿರುತ್ತದೆ.

ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಬೋಪಯ್ಯ ಸ್ಪೀಕರ್ ಆಗಿದ್ದರು
ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಬೋಪಯ್ಯ ಸ್ಪೀಕರ್ ಆಗಿದ್ದರು. ಹದಿಮೂರು ಶಾಸಕರು ಬಿಎಸ್ವೈ ಮೇಲೆ ವಿಶ್ವಾಸವಿಲ್ಲ ಎಂದು ರಾಜ್ಯಪಾಲರಾಗಿದ್ದ ಭಾರದ್ವಾಜ್ ಅವರಿಗೆ ದೂರು ಸಲ್ಲಿಸಿದ್ದರು. ಅದರಂತೆಯೇ, ವಿಶ್ವಾಸಮತ ಯಾಚಿಸುವಂತೆ ಬಿಎಸ್ವೈಗೆ ಸೂಚಿಸಲಾಗಿತ್ತು. ಆವೇಳೆ ಹದಿಮೂರು ಶಾಸಕರನ್ನು ಬೋಪಯ್ಯ ಅನರ್ಹಗೊಳಿಸಿದ್ದರು. ಸ್ಪೀಕರ್ ಅವರ ಆದೇಶ ಸುಪ್ರೀಂಕೋರ್ಟ್ ಬಾಗಿಲಿಗೆ ಹೋದಾಗ, ಸ್ಪೀಕರ್ ತೀರ್ಪು ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು.

ಮದ್ರಾಸ್ ಹೈಕೋರ್ಟ್, ಸ್ಪೀಕರ್ ತೀರ್ಮಾನವನ್ನು ಎತ್ತಿಹಿಡಿದಿತ್ತು
ಇನ್ನೊಂದು ಪ್ರಕರಣದಲ್ಲಿ, ಹತ್ತೊಂಬತ್ತು ಎಐಡಿಎಂಕೆ ಶಾಸಕರು ಸಿಎಂ ಪಳನಿಸ್ವಾಮಿ ಮೇಲೆ ವಿಶ್ವಾಸವಿಲ್ಲ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಆದರೆ, ಪಕ್ಷ ಅವರೆಲ್ಲರನ್ನೂ ಅನರ್ಹಗೊಳಿಸಿ, ಸ್ಪೀಕರ್ ಗೆ ದೂರು ನೀಡಿದ್ದರು. ಸ್ಪೀಕರ್ ಒಬ್ಬರನ್ನು ಹೊರತು ಪಡಿಸಿ ಹದಿನೆಂಟು ಶಾಸಕರ ಸದಸ್ಯತ್ವವನ್ನು ರದ್ದು ಪಡಿಸಿದರು. ಸ್ಪೀಕರ್ ಆದೇಶವನ್ನು ಪ್ರಶ್ನಿಸಿ, ಈ ಶಾಸಕರು ಮದ್ರಾಸ್ ಹೈಕೋರ್ಟ್ ಮೆಟ್ಟಲೇರಿದ್ದರು. ಮದ್ರಾಸ್ ಹೈಕೋರ್ಟ್, ಸ್ಪೀಕರ್ ತೀರ್ಮಾನವನ್ನು ಎತ್ತಿಹಿಡಿದಿತ್ತು.












Click it and Unblock the Notifications