ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿಗೆ ಮೋದಿ ಕೊಟ್ಟ ಸಲಹೆಗಳೇನು?
ನವದೆಹಲಿ, ಜುಲೈ. 25: ಐಟಿಐಗಳ ಉನ್ನತೀಕರಣ, ಕಿಸಾನ್ ಸಮ್ಮಾನ್ ಮತ್ತು ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ಕೈಗೊಂಡ ಇತರ ಉಪಕ್ರಮಗಳು ಮತ್ತು ಹೊಸ ಶಿಕ್ಷಣ ನೀತಿಯ ಅನುಷ್ಠಾನದ ಬಗ್ಗೆ ಬಿಜೆಪಿ ಮುಖ್ಯಮಂತ್ರಿಗಳ ಪರಿಷತ್ತಿನ ಸಭೆಯಲ್ಲಿ ಚರ್ಚೆಗೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನವದೆಹಲಿಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆದಿತ್ತು. ಇ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.
ದೇಶದಾದ್ಯಂತ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿಯನ್ನು ಚರ್ಚಿಸಲು ಬಿಜೆಪಿ ಕೌನ್ಸಿಲ್ ಆಗಾಗ ಸಭೆ ಸೇರುತ್ತದೆ. ನಮಗೆ ವಿಶೇಷವಾಗಿ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳು. ಪ್ರಧಾನಿ ಕೆಲವು ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಮುಂದಿನ ಸಭೆ ಅಕ್ಟೋಬರ್ನಲ್ಲಿ ನಡೆಯಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ದೆಹಲಿಯಲ್ಲಿ ತಮ್ಮ ಪ್ರವಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಸೋಮವಾರ ಚುನಾಯಿತ ಅಧ್ಯಕ್ಷ ದ್ರೌಪದಿ ಮುರ್ಮು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದೇನೆ. ಈಗ ಕೇಂದ್ರ ಕ್ರೀಡಾ ಸಚಿವರನ್ನು ಭೇಟಿ ಮಾಡಲಾಗುವುದು. ಬಳಿಕ ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ್ ಮತ್ತು ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಲು ಹೋಗುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಮುಖ್ಯಮಂತ್ರಿಗಳ ಪರಿಷತ್ತಿನ ಸಭೆಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪ್ರಧಾನಿ ಗತಿಶಕ್ತಿ, ಹರ್ ಘರ್ ಜಲ್, ಸ್ವಾಮಿತ್ವ, ಡಿಬಿಟಿ ಅನುಷ್ಠಾನ, ಸರ್ಕಾರಿ ಇ-ಮಾರ್ಕೆಟ್ಪ್ಲೇಸ್ನಂತಹ ಸರ್ಕಾರದ ಕೆಲವು ಪ್ರಮುಖ ಯೋಜನೆಗಳು ಮತ್ತು ಉಪಕ್ರಮಗಳ ಉತ್ತಮ ಅನುಷ್ಠಾನಕ್ಕೆ ಪ್ರಧಾನಿ ಮೋದಿ ಒತ್ತು ನೀಡುವಂತೆ ಸೂಚನೆ ನೀಡಿದರು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಗ್ರಾಮೀಣ ಪ್ರದೇಶಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಗೋಬರ್ಧನ್ನ ಮಹತ್ವ ಮತ್ತು ಉಪಕ್ರಮವನ್ನು ಮತ್ತಷ್ಟು ಜನಪ್ರಿಯಗೊಳಿಸುವ ಅಗತ್ಯತೆಯ ಬಗ್ಗೆ ನಿರ್ದೇಶನ ನೀಡಿದರು. ಅವರು ಬೆಳೆ ಉತ್ಪಾದಕತೆಯ ಮೇಲೆ ನ್ಯಾನೊ- ಗೊಬ್ಬರಗಳ ಸಕಾರಾತ್ಮಕ ಪರಿಣಾಮದ ಬಗ್ಗೆ ಒತ್ತು ನೀಡುವಂತೆ ಹೇಳಿದರು. ಅಲ್ಲದೆ ಅವುಗಳ ಬಳಕೆಯನ್ನು ಹೆಚ್ಚಿಸುವ ಬಗ್ಗೆ ಕ್ರಮಕ್ಕೆ ಮುಂದಾಗುವಂತೆ ಹೇಳಿದರು ಎಂದರು.
ಉದ್ಯಮಗಳ ವ್ಯವಹಾರವನ್ನು ಸುಲಭಗೊಳಿಸಿ
ಎಲ್ಲಾ ಪ್ರಮುಖ ಯೋಜನೆಗಳ ಸ್ಯಾಚುರೇಶನ್- ಲೆವೆಲ್ ಕವರೇಜ್ (ಅನುಷ್ಠಾನ) ಅನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಅಲ್ಲದೆ ಬಿಜೆಪಿ ಆಡಳಿತದ ರಾಜ್ಯಗಳು ಇದರತ್ತ ಮುನ್ನಡೆಯಬೇಕು. ಉದ್ಯಮಗಳ ವ್ಯವಹಾರವನ್ನು ಸುಲಭಗೊಳಿಸುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯ, ಈ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಹಲವಾರು ಉಪಕ್ರಮಗಳ ಕುರಿತು ಚರ್ಚೆ ನಡೆಯಿತು ಎಂದು ಹೇಳಿದರು.
ಕ್ರೀಡೆಗೆ ಸೂಕ್ತ ಪ್ರಾಮುಖ್ಯತೆ ನೀಡಿ: ಮೋದಿ
ದೇಶದಲ್ಲಿ ವ್ಯಾಪಾರದ ವಾತಾವರಣವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ರಾಜ್ಯಗಳನ್ನು ಪ್ರೋತ್ಸಾಹಿಸಿದರು. ತಮ್ಮ ತಮ್ಮ ರಾಜ್ಯಗಳು ಕ್ರೀಡೆಗೆ ಸೂಕ್ತ ಪ್ರಾಮುಖ್ಯತೆಯನ್ನು ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಕ್ರೀಡ ಚಟುವಟಿಕೆಗಳಲ್ಲಿ ಭಾಗವಹಿಸಲು ಮತ್ತು ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪಿಎಂ ಮೋದಿ ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದರು ಎಂದು ಬೊಮ್ಮಾಯಿ ತಿಳಿಸಿದರು.
ಪೌಷ್ಟಿಕಾಂಶ ಅಭಿಯಾನವನ್ನು ಬಲಪಡಿಸಲು ಸೂಚನೆ
ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಕಳೆದ ಸಭೆಯಲ್ಲಿ ಯುವಜನರ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣವು ಸರ್ಕಾರದ ಆದ್ಯತೆಯ ಕ್ಷೇತ್ರವಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದರು. ಅಲ್ಲದೆ ಪೌಷ್ಟಿಕಾಂಶ ಅಭಿಯಾನವನ್ನು ಬಲಪಡಿಸುವ ಮತ್ತು ಅಪೌಷ್ಟಿಕತೆಯನ್ನು ನಿವಾರಿಸುವ ಅಗತ್ಯವನ್ನು ಅವರು ಗುರಿಯಾಗಿ ನೀಡಿದ್ದರು ಎಂದರು.
ಉತ್ತಮ ಯೋಜನೆಗಳನ್ನು ಹಂಚಿಕೊಳ್ಳಲು ಕರೆ
ಕಳೆದ ವರ್ಷ ವಾರಣಾಸಿಯಲ್ಲಿ ಕೊನೆಯ ಅಭಿವೃದ್ಧಿ ಸಭೆ ನಡೆಸಲಾಗಿತ್ತು. ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಈ ಸಮಾವೇಶದಲ್ಲಿ ಪ್ರಧಾನಿ ಭಾಗವಹಿಸಿದ್ದರು. ಇಲ್ಲಿ ಆಡಳಿತ ಸಂಬಂಧಿತ ಉತ್ತಮ ಯೋಜನೆಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಒದಗಿಸಿತ್ತು ಎಂದು ಸಿಎಂ ಬೊಮ್ಮಾಯಿ ಹೇಳಿದರು.
Recommended Video