ಯಡಿಯೂರಪ್ಪ ರಾಜೀನಾಮೆ ಪಡೆದ ಬಳಿಕ ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್ ಮುಂದಿನ ಲೆಕ್ಕಾಚಾರಗಳೇನು?
ಬೆಂಗಳೂರು, ಜು. 26: ಸಾಮಾನ್ಯ ಕುಟುಂಬದಲ್ಲಿ ಜನಿಸಿ ರಾಜ್ಯದ ಮುಖ್ಯಮಂತ್ರಿಯಾಗಿ ಬೆಳೆದ ಛಲಗಾರ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಯೊಂದಿಗೆ ಕರ್ನಾಟಕದಲ್ಲಿ ರಾಜಕೀಯ ಇತಿಹಾಸವೊಂದು ಸೃಷ್ಟಿಯಾಗಿದೆ. ಪುರಸಭೆಯೊಂದರ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ್ದ ಯಡಿಯೂರಪ್ಪ ಅವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದು ಅವರ ಸಾಧನೆಗೆ ಸಾಕ್ಷಿ. ಯಡಿಯೂರಪ್ಪ ಅವರ ರಾಜೀನಾಮೆಯೊಂದಿಗೆ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೊಸ ರಾಜಕೀಯ ತಂತ್ರಗಾರಿಕೆ ಶುರುವಾಗಿದೆ.
ಇಲ್ಲಿಯವರೆಗೆ ಇತರ ರಾಜಕೀಯ ಪಕ್ಷಗಳೊಂದಿಗೆ ಸ್ಪರ್ಧೆ ಮಾಡುತ್ತಿದ್ದ ಬಿಜೆಪಿಯ ನಿಲುವಿನಲ್ಲಿ ಇನ್ಮುಂದೆ ಬದಲಾವಣೆ ಆಗಲಿದೆ ಎಂಬ ಮುನ್ಸೂಚನೆಯನ್ನು ಹೈಕಮಾಂಡ್ ಕೊಟ್ಟಿದೆ. ಅದಕ್ಕೆ ಕಾರಣವೂ ಇದೆ. ಮುಂದಿನ ಮುಖ್ಯಮಂತ್ರಿ ಯಾರು? ಎಂಬುದರ ಮೇಲೆ ರಾಜ್ಯ ಬಿಜೆಪಿಯ ಮುಂದಿನ ಭವಿಷ್ಯ ನಿಂತಿದೆ. ಜೊತೆಗೆ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಬಿ.ಎಸ್. ಯಡಿಯೂರಪ್ಪ ಪ್ರಮುಖರು. ಸಕ್ರೀಯ ರಾಜಕಾರಣದಿಂದ ಅವರ ನಿರ್ಗಮನ, ಬಿಜೆಪಿಯ ಹೊಸ ದಾರಿಗೆ ನಾಂದಿ ಹಾಡಲಿದೆ. ಆ ಗುರಿಯೊಂದಿಗೆ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯುರಪ್ಪ ಅವರನ್ನು ಕೆಳಗಿಳಿದೆ ಎಂಬ ಮಾಹಿತಿಯೂ ಇದೆ. ಹಾಗಾದರೆ ಬಿಜೆಪಿ ಹೈಕಮಾಂಡ್ ಮುಂದಿನ ನಡೆ ಏನು?
ತನ್ನ ಟಾರ್ಗೆಟ್ ಬದಲಿಸಲಿದೆ ಬಿಜೆಪಿ?
2024ರ ಲೋಕಸಭಾ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬೇಗನೆ ಬದಲಾವಣೆ ಮಾಡಿದೆ ಎಂಬ ಮಾಹಿತಿಯಿದೆ. ಹೀಗಾಗಿ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯ ಗುರಿ ಯಾವುದೇ ಒಂದು ರಾಜಕೀಯ ಪಕ್ಷವಾಗಿರುವುದಿಲ್ಲ ಎನ್ನಲಾಗುತ್ತಿದೆ. ಇಲ್ಲಿಯವರೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೊಂದಿಗೆ ಬಿಜೆಪಿ ಸ್ಪರ್ಧೆ ಮಾಡುತ್ತಿತ್ತು. ಇನ್ನುಮುಂದೆ ಅದು ಬದಲಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಸೂಚನೆ ನೀಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ಅಥವಾ ಜೆಡಿಎಸ್ ರಾಜಕೀಯ ವಿರೋಧಿಯಾಗಿರುವುದಿಲ್ಲ. ಬದಲಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಥವಾ ಎಚ್.ಡಿ. ಕುಮಾರಸ್ವಾಮಿ ಅವರನ್ನು ವಿರೋಧಿಗಳೆಂದು ಪರಿಗಣಿಸಲಾಗುತ್ತದೆ. ಅವರನ್ನು ಟಾರ್ಗೆಟ್ ಮಾಡುವ ಮೂಲಕ ಚುನಾವಣೆಯನ್ನು ಬಿಜೆಪಿ ಎದುರಿಸಲಿದೆ ಎಂದು ದೆಹಲಿ ಮೂಲಗಳು ಹೇಳುತ್ತಿವೆ.
ಜಾತಿ ರಾಜಕೀಯದಿಂದ ದೂರವಾಗಲು ಬಿಜೆಪಿ ನಿರ್ಧಾರ?
ರಾಜಕೀಯ ಪಕ್ಷಗಳ ಪ್ರಬಲ ನಾಯಕರನ್ನೇ ಟಾರ್ಗೆಟ್ ಮಾಡುವ ಮೂಲಕ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಬಿಜೆಪಿ ಹೈಕಮಾಂಡ್ ಗುರಿ ಎನ್ನಲಾಗುತ್ತಿದೆ. ಹೀಗಾಗಿ ರಾಜಕೀಯ ಪಕ್ಷಗಳ ಬದಲಿಗೆ, ರಾಜಕೀಯ ಪಕ್ಷಗಳ ನಾಯಕರನ್ನು ಟಾರ್ಗೆಟ್ ಮಾಡಿ, ಚುನಾವಣೆಯಲ್ಲಿ ಗೆಲವು ಸಾಧಿಸುವುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ. ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸಿ, ಆ ಸಮುದಾಯದ ಬೆಂಬಲವನ್ನು ಬಿಜೆಪಿಗೆ ತರುವ ಮೂಲಕ ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದರು. ಇದೀಗ ಯಡಿಯೂರಪ್ಪ ರಾಜೀನಾಮೆಗೆ ಸೂಚಿಸಿರುವ ಬಿಜೆಪಿ ಹೈಕಮಾಂಡ್ ಯಾವುದೇ ಒಂದು ಸಮುದಾಯದ ಬದಲಿಗೆ ಎಲ್ಲ ಮತದಾರರ ಬೆಂಬಲ ಪಡೆಯಲು ಯೋಜನೆ ರೂಪಿಸಿದೆ. ಆ ಮೂಲಕ ರಾಜ್ಯದಲ್ಲಿಯೂ ಸ್ಥಳೀಯ ನಾಯಕರ ಬದಲಿಗೆ ನೇರವಾಗಿ ಹೈಕಮಾಂಡ್ ಎಲ್ಲ ಸಲಹೆ ಸೂಚನೆಗಳನ್ನು ಕೊಡಲಿದೆ ಎಂಬ ಮಾಹಿತಿ ಬಂದಿದೆ.
ರಾಜ್ಯದಲ್ಲಿ ಹೈಕಮಾಂಡ್ ನೇರ ಆಡಳಿತ?
ಇಲ್ಲಿಯವರೆಗೆ ರಾಜಕೀಯ ಅಥವಾ ಚುನಾವಣಾ ತಂತ್ರಗಳನ್ನು ರಾಜ್ಯ ಬಿಜೆಪಿ ಘಟಕ ಹೆಣೆಯುತ್ತಿತ್ತು. ಅದರಲ್ಲಿಯೂ ಹಂಗಾಮಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೇರವಾಗಿ ಜನರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಆದರೆ ಇನ್ನುಮುಂದೆ ರಾಜ್ಯದಲ್ಲಿನ ಪ್ರತಿಕ್ಷಣದ ರಾಜಕೀಯ ಬೆಳವಣಿಗೆಗಳ ಮೇಲೆ ಹೈಕಮಾಂಡ್ ಕಣ್ಣಿಡಲಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಹೈಕಮಾಂಡ್ ಯೋಚನೆಗಳನ್ನು ರಾಜ್ಯದಲ್ಲಿ ಜಾರಿಗೆ ತರುವ ನಾಯಕನನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಯಾವುದೇ ನಿರ್ಧಾರ ಪ್ರಕಟಿಸುವ ಮೊದಲು ಹೈಕಮಾಂಡ್ ಅನುಮತಿ ಪಡೆಯಲೇ ಬೇಕಾಗುತ್ತದೆ. ಆ ಸೂಚನೆ ಕೂಡ ಮುಂದಿನ ಬಿಜೆಪಿ ರಾಜ್ಯ ಸರ್ಕಾರದ ಮೇಲೆ ಇರಲಿದೆ. ಹೀಗಾಗಿ ಇನ್ನುಮುಂದೆ ಜಾತಿಯಿಂದ ಬಿಜೆಪಿಯನ್ನು ಹೊರ ತಂದು ರಾಷ್ಟ್ರೀಯತೆ ಆಧಾರದ ಮೇಲೆ ರಾಜ್ಯದಲ್ಲಿ ಜನರ ಬೆಂಬಲ ಪಡೆಯುವುದು ಬಿಜೆಪಿ ಹೈಕಮಾಂಡ್ ಗುರಿ. ಅದಕ್ಕೆ ಕಾರಣ 2024ರ ಚುನಾವಣೆ.
Recommended Video
ಬಿಜೆಪಿ ಗುರಿ ವಿಧಾನಸಭೆ ಅಲ್ಲ ಲೋಕಸಭೆ!
ಸಧ್ಯ ಯಡಿಯೂರಪ್ಪ ಅವರ ಬದಲಾವಣೆಯಿಂದ ರಾಜ್ಯ ಬಿಜೆಪಿಯ ಮೇಲೆ ಪರಿಣಾಮವಾಗುವ ಸಾಧ್ಯೆತೆಯೂ ಇದೆ. ಅದು ಬಿಜೆಪಿ ಹೈಕಮಾಂಡ್ಗೂ ಗೊತ್ತಿದೆ. ಹೀಗಾಗಿ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗೆಲ್ಲುವುದಕ್ಕಿಂತ 2024ರ ಲೋಕಸಭಾ ಚುನಾವಣೆ ಬಿಜೆಪಿ ಹೈಕಮಾಂಡ್ ಗುರಿ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪ ಅವರ ಬದಲಾವಣೆ ಬಿಜೆಪಿಯ ಮೇಲೆ ಪರಿಣಾಮ ಬೀರುವುದು ನಿಶ್ಚಿತ. ಹೀಗಾಗಿ ಒಂದೊಮ್ಮೆ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಆ ಪರಿಣಾಮವಾದರೂ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮವಾಗದಂತೆ ನಿರ್ವಹಿಸಲೂ ಬಿಜೆಪಿ ಹೈಕಮಾಂಡ್ ಸಿದ್ಧತೆ ಮಾಡಿಕೊಂಡಿದೆಯಂತೆ. ಹೀಗಾಗಿಯೇ ಎಲ್ಲ ರಾಜ್ಯಗಳ ದಿನನಿತ್ಯದ ರಾಜಕೀಯ ಬೆಳವಣಿಗೆಗಳ ಮೇಲೆ ಸ್ವತಃ ಬಿಜೆಪಿ ರಾಷ್ಟ್ರೀಯ ನಾಯಕರು ಕಣ್ಣಿಡಲಿದ್ದಾರೆ.
ಒಟ್ಟಾರೆ ಮುಖ್ಯಮಂತ್ರಿ ಹುದ್ದೆಯಿಂದ ಬಿ.ಎಸ್. ಯಡಿಯೂರಪ್ಪ ಅವರ ನಿರ್ಗಮನದೊಂದಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಹೈಕಮಾಂಡ್ ಹೊಸ ರಾಜಕೀಯ ನಿರ್ಧಾರಕ್ಕೆ ಮುಂದಾಗಿದೆ. ತನ್ನ ಪ್ರಯೋಗದಲ್ಲಿ ಬಿಜೆಪಿ ಎಷ್ಟರ ಮಟ್ಟಿಗೆ ಗುರಿ ಮುಟ್ಟಲಿದೆ ಎಂಬುದು ಕುತೂಹಲ ಮೂಡಿಸಿದೆ. ಬಿಜೆಪಿ ಹೈಕಮಾಂಡ್ ಮಾಡಲಿರುವ ಹೊಸ ಪ್ರಯೋಗದ ಫಲಿತಾಂಶ 2023 ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ 2014ರಲ್ಲಿನ ಲೋಕಸಭಾ ಚುನಾವಣೆಯಲ್ಲಿ ಬರಲಿದೆ.