ಹೆಣ್ಣಿನ ಆಶೆಗೆ ಬಿದ್ದವರನ್ನು ಏನು ಮಾಡ್ತಿದ್ದರು ಗೊತ್ತಾ?
ಮಡಿಕೇರಿ, ಜೂನ್ 22 : ಕೊಡಗಿನ ಹುಡುಗಿಯರು ಸಿಗುತ್ತಾರೆಂದು ವೆಬ್ಸೈಟ್ ಮೂಲಕ ದೂರವಾಣಿ ಸಂಖ್ಯೆ ನೀಡಿ, ಅದನ್ನು ಸಂಪರ್ಕಿಸಿ ಬರುತ್ತಿದ್ದ ವಿಟಪುರುಷರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ಮಾಡುತ್ತಿದ್ದ ತಂಡವನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಸುಮಾರು ಏಳು ಮಂದಿ ಈ ಜಾಲದಲ್ಲಿದ್ದು, ಆ ಪೈಕಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ರೀತಿ ಹನಿಟ್ರ್ಯಾಪ್ ಮಾಡುವುದರ ಮೂಲಕ ಜನರನ್ನು ದೋಚುತ್ತಿದ್ದ ತಂಡದಲ್ಲಿದ್ದ ಇನ್ನಿಬ್ಬರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಬಂಧಿತರು : ಕುಶಾಲನಗರ ನಾಲ್ಕನೇ ಬ್ಲಾಕ್ನ ನಿವಾಸಿ ಎನ್. ವೇಣುಗೋಪಾಲ್, ಸುಂಟಿಕೊಪ್ಪ 7ನೇ ಹೊಸಕೋಟೆಯ ಸಿ.ಎಸ್. ಜಯಚಂದ್ರ, ಕಾರ್ಕಳ ಮೂಲದವನಾಗಿದ್ದು, ಸಕಲೇಶಪುರದಲ್ಲಿ ನೆಲೆಸಿರುವ ಅಬ್ದಲ್ ಕರೀಂ, 7ನೇ ಹೊಸಕೋಟೆಯ ಎಸ್. ಶರತ್ಕುಮಾರ್ ಹಾಗೂ ಕುಶಾಲನಗರ ಗುಮ್ಮನಕೊಲ್ಲಿಯ ಎಂ.ಯು. ಮುಸ್ತಫ ಬಂಧಿತ ಖತರ್ನಾಕ್ಗಳು. [ಹನಿಟ್ರ್ಯಾಪ್: ಕನ್ನಡ ಕಿರುತೆರೆ ನಟಿ ಹರ್ಷಿಣಿ ಬಂಧನ]
ಇವರು ವೆಬ್ಸೈಟ್ನಲ್ಲಿ ಕೂರ್ಗ್ ಕಾಲ್ಗರ್ಲ್ಸ್ ಎಂದು ಖಾತೆ ತೆರೆದು ಅದರಲ್ಲಿ ದೂರವಾಣಿ ಸಂಖ್ಯೆಗಳನ್ನು ನಮೂದಿಸಿದ್ದರು. ಅಲ್ಲದೆ ಕೆಲವು ಹುಡುಗಿಯರ ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು. ಇದನ್ನು ನೋಡಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವ ವಿಟಪುರುಷರನ್ನು ಹುಡುಗಿಯರ ಆಸೆ ತೋರಿಸಿ ಕರೆಯಿಸಿಕೊಂಡು ಬಳಿಕ ಅವರಿಂದ ದರೋಡೆ ಮಾಡುತ್ತಿದ್ದರು.
ಹಣ ಕಳೆದುಕೊಂಡವರು ಮರ್ಯಾದೆಗೆ ಅಂಜಿ ಯಾರ ಮುಂದೆಯೂ ಬಾಯಿಬಿಡದೆ ತೆಪ್ಪಗಾಗಿ ಬಿಡುತ್ತಿದ್ದರು. ಇದರಿಂದ ತಮ್ಮ ದಂಧೆಯನ್ನು ಮಂದುವರೆಸಿದ್ದರಾದರೂ ಇದೀಗ ಪಾಪದ ಕೊಡ ತುಂಬಿದ್ದರಿಂದ ಸಿಕ್ಕಿ ಬಿದ್ದಿದ್ದಾರೆ. [ಫೇಸ್ ಬುಕ್ ನಲ್ಲೂ ಹನಿ ಟ್ರ್ಯಾಪ್ ಮಾಡ್ತಾರೆ, ಹುಷಾರು!]
ತನಿಖಾ ತಂಡ : ಕೊಡಗಿನಲ್ಲಿ ವೆಬ್ಸೈಟ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ರಾಜೇಂದ್ರ ಪ್ರಸಾದ್ ಅವರು ತನಿಖೆಗೆ ಆದೇಶಿಸಿದ್ದರು.
ಅದರಂತೆ ಕಾರ್ಯಾಚರಣೆಗೆ ಜಿಲ್ಲಾ ಅಪರಾಧ ಪತ್ತೆದಳದ ನಿರೀಕ್ಷಕ ಬಿ.ಆರ್. ಲಿಂಗಪ್ಪ, ಸಿಬ್ಬಂದಿ ಎನ್.ಟಿ. ತಮ್ಮಯ್ಯ, ವಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್ ಕುಮಾರ್, ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಆರ್. ವಸಂತ, ಕೆ.ಎಸ್. ಶಶಿಕುಮಾರ್, ಜೋಸ್ನಿಶಾಂತ್, ಸುನಿಲ್, ಸಿ.ಕೆ. ರಾಜೇಶ್, ಎಂ.ಜಿ. ಗಿರೀಶ್, ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ, ಎಎಸ್ಐ ಪಾರ್ಥ, ದಯಾನಂದ ದಿನೇಶ್ ಪುಂಡರೀಕಾಕ್ಷ, ಡಿಸಿಬಿ ಸಿಬ್ಬಂದಿಗಳಾದ ಪ್ರಕಾಶ್, ಗೋಪಾಲ್, ಪ್ರಕಾಶ್ ಹಾಗೂ ಕಾರ್ಯಪ್ಪ ಅವರನ್ನೊಳಗೊಂಡ ತಂಡ ಇಳಿದಿತ್ತು.
ತೆಪ್ಪಗೆ ಕೂತಿದ್ದ ಹಣ ಕಳೆದುಕೊಂಡವ : ವೆಬ್ಸೈಟ್ನಲ್ಲಿದ್ದ ಮೊಬೈಲ್ ನಂಬರ್ ನೋಡಿ ಅದನ್ನು ಸಂಪರ್ಕಿಸಿದ ಮಡಿಕೇರಿಯ ವ್ಯಕ್ತಿಯೊಬ್ಬರನ್ನು ಇದೇ ತಂಡ ಸುಂಟಿಕೊಪ್ಪಕ್ಕೆ ಕರೆಯಿಸಿಕೊಂಡು ಅಲ್ಲಿಂದ ಕುಶಾಲನಗರದಲ್ಲಿ ನಿಮಗೆ ಹುಡುಗಿಯ ವ್ಯವಸ್ಥೆ ಮಾಡಿ ಕೊಡುವುದಾಗಿ ಕರೆದೊಯ್ದು ದಾರಿ ಮಧ್ಯೆ ಹಲ್ಲೆ ಮಾಡಿ ಅವರ ಬಳಿಯಿದ್ದ ಮೊಬೈಲ್ ಹಾಗೂ 11,500 ರು. ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಆದರೆ ಆ ವ್ಯಕ್ತಿ ಪೊಲೀಸರಿಗೆ ತಿಳಿಸಿದರೆ ಮಾನ ಹೋಗಿ ಬಿಡುತ್ತದೆ ಎಂದು ತೆಪ್ಪಗಾಗಿದ್ದರು.
ಈ ಬಗ್ಗೆ ಮಾಹಿತಿ ಕಲೆ ಹಾಕಿದ ತನಿಖಾ ತಂಡ ಆ ವ್ಯಕ್ತಿಗೆ ಧೈರ್ಯ ತುಂಬಿ ಅವರ ಮೂಲಕ ಮಾಹಿತಿ ಪಡೆಯಿತು. ವೆಬ್ಸೈಟ್ನಲ್ಲಿದ್ದ ನಂಬರಿನ ಸಿಮ್ನ್ನು ನಕಲಿ ದಾಖಲೆ ನೀಡಿ ಖರೀದಿಸಿರುವುದು ಬೆಳಕಿಗೆ ಬಂದಿತ್ತು. [ನಟಿ ನಯನಾ ಕೃಷ್ಣ ಹನಿ ಟ್ರ್ಯಾಪ್ ಮಾಡಿದ್ದರೆ?]
ತನಿಖೆಯನ್ನು ಚುರುಕುಗೊಳಿಸಿದ ತನಿಖಾ ತಂಡ ಸುಮಾರು ಐದು ಮಂದಿಯನ್ನು ಬಂಧಿಸಿದ್ದು, ಬಳಿಕ ಇವರಿಂದ ದರೋಡೆಗೊಳಗಾಗಿದ್ದ ವ್ಯಕ್ತಿಯನ್ನು ಕರೆದೊಯ್ದು ತೋರಿಸಿದಾಗ ದರೋಡೆ ಮಾಡಿದವರು ಇವರೇ ಎಂದು ಗುರುತು ಹಿಡಿದಿದ್ದರು. ಐವರು ಆರೋಪಿಗಳನ್ನು ಪೊಲೀಸ್ ಸ್ಟೈಲ್ನಲ್ಲಿ ವಿಚಾರಣೆಗೊಳಪಡಿಸಿದಾಗ ಕೇವಲ ಹಣ ಮಾಡುವ ಉದ್ದೇಶದಿಂದ ಈ ರೀತಿ ವೆಬ್ಸೈಟ್ ಖಾತೆ ತೆರೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಇದರ ಹಿಂದೆ ವೇಶ್ಯಾವಾಟಿಕೆ ಜಾಲವಿರುವುದು ಪತ್ತೆಯಾಗಿಲ್ಲ.