Karnataka winter update: ಉತ್ತರ ಒಳನಾಡಿಗೆ ಅಧಿಕ ಚಳಿ, ದಕ್ಷಿಣದ ಕೆಲ ಜಿಲ್ಲೆಗಳಿಗೆ ವ್ಯಾಪಕ ಮಳೆ ಮುನ್ಸೂಚನೆ
ಬೆಂಗಳೂರು, ಡಿಸೆಂಬರ್ 14: ಕರ್ನಾಟಕ ಸದ್ಯಕ್ಕೆ ಮಳೆ ದುರ್ಬಲಗೊಂಡಿದ್ದು, ಶನಿವಾರ ಡಿಸೆಂಬರ್ 16ರಿಂದ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮುಂದುವರಿಯಲಿದೆ. ಒಂದೆರಡು ದಿನದಿಂದ ರಾಜ್ಯದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಳಿ ಪ್ರಮಾಣ ವಿಪರಿತವಾಗಿ ಏರಿಕೆ ಆಗಿದೆ. ಇನ್ನೂ ಕೆಲವು ದಿವಸಗಳು ಚಳಿ, ಮಳೆ ವಾತಾವರಣ ಹೀಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ, ಕರ್ನಾಟಕದ ದಕ್ಷಿಣ ಒಳನಾಡಿಗಿಂತಲೂ ಉತ್ತರ ಒಳನಾಡಿನಲ್ಲಿ (ಉತ್ತರ ಕರ್ನಾಟಕ) ಚಳಿ ಪ್ರಮಾಣ ಕೆಲವೇ ದಿನಗಳಲ್ಲಿ ಅಧಿಕವಾಗಿದೆ. ಮೂರು ನಾಲ್ಕು ದಿನಗಳಿಂದ ವಿಜಯಪುರ ಜಿಲ್ಲೆ ವ್ಯಾಪ್ತಿಯಲ್ಲಿ ಅತ್ಯಧಿಕ ಚಳಿ ಕಂಡು ಬಂದಿದೆ. ಇಲ್ಲಿ ನಿತ್ಯ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆ ಆಗಿದೆ.

ಹೆಚ್ಚು ಬಿಸಿಲು ಕಂಡು ಬರುತ್ತಿದ್ದ ಬಿಸಿಲನಾಡು ಎನ್ನಿಸಿಕೊಳ್ಳುವ ಜಿಲ್ಲೆಗಳಲ್ಲಿಯೇ ಕರಾವಳಿ ಮತ್ತು ದಕ್ಷಿಣದ ಭಾಗದ ಜಿಲ್ಲೆಗಳಿಗಿಂತಲೂ ಅಧಿಕ ಚಳಿ ವರದಿ ಆಗುತ್ತಿದೆ. ರಾಯಚೂರು, ಕೊಪ್ಪಳ, ಬೀದರ್, ಕಲಬುರಗಿ, ಹಾವೇರಿ, ಗದಗ, ಬೆಳಗಾವಿ ವಿಮಾನ ನಿಲ್ದಾಣ, ಧಾರವಾಡ ಬಾಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕನಿಷ್ಠ ತಾಪಮಾನ 18-12 ಡಿಗ್ರಿ ಸೆಲ್ಸಿಯಸ್ ವರೆಗೆ ಅತ್ಯಧಿಕ ಪ್ರಮಾಣದಲ್ಲಿ ಇಳಿಕೆ ಆಗುವ ಮೂಲಕ ಇಲ್ಲೆಲ್ಲಾ ಚಳಿ ಸೃಷ್ಟಿಯಾಗಿದೆ.
ಬೆಳಗ್ಗೆ ಮತ್ತು ಸಂಜೆ ನಂತರ ಚಳಿ ಏರಿಕೆ
ಇಷ್ಟು ಜಿಲ್ಲೆಗಳಲ್ಲಿ ಬೆಳಗ್ಗೆ ಮತ್ತು ರಾತ್ರಿ ಕ್ರಮೇಣ ಚಳಿಯ ವಾತಾವರಣ ಕಂಡು ಬರುತ್ತಿದೆ. ಜನರು ಬೆಚ್ಚಗಿನ ಧಿರಿಸಿನ ಮೊರೆ ಹೋಗಿದ್ದಾರೆ. ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರಲು ಯೋಚಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಶುಷ್ಕ ವಾತಾವರಣ ಹೆಚ್ಚಿತ್ತು. ವಾತಾವರಣದಲ್ಲಿನ ದಿಢೀರ್ ಬದಲಾವಣೆಯಿಂದಾಗಿ ಗರಿಷ್ಠ ತಾಪಮಾನ ಇದ್ದರೂ ಸಹಿತ ಬೆಳಗ್ಗೆ ಮತ್ತು ಸಂಜೆ ಚಳಿ ಹೆಚ್ಚಿರುತ್ತದೆ.
ಅದೇ ರೀತಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿಯೂ ಕೆಲವು ದಿನಗಳಿಂದ ಚಳಿ ಹಂತ ಹಂತವಾಗಿ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳ ನಂತರ ದಕ್ಷಿಣ ಕರ್ನಾಟಕದ ಜಿಲ್ಲೆಗಳು ಅತ್ಯಧಿಕ ಚಳಿ ಸಾಲಿನಲ್ಲಿ ನಂತರದ ಸ್ಥಾನ ಪಡೆದಿವೆ. ಇಲ್ಲಿ ಕನಿಷ್ಠ ತಾಪಮಾನ 18-20 ಡಿಗ್ರಿ ಸೆಲ್ಸಿಯಸ್ ಆಸುಪಾಸು ದಾಖಲಾಗುತ್ತಿದೆ.

ಕರ್ನಾಟಕದಲ್ಲಿ ಡಿ.16ರಿಂದ ಮತ್ತೆ ಮಳೆ ಶುರು
ರಾಜ್ಯದಲ್ಲಿ ಡಿಸೆಂಬರ್ 16 ಶನಿವಾರದಿಂದ ಮೂರು ದಿನ ರಾಜ್ಯದ ಸುಮಾರು ಒಂಬತ್ತು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಕಂಡು ಬರಲಿದೆ. ಕರಾಳಿಯಲ್ಲಿ ಒಂದು ದಿನ ತಡವಾಗಿ ಮಳೆ ಆಗಲಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಗಾಗ ಹಗುರದಿಂದ ಸಾಧಾರಣ ಮಳೆ ಸುರಿಯುವ ಲಕ್ಷಣಗಳು ಇವೆ. ಉಳಿದಂತೆ ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲಿ ಚಳಿ ವಾತಾವರಣ ನಿರ್ಮಾಣವಾಗಲಿದೆ.
ಇದರ ಹೊರತು ರಾಜ್ಯದಲ್ಲಿ ಹವಾಮಾನ ಸ್ಥಿತಿಗತಿಯಲ್ಲಿ ಯಾವುದೇ ಗಂಭೀರ ಸ್ವೂರಪದ ಬದಲಾವಣೆಗಳು ಆಗುವುದಿಲ್ಲ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಸರಾಸರಿ ಗರಿಷ್ಠ ತಾಪಮಾನ 28 ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಐಎಂಡಿ ವರದಿ ತಿಳಿಸಿದೆ.












Click it and Unblock the Notifications