ಖಾಕಿ ಮತ್ತು ಖಾದಿಯ ಮೇಲೆ ಹೆಚ್ಚಿನ ಭರವಸೆ ಇನ್ನು ಬೇಕಿಲ್ಲ
ರಾಯಚೂರಿನ ಜಿಲ್ಲಾ ಯಾದವ ಸಮಾಜ ಮೈದಾನದಲ್ಲಿ ತಾಲೂಕು ಮಂಗಲ ಗೋಯಾತ್ರಾ ಸಮಿತಿ ಆಯೋಜಿಸಿದ್ದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಶ್ವರ ಶ್ರೀಗಳು, ಖಾಕಿ ಹಾಗೂ ಖಾದಿಯ ಮೇಲೆ ಹೆಚ್ಚಿನ ಭರವಸೆ ಇನ್ನು ಬೇಕಿಲ್ಲ ಎಂದಿದ್ದಾರೆ.
ರಾಯಚೂರು, ಡಿ.17 : ಗೋವಂಶ ನಾಶವೆಂದರೆ ದೇಶವೇ ನಾಶವಾದಂತೆ. ಖಾಕಿ ಹಾಗೂ ಖಾದಿಯ ಮೇಲೆ ಹೆಚ್ಚಿನ ಭರವಸೆ ಇನ್ನು ಬೇಕಿಲ್ಲ.
ಸಂತರ ದೃಢ ಸಂಕಲ್ಪದಿಂದ ಮಾತ್ರ ಈ ಗೋಸಂರಕ್ಷಣೆಯ ಕಾರ್ಯ ನಡೆಯಬೇಕಿದೆ. ಜೊತೆಗೆ ಸಂತರ ಹೆಜ್ಜೆಯೊಡನೆ ಜನರೂ ಜೊತೆಗೂಡಬೇಕಿದೆ, ಅದಕ್ಕಾಗಿಯೇ 'ಮಂಗಲ ಗೋಯಾತ್ರೆ' ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
ಶನಿವಾರ (ಡಿ 17) ರಾಯಚೂರಿನ ಜಿಲ್ಲಾ ಯಾದವ ಸಮಾಜ ಮೈದಾನದಲ್ಲಿ ತಾಲೂಕು ಮಂಗಲ ಗೋಯಾತ್ರಾ ಸಮಿತಿ ಆಯೋಜಿಸಿದ್ದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಗೋಪಾದ ಧೂಳಿಯಿಂದ ವಾತಾವರಣ ಪಾವನಮಯವಾಗುತ್ತಿದ್ದ ಗೋಧೂಳಿ ಮುಹೂರ್ತಗಳಿದ್ದ ದಿನಗಳಿದ್ದವು. (ಗೋಮಯದಲ್ಲಿ ಲಕ್ಷ್ಮೀ ವಾಸಿಸುತ್ತಾಳೆ)

ವರ್ಣನೆಗೆ ಮೀರಿದ ಗುಣಗಳ ಗಣಿ ಗೋಮಾತೆ. ಯುಗಯುಗಗಳು ಕಳೆದರೂ ಮುಗಿಯದ ಗಾಥೆ ಗೋಮಾತೆ. ಇಂತಹಾ ಗೋಮಾತೆಯನ್ನು ನಾವಿಂದು ಅಕ್ಕರೆಯಿಂದ ಕಾಣುತ್ತಿಲ್ಲ.
ತಾಯಿ ಕೊಟ್ಟದ್ದನ್ನು ತಿನ್ನುವುದನ್ನು ಬಿಟ್ಟು ತಾಯಿಯನ್ನೇ ತಿನ್ನುವ ಧೂರ್ತತನಕ್ಕೆ ಮುಂದಾಗುತ್ತಿದ್ದೇವೆ ಎಂದು ಶ್ರೀಗಳು ಖೇದ ವ್ಯಕ್ತಪಡಿಸಿದರು.
ಇಂದು ಧೂಳೆಂದರೆ ಖಾಯಿಲೆ ಎನ್ನುವಂತಾಗಿದೆ. ಗೋವುಗಳೂ ಅಲ್ಲದ, ಹಂದಿಗಳೂ ಅಲ್ಲದ ಕೋಟ್ಯಾಂತರ ಕುಲಾಂತರಿ ಗೋವುಗಳು ಇಂದು ಉದ್ಭವಿಸಿವೆ. ಈ ಅಪಾಯದಿಂದ ಸಮಾಜವನ್ನು ಎಚ್ಚರಿಸುವ ಜಾಗೃತಿ ಘಂಟೆಯೇ ಮಂಗಲಗೋಯಾತ್ರೆ ಎಂದು ಶ್ರೀಗಳು ಈ ಸಂದರ್ಭದಲ್ಲಿ ಹೇಳಿದರು.
ಗೋವುಗಳನ್ನು ಚಿತ್ರಹಿಂಸೆ ಮಾಡಿ ಕೊಲ್ಲುವುದನ್ನು ಇಂದು ಕಾಣುತ್ತಿದ್ದೇವೆ. ಯಾರಿಗೂ ಉಪದ್ರವವನ್ನು ಕೊಡದೇ ಉಪಕಾರವನ್ನೇ ಮಾಡುವ ಗೋಮಾತೆಯನ್ನು ನಾವಿಂದು ಆದರದಿಂದ ಕಾಣಬೇಕಿದೆ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ತಾಲೂಕು ಮಂಗಲಗೋಯಾತ್ರಾ ಸಮಿತಿಯವರು, ರಾಘವೇಶ್ವರ ಶ್ರೀಗಳಿಗೆ ಗೋಮಯದ ಗಣೇಶನನ್ನು ನೀಡಿ ಗೌರವಿಸಿದ್ದು ಎಲ್ಲರ ಗಮನ ಸೆಳೆಯಿತು.
ಪೂರ್ವಾಹ್ನ 11.30 ಕ್ಕೆ ರಾಯರ ಗುಡಿಯಿಂದ ರಾಯಚೂರಿಗೆ ಆಗಮಿಸಿದ ಗೋಯಾತ್ರೆಯನ್ನು ನಗರದ ಗಣ್ಯರು ಸ್ವಾಗತಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ನಾದಸ್ವರ, ಡೋಲುವಾದನಗಳನ್ನು ಒಳಗೊಂಡು ಗೋರಥಗಳು ಸಾಗಿ, ಸೇರಿದವರಲ್ಲಿ ಗೋಜಾಗೃತಿ ಮೂಡಿಸಿದವು.












Click it and Unblock the Notifications