ಅತೃಪ್ತ ಶಾಸಕರ ಪಟ್ಟಿಯಿಂದ ನಮ್ಮ ಮೂವರ ಹೆಸರು ತೆಗೆಯಿರಿ!
ಬೆಂಗಳೂರು, ಜುಲೈ 01 : 'ನಾವು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಅತೃಪ್ತರ ಗುಂಪಿನಿಂದ ನಮ್ಮ ಹೆಸರು ತೆಗೆದು ಹಾಕಿ' ಎಂದು ಮೂವರು ಶಾಸಕರು ಮನವಿ ಮಾಡಿದರು.
ಸೋಮವಾರ ಬೆಂಗಳೂರಿನಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾ ನಾಯಕ್, ಕುಷ್ಟಗಿ ಶಾಸಕ ಅಮರೇಗೌಡ ಬೈಯಾಪುರ ಮತ್ತು ಮಸ್ಕಿ ಶಾಸಕ ಪ್ರತಾಪ್ ಗೌಡ ಅವರು ಅವರು ಮಾಧ್ಯಮಗಳಿಗೆ ಮಾಡಿದ ಮನವಿ ಇದು.
ವಿಜಯನ ನಗರ ಶಾಸಕ ಆನಂದ್ ಸಿಂಗ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಬಳಿಕ ಮೂವರು ಶಾಸಕರು ಬೆಂಗಳೂರಿಗೆ ಆಗಮಿಸಿದರು. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.

ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ ಮೂವರು ಶಾಸಕರು ಒಟ್ಟಾಗಿ ಬೆಂಗಳೂರಿಗೆ ಆಗಮಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, 'ನಾವು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ಕಾಂಗ್ರೆಸ್ನಲ್ಲಿಯೇ ಇರುತ್ತೇವೆ. ಅತೃಪ್ತರ ಗುಂಪಿನಿಂದ ನಮ್ಮ ಹೆಸರು ತೆಗೆದುಹಾಕಿ' ಎಂದರು.
'ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್ ರಾಜೀನಾಮೆ ಅವರ ವೈಯಕ್ತಿಕ ವಿಚಾರವಾಗಿದೆ. ಅವರ ಮನವೊಲಿಸುವ ಕೆಲಸ ಮಾಡುತ್ತೇವೆ. ನಾವು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವ ಅನಿವಾರ್ಯತೆ ಇಲ್ಲ' ಎಂದು ಶಾಸಕರು ಸ್ಪಷ್ಟಪಡಿಸಿದರು.
'ಮಾಧ್ಯಮಗಳಲ್ಲಿ ಪದೇ-ಪದೇ ನಮ್ಮನ್ನು ಅತೃಪ್ತ ಶಾಸಕರು ಎಂದು ಹೇಳುವುದರಿಂದ ನಮ್ಮ ಕ್ಷೇತ್ರದಲ್ಲಿ ಸಮಸ್ಯೆ ಆಗುತ್ತಿದೆ. ನಾವು ಪಕ್ಷ ಬಿಡುವ ಅಲೋಚನೆಯೇ ಇಲ್ಲ. ನಾವು ಅತೃಪ್ತ ಶಾಸಕರು ಅಲ್ಲ' ಎಂದು ಶಾಸಕರು ಹೇಳಿದರು.












Click it and Unblock the Notifications