ಸಂದರ್ಶನ : ಲೋಕಾಯುಕ್ತದ ಅಧಿಕಾರ ಮೊಟಕುಗೊಳ್ಳುವುದಿಲ್ಲ
ಬೆಂಗಳೂರು, ಮಾರ್ಚ್ 17 : ಭ್ರಷ್ಟಾಚಾರ ನಿಗ್ರಹ ದಳವನ್ನು ರಚನೆ ಮಾಡಿರುವ ಬಗ್ಗೆ ಕರ್ನಾಟಕದಲ್ಲಿ ಚರ್ಚೆ ನಡೆಯುತ್ತಿದೆ. ಲೋಕಾಯುಕ್ತದ ಅಧಿಕಾರ ಮೊಟಕುಗೊಳಿಸಲು ದಳ ರಚಿಸಲಾಗಿದೆ ಎಂಬ ಆರೋಪಗಳು ಕೇಳಬರುತ್ತಿವೆ. ಆದರೆ, ಎಸಿಬಿ ರಚನೆಯಿಂದ ಲೋಕಾಯುಕ್ತದ ಅಧಿಕಾರಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಬ್ರಿಜೇಶ್ ಕಾಳಪ್ಪ ಅವರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ರಚನೆ ಕುರಿತು ಒನ್ ಇಂಡಿಯಾ ಜೊತೆ ಮಾತನಾಡಿದ್ದಾರೆ. 'ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಆದೇಶದಂತೆ ಎಸಿಬಿ ರಚನೆ ಮಾಡಲಾಗಿದೆ' ಎಂದು ಹೇಳಿದ್ದಾರೆ. ['ಲೋಕಾಯುಕ್ತ ಸಮಾಧಿ ಮಾಡುತ್ತಿರುವ ಕಾಂಗ್ರೆಸ್ಸಿಗೆ ಧಿಕ್ಕಾರ!']
'ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಭ್ರಷ್ಟಾಚಾರ ನಿಗ್ರಹ ದಳದ ರಚನೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಕೇಂದ್ರ ಲೋಕಪಾಲ ಕಾಯ್ದೆಯ ರೂಪುರೇಷೆ ತಯಾರು ಮಾಡಿದ ಸಮಿತಿಯಲ್ಲಿ ಅಣ್ಣಾ ಹಜಾರೆ ಅವರ ಜೊತೆ ಸಂತೋಷ್ ಹೆಗ್ಡೆ ಅವರು ಇದ್ದರು. ಲೋಕಪಾಲ ಕಾಯ್ದೆಯಂತೆಯೇ ಎಸಿಬಿ ಕೆಲಸ ಮಾಡಲಿದೆ' ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದ್ದಾರೆ. [ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಿದ ಸರ್ಕಾರ]
ಭ್ರಷ್ಟಾಚಾರ ನಿಗ್ರಹ ದಳದ ರಚನೆಯಿಂದಾಗಿ ಈಗಿರುವ ಕರ್ನಾಟಕ ಲೋಕಾಯುಕ್ತದ ಅಧಿಕಾರ ಮೊಟಕುಗೊಳ್ಳುವುದಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ. ಬ್ರಿಜೇಶ್ ಕಾಳಪ್ಪ ಸಂದರ್ಶನದ ವಿವರ ಚಿತ್ರಗಳಲ್ಲಿ....

ಎಸಿಬಿ, ಲೋಕಾಯುಕ್ತ ಪ್ರತ್ಯೇಕವಾಗಿ ಕೆಲಸ ಮಾಡುತ್ತದೆ
'ಲೋಕಾಯುಕ್ತದ ಪೊಲೀಸ್ ವಿಭಾಗ ಈಗಿನಂತೆಯೇ ಮುಂದುವರೆಯುತ್ತದೆ. ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ಹಾಗೂ ಭ್ರಷ್ಟಾಚಾರ ತಡೆ ಅಧಿನಿಯಮ 1988 ಎರಡು ಪ್ರತ್ಯೇಕ ಶಾಸನಗಳು. ಭ್ರಷ್ಟಾಚಾರ ತಡೆ ಅಧಿನಿಯಮದ ಅಡಿ ಬರುವ ಪ್ರಕರಣಗಳನ್ನ ತನಿಖೆ ಮಾಡಲು ಎಸಿಬಿ ರಚನೆ ಮಾಡಲಾಗಿದೆ'.

ನ್ಯಾಯಾಲಯದ ಆದೇಶದಂತೆ ರಚನೆ ಮಾಡಲಾಗಿದೆ
'ಹಲವು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳ ಅನ್ವಯ ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪನೆ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಈ ನಿರ್ಧಾರದಿಂದ ಕೇಂದ್ರದ ಲೋಕಪಾಲ ಕಾಯ್ದೆಗೆ ಸಮವಾದ ನಿಯಮ ಕರ್ನಾಟಕದಲ್ಲಿ ಜಾರಿಗೆ ಬಂದಿದೆ'.

'ಭ್ರಷ್ಟಾಚಾರದ ಹೋರಾಟಕ್ಕೆ ಮತ್ತಷ್ಟು ಬಲ ಸಿಗುತ್ತದೆ'
'ಎಸಿಬಿ ರಚನೆಯಿಂದಾಗಿ ಲೋಕಾಯುಕ್ತದ ಅಧಿಕಾರ ಮೊಟಕುಗೊಳ್ಳುವುದಿಲ್ಲ. ಲೋಕಾಯುಕ್ತ ಸರಿಯಾಗಿ ಕೆಲಸ ಮಾಡುವಂತೆ ಎಸಿಬಿ ನೋಡಿಕೊಳ್ಳುತ್ತದೆ. ಇದರಿಂದಾಗಿ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ಸಿಗುತ್ತದೆ'.

'ಸಂತೋಷ್ ಹೆಗ್ಡೆ ಅವರ ವಿರೋಧವೇಕೆ?'
'ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರು ಎಸಿಬಿ ರಚನೆಯನ್ನು ವಿರೋಧಿಸುತ್ತಿದ್ದಾರೆ. ಕೇಂದ್ರ ಲೋಕಪಾಲ ಕಾಯ್ದೆಗೆ ಸಮನಾಗಿ ಎಸಿಬಿ ಕೆಲಸ ಮಾಡುತ್ತದೆ. ಲೋಕಪಾಲ ಕಾಯ್ದೆ ಕರಡು ಸಮಿತಿ ರಚನೆ ಮಾಡುವ ಸಮಿತಿಯಲ್ಲಿ ಸಂತೋಷ್ ಹೆಗ್ಡೆ ಅವರಿದ್ದರು'.

ಲೋಕಾಯುಕ್ತರನ್ನು ನೇಮಕ ಮಾಡಿದ್ದು ಬಿಜೆಪಿ
'ಲೋಕಾಯುಕ್ತ ಸಂಸ್ಥೆಯ ಬಗ್ಗೆ ಬಿಜೆಪಿ ಪ್ರಶ್ನೆಗಳನ್ನು ಎತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೇ ನ್ಯಾ.ಭಾಸ್ಕರರಾವ್ ಮತ್ತು ನ್ಯಾ. ಸುಭಾಷ್ ಬಿ.ಅಡಿ ಅವರನ್ನು ಲೋಕಾಯುಕ್ತ ಸಂಸ್ಥೆಗೆ ನೇಮಕ ಮಾಡಲಾಗಿತ್ತು'.












Click it and Unblock the Notifications