Minister DK Shivakumar: ನಾವು ಬಸವಣ್ಣ ನಾಡಿನವರು ಕೊಟ್ಟ ಮಾತಿಗೆ ಬದ್ಧರಾಗಿರುತ್ತೇವೆ: ಡಿ ಕೆ ಶಿವಕುಮಾರ್
ಬೆಂಗಳೂರು, ಜೂನ್ 02: ಜನ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. 5 ಗ್ಯಾರಂಟಿಗಳನ್ನು ನೀಡಲು ತೀರ್ಮಾನ ಮಾಡಿ, ದಿನಾಂಕ ನಿಗದಿ ಮಾಡಿದ್ದೇವೆ, ನಾವು ಬಸವಣ್ಣ, ಕುವೆಂಪು, ಶಿಶುನಾಳ ಶರೀಫರು, ಕನಕದಾಸರ ನಾಡಿನವರು. ಕೊಟ್ಟ ಮಾತಿಗೆ ಬದ್ಧರಾಗಿರುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ ತಿಂಗಳ ವಿದ್ಯುತ್ ಬಳಕೆ ಉಚಿತವಾಗಲಿದ್ದು ಆಗಸ್ಟ್ ನಿಂದ ಬಿಲ್ ಕಟ್ಟುವಂತಿಲ್ಲ. ಸ್ವಂತ ಮನೆ ಹಾಗೂ ಬಾಡಿಗೆದಾರರಿಗೂ ಈ ಯೋಜನೆ ಅನ್ವಯವಾಗಲಿದೆ. ಯೋಜನೆ ದುರ್ಬಳಕೆ ತಡೆಯಲು 12 ತಿಂಗಳ ಸರಾಸರಿ ಆಧರಿಸಿ, ಅದಕ್ಕೆ ಶೇಕಡಾ 10 ರಷ್ಟು ಸೇರಿಸಿ, ಅದಕ್ಕೆ ಸಂಪೂರ್ಣ ಶುಲ್ಕ ವಿನಾಯಿತಿ. ಇಷ್ಟು ದಿನಗಳ ಕಾಲ 100 ಯೂನಿಟ್ ಬಳಸುತ್ತಿದ್ದವರು ಏಕಾಏಕಿ 200 ಯುನಿಟ್ ಬಳಕೆಗೆ ಅವಕಾಶವಿಲ್ಲ. ಇದುವರೆಗೂ ಅವರ ದೈನಂದಿನ ಜೀವನದಲ್ಲಿ ಬಳಸಲಾಗುತ್ತಿದ್ದಷ್ಟು ವಿದ್ಯುತ್ ಉಚಿತವಾಗಿ ಬಳಸಬಹುದಾಗಿದೆ ಎಂದರು.
ಗೃಹಲಕ್ಷ್ಮಿ ಯೋಜನೆಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಮೂಲಕ ಆನ್ಲೈನ್ ಹಾಗೂ ಆಫ್ ಲೈನ್ ಅರ್ಜಿ ಆಧರಿಸಿ ಆಗಸ್ಟ್ 15 ರಿಂದ ಜಾರಿಗೊಳಿಸಲಾಗುವುದು. ಜೂನ್ 15 ರಿಂದ ಜುಲೈ 15 ರೊಳಗೆ ದಾಖಲೆಗಳ ಜತೆ ಅರ್ಜಿ ಸಲ್ಲಿಸಬೇಕು. ನಂತರ ಅರ್ಜಿ ಹಾಗೂ ದಾಖಲೆ ಪರಿಶೀಲಿಸಿ ಯೋಜನೆ ಜಾರಿ.

ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದಾರರಿಗೆ ಈ ಯೋಜನೆ ಸಿಗುತ್ತೆ. ಮನೆ ಯಜಮಾನಿಯನ್ನು ಕುಟುಂಬದವರೇ ತೀರ್ಮಾನ ಮಾಡಬೇಕು.ಅಂಗವಿಕಲ, ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಭದ್ರತೆ ಪಿಂಚಣಿದಾರರಿಗೂ 2000 ರೂ. ಕೊಡುತ್ತೇವೆ ಎಂದರು.
ಜುಲೈ 1 ರಿಂದ ಎಲ್ಲ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ತಲಾ 10 ಕೆಜಿ ಆಹಾರ ಧಾನ್ಯ ಕೊಡುತ್ತೇವೆ. ಈ ತಿಂಗಳ ಪಡಿತರ ಆಹಾರ ಸಾಮಾಗ್ರಿ ರವಾನೆ ಆಗಿದ್ದು, ಈ ತಿಂಗಳಿಂದ ಅಕ್ಕಿ ಹಾಗೂ ಆಹಾರ ಧಾನ್ಯ ಸಂಗ್ರಹಣೆ ಮಾಡಲಾಗುವುದು. ಹೀಗಾಗಿ ಈ ಯೋಜನೆಯನ್ನು ಮುಂದಿನ ತಿಂಗಳಿನಿಂದ ಜಾರಿ ಮಾಡಲಾಗುವುದು.
ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂನ್ 11 ರಿಂದ ಕರ್ನಾಟಕ ರಾಜ್ಯದೊಳಗೆ ಉಚಿತ ಪ್ರಯಾಣ ಅವಕಾಶ ಕಲ್ಪಸಿಕೊಡಲಾಗಿದ್ದು, ರಾಜ್ಯದೊಳಗೆ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಸೇವೆಯನ್ನು ಬಳಸಬಹುದು. ಎಸಿ ಮತ್ತು ಐಶಾರಾಮಿ ಬಸ್ ಹೊರತುಪಡಿಸಿ ಸಾಮಾನ್ಯ ಬಸ್ ಗಳಿಗೆ ಮಾತ್ರ ಅನ್ವಯವಾಗುತ್ತದೆ. ಇನ್ನೂ ಕೆಎಸ್ಆರ್ ಟಿಸಿಯಲ್ಲಿ 50% ಸೀಟು ಪುರುಷರಿಗೆ ಮೀಸಲಿಡಲಾಗಿದೆ.

ಇನ್ನೂ ಯುವನಿಧಿ ಯೋಜನೆ 2023 ರಲ್ಲಿ ಪದವಿ ಪಾಸ್ ಮಾಡಿದವರಿಗೆ 24 ತಿಂಗಳು ಪ್ರತಿ ತಿಂಗಳು 3000, ಡಿಪ್ಲೋಮದಾರರಿಗೆ 1500 ರು ಭತ್ಯೆ. ತೃತೀಯ ಲಿಂಗಿಗಳಿಗೂ ಅನ್ವಯ. 18 ವರ್ಷದಿಂದ 25 ವರ್ಷದವರಿಗೆ ಅನ್ವಯ. ಅವರು ಅರ್ಜಿ ಹಾಕಬೇಕು. ಅರ್ಜಿ ಕೊಟ್ಟಾಗಿಂದ ಜಾರಿ. ಅರ್ಜಿ ಸಲ್ಲಿಸಲು 6 ತಿಂಗಳು ಕಾಲವಕಾಶ ಕಲ್ಪಸಲಾಗಿದ್ದು, ಸರ್ಕಾರಿ ನೌಕರರು ಹಾಗೂ ಇತರೆ ಸಂಘಸಂಸ್ಥೆಗಳು ನಮಗೆ ಈ ಯೋಜನೆಗಳು ಬೇಡ ಎಂದು ಅನೇಕರು ಸ್ವಇಚ್ಛೆಯಿಂದ ನಮಗೆ ಪತ್ರ ಬರೆದಿದ್ದು, ಅದಕ್ಕೂ ಅವಕಾಶ ನೀಡಲಾಗುವುದು. ಯೋಜನೆಯ ಲಾಭವನ್ನು ತ್ಯಜಿಸಲು ಇಚ್ಛಿಸಿದರೆ ಅದನ್ನು ಸರ್ಕಾರ ಸ್ವಾಗತ ಮಾಡಲಿದೆ ಎಂದರು.












Click it and Unblock the Notifications