ರಾಜಕೀಯ ದೊಂಬರಾಟದ ಮಧ್ಯೆ ನಾಳೆ ಬಹುಮತ ಸಾಬೀತು: ಯಡಿಯೂರಪ್ಪ
ಬೆಂಗಳೂರು, ಮೇ 18: ರಾಜಕೀಯ ಡೊಂಬಾರಟದ ಮಧ್ಯೆ ನಾಳೆ ಬಹುಮತ ಸಾಬೀತು ಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸದ ಮಾತುಗಳನ್ನಾಡಿದರು.
ಶನಿವಾರ ಸಂಜೆ 4 ಗಂಟೆ ಮೊದಲು ಸದನದಲ್ಲಿ ವಿಶ್ವಾಸ ಮತ ಯಾಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಿಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, "ನಾವು ಸುಪ್ರೀಂ ಕೋರ್ಟ್ ನ ಆದೇಶವನ್ನು ಪಾಲಿಸುತ್ತೇವೆ," ಎಂದು ಹೇಳಿದರು.
"ಈ ರಾಜಕೀಯ ದೊಂಬರಾಟದ ಮಧ್ಯೆ ನಾಳೆ ಬಹುಮತ ಸಾಬೀತು ಪಡಿಸುತ್ತೇವೆ. ನಮಗೆ ಬಹುಮತ ಸಾಬೀತು ಪಡಿಸುವ ಬಗ್ಗೆ ಶೇ. 100 ರಷ್ಟು ವಿಶ್ವಾಸ ಇದೆ. ಇದಕ್ಕಾಗಿ ಮುಖ್ಯ ಕಾರ್ಯದರ್ಶಿ ಜೊತೆಗೆ ಚರ್ಚಿಸಿ ನಾಳೆ ವಿಧಾನಸಭೆ ಅಧಿವೇಶನ ಕರೆಯುತ್ತೇವೆ. ಅಧಿವೇಶನ ಕರೆಯಲು ಇಂದು ಕ್ಯಾಬಿನೆಟ್ ಸಭೆಯಲ್ಲಿ ಸೂಚಿಸಲಾಗುವುದು. ಇದಕ್ಕಾಗಿ ಕ್ಯಾಬಿನೆಟ್ ಸಭೆ ಕರೆಯುತ್ತೇನೆ," ಎಂದು ಯಡಿಯೂರಪ್ಪ ತಿಳಿಸಿದರು.

ಇನ್ನು ಇದಕ್ಕೂ ಮೊದಲು ಮಾತನಾಡಿರುವ ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ಬಳಿ ಅಗತ್ಯ ಸಂಖ್ಯಾ ಬಲ ಇದೆ. ಸಂಖ್ಯಾ ಬಲ ಇಲ್ಲದೆ ಸರಕಾರ ರಚಿಸುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಶಾಸಕರನ್ನು ಹೈದರಾಬಾದ್ ಗೆ ಕರೆದುಕೊಂಡು ಹೋಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ಇದು ಅವರ ಹಕ್ಕು. ಅವರು ತಮ್ಮ ಶಾಸಕರನ್ನು ಬೇಕಿದ್ದರೆ ಪಾಕಿಸ್ತಾನಕ್ಕೂ ಕರೆದುಕೊಂಡು ಹೋಗಬಹುದು," ಎಂದಿದ್ದಾರೆ.












Click it and Unblock the Notifications