ಕೊರೊನಾ ನಿಯಂತ್ರಿಸಲು ವೈದ್ಯಕೀಯ ಕಾಲೇಜುಗಳಲ್ಲಿ ವಾರ್ ರೂಂ
ಬೆಂಗಳೂರು, ಮಾರ್ಚ್ 16 : "ರಾಜ್ಯದ ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾ ವಿರುದ್ಧ ಹೋರಾಟ ಮಾಡಲು ವಾರ್ ರೂಂ ರೀತಿ ತಯಾರಿ ಮಾಡಲಾಗುತ್ತದೆ" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಸೋಮವಾರ ವಿಧಾನಸೌಧದಲ್ಲಿ ಸಚಿವರು ಪತ್ರಿಕಾಗೋಷ್ಠಿ ನಡೆಸಿದರು. ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ವೈದ್ಯಕೀಯ ಶಿಕ್ಷಣ ಸಚಿವರು ಅಧಿಕಾರಿಗಳ ಜೊತೆ ತುರ್ತು ಸಭೆಯನ್ನು ನಡೆಸಿದರು. ಸರ್ಕಾರಿ ವೈದ್ಯಕೀಯ ಕಾಲೇಜುಗಳ ನಿರ್ದೇಶಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ಬಳಿಕ ಮಾತನಾಡಿದ ಸಚಿವ ಡಾ. ಕೆ. ಸುಧಾಕರ್, "ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಕೋವಿಡ್-19 ವಿರುದ್ಧ ಹೋರಾಟ ಮಾಡುಲು ವಾರ್ ರೂಂ ರೀತಿ ತಯಾರಿ ಮಾಡಲಾಗುತ್ತದೆ" ಎಂದು ವಿವರಣೆ ನೀಡಿದರು.

"ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲ್ಯಾಬ್, ಹೆಲ್ಪ್ ಡೆಸ್ಕ್ ಮಾಡಲಾಗುತ್ತದೆ. ಎರಡು, ಮೂರು ತಿಂಗಳ ಮಟ್ಟಿಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳುತ್ತೇನೆ" ಎಂದು ಸಚಿವರು ಹೇಳಿದರು.
"ಮುಂದುವರೆದ ದೇಶಗಳ ರೀತಿ ಕೊರೊನಾ ಸ್ಟೇಜ್ ಮೂರರ ಮಟ್ಟಕ್ಕೆ ತಲುಪಿದರೆ ಕಷ್ಟವಾಗುತ್ತದೆ. ಆ ನಿಟ್ಟಿನಲ್ಲೂ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದೇವೆ. ಸರ್ಕಾರಿ ಕಟ್ಟಡಗಳನ್ನು ಕೊರೊನಾ ತಡೆಗಟ್ಟಲು ಬಳಸಿಕೊಳ್ಳಲಾಗುತ್ತದೆ" ಎಂದು ಸಚಿವರು ವಿವರಿಸಿದರು.
"ಸಾಮಾನ್ಯ ನೆಗಡಿ, ಕೆಮ್ಮು, ಜ್ವರಕ್ಕೆ ಕೋವಿಡ್-19 ಅಂತಾ ಭಯ ಬೇಡ. ಯಾರು ವಿದೇಶದಿಂದ ಬಂದಿದ್ದಾರೆ, ಅವರ ಜೊತೆ ಯಾರು ಸಂಪರ್ಕದಲ್ಲಿದ್ದರೂ ಅವರು ಇಂತಹ ಲಕ್ಷಣಗಳು ಕಂಡು ಬಂದರೆ ಕೊರೊನಾ ಸೋಂಕಿನ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು" ಎಂದು ಸಚಿವರು ಕರೆ ನೀಡಿದರು.
"ಕೊರೊನಾ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ. ಜನರು ಸಹಾಯವಾಣಿ ಸಂಖ್ಯೆ 104ಕ್ಕೆ ಕರೆ ಮಾಡಿ ಕೋವಿಡ್-19 ಬಗ್ಗೆ ಯಾವುದೇ ಗೊಂದಲಗಳಿದ್ದರೂ ಬಗೆಹರಿಸಿಕೊಳ್ಳಬಹುದು" ಎಂದು ಸಚಿವರು ಹೇಳಿದರು.












Click it and Unblock the Notifications