ಸಿಟಿ ಲೂಟಿ, ಸಿದ್ದರಾಮಯ್ಯ ಕಚ್ಚೆಹರುಕ, ಪೆದ್ದ: ವಾಕ್ಸಮರ
ಬೆಂಗಳೂರು, ಸೆ 13: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಸಿ.ಟಿ.ರವಿ ಇನ್ನೊಂದು ಹೇಳಿಕೆಯನ್ನು ನೀಡಿದ್ದಾರೆ.
ಚುನಾವಣಾ ವರ್ಷವಾಗಿರುವುದರಿಂದ ರಾಜಕೀಯ ನಾಯಕರುಗಳ ಮಾತಿನ ಲಹರಿ ಎಗ್ಗಿಲ್ಲದಂತೇ ಸಾಗುತ್ತಿದೆ. ಮೊದಲು ಸಿದ್ದರಾಮಯ್ಯನವರು ಸಿ.ಟಿ.ರವಿ ವಿರುದ್ದ ಟೀಕೆಯನ್ನು ಮಾಡಿದ್ದರು. ಇದಕ್ಕೆ ಕೌಂಟರ್ ಕೊಡಲು ಹೋಗಿ ರವಿ, ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು.
ಇದಕ್ಕೆ ಸ್ವಪಕ್ಷೀಯ ಶಾಸಕರಿಂದಲೇ ವಿರೋಧ ವ್ಯಕ್ತವಾದಾಗ, ನಾನು ಹಾಗೆ ಹೇಳಿದ್ದಲ್ಲ, ಅವರು ಪ್ರಾಸಬದ್ದವಾಗಿ ಹೇಳಿದಾಗ, ನಾನೂ ಅದಕ್ಕೆ ಪ್ರಾಸಬದ್ದವಾಗಿ ಉತ್ತರ ನೀಡಬೇಕಲ್ಲವೇ ಎಂದು ಉಲ್ಟಾ ಹೊಡೆದಿದ್ದಾರೆ.
ರಾಜ್ಯ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಸಿ.ಟಿ.ರವಿಯವರನ್ನು ಲೂಟಿ ರವಿ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ಸಿ.ಟಿ.ರವಿ, ಸಿದ್ದರಾಮಯ್ಯನವರನ್ನು ಕಚ್ಚೆಹರುಕ ಎಂದು ತಿರುಗೇಟು ನೀಡಿದ್ದರು.

ಬಿಜೆಪಿಯವರು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ
"ಬಿಜೆಪಿಯವರು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ನಮ್ಮ ಬಗ್ಗೆ ಮಾತನಾಡಲು ಅವರಿಗೇನೂ ಸಿಗುತ್ತಿಲ್ಲ. ಆ ಸಿ.ಟಿ.ರವಿಯನ್ನು ಲೂಟಿ ರವಿ ಎಂದು ಕರೆಯುತ್ತಿದ್ದಾರೆ, ಇದು ನಾನು ಹೇಳುತ್ತಿರುವುದಲ್ಲ, ಚಿಕ್ಕಮಗಳೂರು ಭಾಗದಲ್ಲಿ ಹಾಗೇ ಅವರನ್ನು ಕರೆಯುತ್ತಿದ್ದಾರೆ"ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದರು. ಜನಸ್ಪಂದನ ಕಾರ್ಯಕ್ರಮದಲ್ಲಿ ಅರ್ಕಾವತಿ ರೀಡೂ ಪ್ರಕರಣದ ಬಗ್ಗೆ ಸಿ.ಟಿ.ರವಿ ಪ್ರಸ್ತಾವಿಸಿ, ಸಿದ್ದರಾಮಯ್ಯನವರ ಹೆಸರನ್ನು ಪರೋಕ್ಷವಾಗಿ ಸಿ.ಟಿ.ರವಿ ಎಳೆದು ತಂದಿದ್ದರು.

ಸಿದ್ದರಾಮಯ್ಯನವರನ್ನು ಮೈಸೂರು ಭಾಗದಲ್ಲಿ ಕಚ್ಚೆಹರುಕ ಎನ್ನುತ್ತಾರೆ
ಇದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ಸಿ.ಟಿ.ರವಿ, "ನ್ಯಾ.ಕೆಂಪಣ್ಣ ಆಯೋಗದ ವರದಿಯ ಸತ್ಯಾಸತ್ಯತೆ ಹೊರಗೆ ಬರಲಿ, ಆಗ ಇಲ್ಲಿ ಯಾರು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳು ಎನ್ನುವುದು ಜನರಿಗೆ ಗೊತ್ತಾಗಲಿದೆ. ಸಿದ್ದರಾಮಯ್ಯನವರನ್ನು ಮೈಸೂರು ಭಾಗದಲ್ಲಿ ಕಚ್ಚೆಹರುಕ ಎಂದು ಕರೆಯುತ್ತಾರೆ, ನಾನು ಹೇಳಿದ್ದಲ್ಲ"ಎಂದು ಸಿದ್ದರಾಮಯ್ಯನವರಿಗೆ ಸಿ.ಟಿ.ರವಿ ಟಾಂಗ್ ನೀಡಿದ್ದರು.

ಬಿಜೆಪಿಯ ಎಚ್.ವಿಶ್ವನಾಥ್ ಸೇರಿದಂತೆ ಹಲವರು ಆಕ್ರೋಶ
ಸಿ.ಟಿ.ರವಿಯವರ ಕಚ್ಚೆಹರುಕ ಹೇಳಿಕೆಗೆ ಬಿಜೆಪಿಯ ಎಚ್.ವಿಶ್ವನಾಥ್ ಸೇರಿದಂತೆ ಹಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, "ನಾನು ಹಾಗೇ ಹೇಳಿದ್ದಲ್ಲ. ಅವರು ಪ್ರಾಸಬದ್ಧವಾಗಿ ಸಿಟಿಗೆ ಲೂಟಿ ಎಂದು ಕರೆದರೆ, ನಾನು ಸಿದ್ದಗೆ ಪೆದ್ದ ಅನ್ನಬೇಕಲ್ಲವೇ? ಮೈಸೂರು ಭಾಗದ ಎಚ್.ವಿಶ್ವನಾಥ್ ಅವರು ಬರುತ್ತಾರೆ. ಅವರೂ ಮೈಸೂರು ಭಾಗದವರು, ಅವರಿಗೆ ಆ ಬಗ್ಗೆ ಹೆಚ್ಚಿನ ಅರಿವಿದೆ"ಎಂದು ರವಿ ಉಲ್ಟಾ ಹೊಡೆದಿದ್ದಾರೆ.

ಸಿದ್ದರಾಮಯ್ಯನವರ ವಯಸ್ಸೇನು, ಸಿ.ಟಿ.ರವಿಯವರ ವಯಸ್ಸೇನು
"ಸಿದ್ದರಾಮಯ್ಯನವರ ವಯಸ್ಸೇನು, ಸಿ.ಟಿ.ರವಿಯವರ ವಯಸ್ಸೇನು? ರಾಜಕಾರಣದಲ್ಲಿ ಮಾತಿಗೂ ಒಂದು ಇತಿಮಿತಿ ಇರಬೇಕು"ಎಂದು ಎಚ್.ವಿಶ್ವನಾಥ್, ರವಿ ಹೇಳಿಕೆಯನ್ನು ವಿರೋಧಿಸಿದ್ದರು. "ಇದು ಬಿಜೆಪಿಯ ಶೋಚನೀಯ ಸ್ಥಿತಿ, ಸಿ.ಟಿ.ರವಿಯವರಿಗೆ ಗೌರವ ತರುವಂತದ್ದಲ್ಲ. ಸಿದ್ದರಾಮಯ್ಯನವರು ಹಿರಿಯರಿದ್ದಾರೆ, ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಜನ ಅದನ್ನು ಸಹಿಸಿಕೊಳ್ಳುವುದಿಲ್ಲ"ಎಂದು ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications